ಮುಷ್ಕರ: 200 ಪ್ರತಿಭಟನಕಾರರ ಬಂಧನ, ಬಿಡುಗಡೆ
Team Udayavani, Jan 9, 2020, 3:00 AM IST
ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಜನ ವಿರೋಧಿ ನೀತಿಗಳನ್ನು ದೇಶವ್ಯಾಪ್ತಿ 12 ವಿವಿಧ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಅಖೀಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬುಧವಾರ ಜಿಲ್ಲೆಯಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಪೊಲೀಸ್ ಬಲ ಪ್ರಯೋಗಕ್ಕೆ ಮುಷ್ಕರ ಜನ ಜೀವನದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ. ಜಿಲ್ಲಾದ್ಯಂತ ಮುಷ್ಕರ ಶಾಂತಿಯುವಾಗಿ ಪ್ರತಿಭಟನೆಗೆ ಸೀಮಿತಗೊಂಡಿತು. ಆರು ತಾಲೂಕುಗಳಲ್ಲಿ ಅಸಂಘಟಿತ ಕಾರ್ಮಿಕರು, ವಿದ್ಯಾರ್ಥಿ ಯುವ ಜನತೆ, ಸ್ಕೀಂ ನೌಕರರು ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ತಮ್ಮ ಆಕ್ರೋಶ ಮೊಳಗಿಸಿದರು. ಚಿಕ್ಕಬಳ್ಳಾಪುರದಲ್ಲಿ ರಸ್ತೆ ತಡೆ ನಡೆಸಿದ 200 ಕ್ಕೂ ಹೆಚ್ಚು ಕಾರ್ಮಿಕರನ್ನು ಹಾಗೂ ಬಿಸಿಯುಟ, ಅಂಗನವಾಡಿ ಕಾರ್ಯಕರ್ತೆಯರನ್ನು ಪೊಲೀಸರು ಬಂಧಿಸಿ ಸಂಜೆ ಬಿಡುಗಡೆಗೊಳಿಸಿದ್ದು ಬಿಟ್ಟರೆ ಜಿಲ್ಲಾದ್ಯಂತ ಮುಷ್ಕರ ಶಾಂತಿಯುತವಾಗಿ ತೆರೆ ಕಂಡಿತು.
ಚಿಕ್ಕಬಳ್ಳಾಪುರ: ಪ್ರತಿಭಟನಕಾರರಿಗೆ ಎಲ್ಲೆಡೆ ಪೊಲೀಸರ ದಿಗ್ಬಂಧನ, ರಸ್ತೆ ತಡೆ ನಡೆಸಿದ 200 ಕ್ಕೂ ಹೆಚ್ಚು ಕಾರ್ಮಿಕರ ಮುಖಂಡರ, ಕಾರ್ಯಕರ್ತರ ಬಂಧನ. ಪೊಲೀಸ್ ಬಲ ಪ್ರಯೋಗಕ್ಕೆ ಜಿಲ್ಲಾದ್ಯಂತ ಅಖೀಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ, ಮುಷ್ಕರ ನಡುವೆಯು ಜಿಲ್ಲಾದ್ಯಂತ ಜನ ಜೀವನ ಎಂದಿನಂತೆ ಯಥಾಸ್ಥಿತಿ, ಕಾರ್ಮಿಕ ಕಾನೂನುಗಳ ತಿದ್ದುಪಡಿಗೆ ಹೊರಟ ಕೇಂದ್ರದ ವಿರುದ್ಧ ಮೊಳಗಿದ ಆಕ್ರೋಶ. ಧಿಕ್ಕಾರ, ಕನಿಷ್ಠ ವೇತನ, ಸೇವಾ ಭದ್ರತೆಗೆ ಕಾರ್ಮಿಕರ ಒಕ್ಕೊರಲಿನ ಆಗ್ರಹ.
ಸಿಐಟಿಯು, ಪ್ರಾಂತ ರೈತ ಸಂಘ, ಕೃಷಿ ಕೂಲಿಕಾರರ ಸಂಘ, ಅಂಗನವಾಡಿ, ಬಿಸಿಯೂಟ, ಗ್ರಾಪಂ ನೌಕರರು ಸೇರಿದಂತೆ ದೇಶದ 12 ಪ್ರಮುಖ ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಕರೆ ನೀಡಿದ್ದ ಮುಷ್ಕರ ವೇಳೆ ಜಿಲ್ಲೆಯಲ್ಲಿ ಕಂಡು ಬಂದ ದೃಶ್ಯಗಳು ಇವು. ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ ಹೊರತುಪಡಿಸಿದರೆ ಜಿಲ್ಲೆಯ ಬೇರೆ ಯಾವುದೇ ತಾಲೂಕುಗಳಲ್ಲಿ ಸಾರ್ವತ್ರಿಕ ಮುಷ್ಕರದ ಬಿಸಿ ಅಷ್ಟೊಂದು ತಟ್ಟಲಿಲ್ಲ. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಕಾರ್ಮಿಕರು ರ್ಯಾಲಿ ನಡೆಸಿದರೆ, ಶಿಡ್ಲಘಟ್ಟ, ಚಿಂತಾಮಣಿಯಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.
ಜನ ಜೀವನ ಯಥಾಸ್ಥಿತಿ: ಸಾರ್ವತ್ರಿಕ ಮುಷ್ಕರದ ಬಗ್ಗೆ ವ್ಯಾಪಕ ಪ್ರಚಾರ ನಡೆಸಿದರೂ ಜಿಲ್ಲೆಯಲ್ಲಿ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ಕಂಡು ಬಂತು. ಜಿಲ್ಲಾದ್ಯಂತ ಬಂದ್ ಆಚರಣೆಗೆ ಅವಕಾಶ ನೀಡದಂತೆ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಕಟ್ಟೆಚ್ಚರ ವಹಿಸುವಂತೆ ನೀಡಿದ್ದ ಆದೇಶ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾರ್ವತ್ರಿಕ ಮುಷ್ಕರವನ್ನು ಪೊಲೀಸ್ ಬಲ ಪ್ರಯೋಗ ವಿಫಲಗೊಳಿಸಿತು ಎಂಬ ಆರೋಪ ಪ್ರತಿಭಟನಕಾರರಿಂದ ಕೇಳಿ ಬಂತು. ಆದ್ದರಿಂದ ಬಂದ್ ಬಿಸಿಯಿಂದ ಜಿಲ್ಲೆಯ ಜನತೆ ಪಾರಾದರು.
ಎಂದಿನಂತೆ ಜಿಲ್ಲಾದ್ಯಂತ ಕೆಎಸ್ಆರ್ಟಿಸಿ, ಖಾಸಗಿ ಬಸ್ ಮತ್ತಿತರ ವಾಜನಗಳ ಓಡಾಟ ಯಾವುದೇ ಅಡ್ಡಿ, ಆತಂಕ ಇಲ್ಲದೇ ಮಾಮೂಲಿಯಂತೆ ಸಂಚರಿಸಿದವು. ಹೋಟೆಲ್, ಸಿನಿಮಾ ಮಂದಿರಗಳು, ಪೆಟ್ರೋಲ್ ಬಂಕ್, ಎಪಿಎಂಸಿ ಮಾರುಕಟ್ಟೆಗಳಲ್ಲಿ ವಹಿವಾಟು ನಡೆದವು, ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡದ ಕಾರಣ ಶಾಲಾ, ಕಾಲೇಜುಗಳು ಕಾರ್ಯ ನಿರ್ವಹಿಸಿದರೂ ವಿದ್ಯಾರ್ಥಿಗಳ ಹಾಜರಾತಿ ಮಾತ್ರ ವಿರಳವಾಗಿತ್ತು.
ಬಾಗೇಪಲ್ಲಿ, ಗುಡಿಬಂಡೆಯಲ್ಲಿ ಅರ್ಧ ಬಂದ್ ಬಿಸಿ: ಜಿಲ್ಲೆಯಲ್ಲಿ ಎಡಪಕ್ಷಗಳ ಪ್ರಭಾವ ಇರುವ ಬಾಗೇಪಲ್ಲಿ, ಗುಡಿಬಂಡೆಯಲ್ಲಿ ಪ್ರತಿಭಟನಕಾರರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಎಡಪಕ್ಷಗಳ ಬೆಂಬಲಿತ ಅಂಗಡಿ ವರ್ತಕರು ಸ್ವಯಂ ಪ್ರೇರಣೆಯಿಂದ ಅಂಗಡಿಗಳ ಬಾಗಿಲು ತೆರೆಯದೇ ಬಂದ್ಗೆ ಬೆಂಬಲ ನೀಡಿದರು. ಗುಡಿಬಂಡೆಯಲ್ಲಿ ಮಧ್ಯಾಹ್ನದವರೆಗೂ ಸ್ವಲ್ಪ ಬಂದ್ ಬಿಸಿ ಇತ್ತು. ಉಳಿದಂತೆ ಶಿಡ್ಲಘಟ್ಟದಲ್ಲಿ ಅಂಗನವಾಡಿ, ಆಶಾ, ಗ್ರಾಪಂ ಹಾಗೂ ಬಿಸಿಯೂಟ ನೌಕರರು ನೂರಾರು ಸಂಖ್ಯೆಯಲ್ಲಿ ಬಸ್ ನಿಲ್ದಾಣದಿಂದ ತಾಲೂಕು ಕಚೇರಿವರೆಗೂ ಪ್ರತಿಭಟನಾ ರ್ಯಾಲಿ ನಡೆಸಿದರು.
ಚಿಂತಾಮಣಿಯಲ್ಲಿ ಗ್ರಾಪಂ, ಡಿವೈಎಫ್ಐ ಹಾಗೂ ರೈತಪರ ಸಂಘಟನೆಗಳ ಕಾರ್ಯಕರ್ತರು ನಗರದ ಮುಖ್ಯ ರಸ್ತೆಗಳಲ್ಲಿ ರ್ಯಾಲಿ ನಡೆಸಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಗೌರಿಬಿದನೂರಲ್ಲಿ ಸಹ ಸಿಐಟಿಯು, ಗ್ರಾಪಂ ನೌಕರರು, ಸಿಪಿಎಂ ಪಕ್ಷದ ಕಾರ್ಯಕರ್ತರು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಕೇಂದ್ರದ ಕಾರ್ಮಿಕ ನೀತಿಗಳನ್ನು ಖಂಡಿಸಿದರು.
ಬಂದ್ಗೆ ವಿವಿಧ ಸಂಘಟನೆಗಳ ಬಲ: ಜಿಲ್ಲೆಯಲ್ಲಿ ಪ್ರಮುಖವಾಗಿ ಸಿಪಿಎಂ, ಸಿಐಟಿಯು, ಕೃಷಿ ಕೂಲಿಕಾರರ ಸಂಘ, ಪ್ರಾಂತ ರೈತ ಸಂಘ, ಗ್ರಾಪಂ ನೌಕರರ ಸಂಘ, ಅಕ್ಷರ ದಾಸೋಹ ನೌಕರರ ಸಂಘ, ಅಂಗನವಾಡಿ ನೌಕರರ ಸಂಘ, ಆಶಾ ಕಾರ್ಯಕರ್ತೆಯರು, ಡಿವೈಎಫ್ಐ, ಎಸ್ಎಫ್ಐ, ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತ ಸಂಘದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಬಿಗಿ ಪೊಲೀಸ್ ಭದ್ರತೆ: ಮುಷ್ಕರ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾದ್ಯಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ನೇತೃತ್ವದಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಆಯಕಟ್ಟಿನ ಸ್ಥಳಗಳಲ್ಲಿ ಏರ್ಪಡಿಸಲಾಗಿತ್ತು. ಜಿಲ್ಲಾ ಕೇಂದ್ರದಲ್ಲಿ ಸಿಪಿಐ ಸುದರ್ಶನ್, ಪಿಎಸ್ಐ ವರುಣ್ ಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್ ವಹಿಸಿದ್ದರು. ಭದ್ರತೆಗೆ ಸುಮಾರು 500 ಕ್ಕೂ ಹೆಚ್ಚು ಪೊಲೀಸರನ್ನು ಹಾಗೂ 6 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಪ್ರತಿಭಟನಕಾರರಿಂದ ರಸ್ತೆಯಲ್ಲಿ ಊಟ: ಕೇಂದ್ರದ ಬಿಜೆಪಿ ಸರ್ಕಾರದ ಕಾರ್ಮಿಕ ನೀತಿಗಳ ವಿರುದ್ಧ ತೀವ್ರ ಪ್ರತಿಭಟನೆ ದಾಖಲಿಸಿದ ಜಿಲ್ಲೆಯ ಅಂಗನವಾಡಿ, ಬಿಸಿಯೂಟ ಹಾಗೂ ಗ್ರಾಪಂ ನೌಕರರು ಜಿಲ್ಲಾ ಕೇಂದ್ರದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸುವ ಮೂಲಕ ಕೇಂದ್ರದ ವಿರುದ್ಧ ಬಿಸಿಲಿನಲ್ಲಿಯೇ ಕೂತು ರಸ್ತೆ ತಡೆ ನಡೆಸಿದರು. ರಸ್ತೆಯಲ್ಲಿ ಕುಳಿತು ಉಟ ಮಾಡಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.
ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೂ ರಸ್ತೆಯಲ್ಲಿಯೇ ಕುಳಿತು ಧರಣಿ ನಡೆಸಿ ಅಸಂಘಟಿತ ಕಾರ್ಮಿಕರಿಗೆ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, ಗುತ್ತಿಗೆ, ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸುವಂತೆ ಹಾಗೂ ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸುವಂತೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಕಡಿತ ಮಾಡಿರುವ ಅನುದಾನವನ್ನು ವಾಪಸ್ಸು ಕೊಡುವಂತೆ ಕೇಂದ್ರ ಸರ್ಕಾರ ಆಗ್ರಹಿಸಿ ಘೋಷಣೆ ಕೂಗಿ ಗಮನ ಸೆಳೆದರು.
200 ಮಂದಿ ಪ್ರತಿಭಟನಕಾರರ ಬಂಧನ: ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆ ನಡೆಸಿದ ಸುಮಾರು 200 ಕ್ಕೂ ಹೆಚ್ಚು ಎಡಪಕ್ಷಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಸಂಜೆ 4 ಗಂಟೆಗೆ ಬಿಡುಗಡೆಗೊಳಿಸಿದರು. ನಗರದ ಎಂಜಿ ರಸ್ತೆಗೆ ಅಡ್ಡವಾಗಿ ಪ್ರತಿಭಟನೆ ನಡೆಸಿದ ಕೃಷಿ ಕೂಲಿಕಾರರ ಸಂಘದ ಮುಖಂಡ ಎಂ.ಪಿ.ಮುನಿವೆಂಕಟಪ್ಪ, ಸಿಪಿಎಂ ಜಿಲ್ಲಾಧ್ಯಕ್ಷ ಜಯರಾಮರೆಡ್ಡಿ, ಡಾ.ಅನಿಲ್ ಕುಮಾರ್,
ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಬಿಸಿಯೂಟ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಮಂಜುಳಾ, ಎಸ್ಎಫ್ಐ ಜಿಲ್ಲಾ ಸಂಚಾಲಕ ಸೋಮಶೇಖರ್ ಸೇರಿದಂತೆ ಗ್ರಾಪಂ ಹಾಗೂ ಅಂಗನವಾಡಿ ನೌಕರರ ಸಂಘದ ಮುಖಂಡರನ್ನು ಪೊಲೀಸರು ಬಂಧಿಸಿದರು. ಕೆಎಸ್ಆರ್ಪಿ ವಾಹನಕ್ಕೆ ಪ್ರತಿಭಟನಕಾರನ್ನು ತುಂಬಿಸಿದರೂ ಸಾಲದಿದ್ದಕ್ಕೆ ಖಾಸಗಿ ಬಸ್ ಕರೆಸಿ ಪ್ರತಿಭಟಕಾರನ್ನು ನಗರ ಠಾಣೆಗೆ ಕರೆದೊಯ್ದರು.
ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದರೂ ರೈತರ, ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಕಾರ್ಮಿಕ ಕಾನೂನುಗಳ ತಿದ್ದುಪಡಿ ಹೆಸರಿನಲ್ಲಿ ಕಾರ್ಮಿಕರಿಗೆ ಸೇವಾ ಭದ್ರತೆ ಹಾಗೂ ಕನಿಷ್ಠ ವೇತನ ಕೊಡದೇ ದ್ರೋಹ ಬಗೆಯುತ್ತಿದೆ. ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದರಿಂದ ದೇಶದಲ್ಲಿ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿ ಉದ್ಯೋಗ ನಾಶವಾಗಿದೆ.
-ಎಂ.ಪಿ.ಮುನಿವೆಂಕಟಪ್ಪ, ಕೃಷಿ ಕೂಲಿಕಾರರ ಸಂಘದ ಮುಖಂಡರು
ನಮ್ಮ ಹೋರಾಟವನ್ನು ಎದುರಿಸಲಾಗದೇ ಸಿಎಂ ಯಡಿಯೂರಪ್ಪ ಪೊಲೀಸ್ ಬಲ ಪ್ರಯೋಗದಿಂದ ಮುಷ್ಕರವನ್ನು ವಿಫಲಗೊಳಿಸಿದ್ದಾರೆ. ಮುಂದೊಂದು ದಿನ ದೇಶದ ಆರ್ಥಿಕ ನೀತಿಗಳ ವಿರುದ್ಧ ಕೃಷಿ ಕೂಲಿ ಕಾರ್ಮಿಕರು, ವರ್ತಕರೇ ಬೀದಿಗೆ ಬಂದು ಹೋರಾಟ ನಡೆಸುವ ದಿನಗಳು ದೂರವಿಲ್ಲ. ಕಾರ್ಮಿಕರನ್ನು ಬೀದಿಗೆ ತಳ್ಳುತ್ತಿರುವ ಕೇಂದ್ರ ಸರ್ಕಾರಕ್ಕೆ ಉಳಿಗಾವಿಲ್ಲ.
-ಡಾ.ಅನಿಲ್ ಕುಮಾರ್, ಸಾಮಾಜಿಕ ಹೋರಾಟಗಾರರು
ಜಿಲ್ಲೆಯಲ್ಲಿ ಅಖೀಲ ಭಾರತ ಸಾರ್ವತ್ರಿಕ ಮುಷ್ಕರ ಶಾಂತಿಯುತವಾಗಿ ನಡೆದಿದೆ. ನಾವು ಯಾರನ್ನು ಬಲವಂತದಿಂದ ಮನೆಗಳಿಗೆ ನುಗ್ಗಿ ಹೋರಾಟಗಾರರನ್ನು ಬಂಧಿಸಿಲ್ಲ. ಹೋರಾಟಗಾರರು ಕೂಡ ನಮಗೆ ಸಹಕರಿಸಿ ಶಾಂತಿಯುವಾಗಿ ಪ್ರತಿಭಟನಾ ಧರಣಿ ನಡೆಸಿದ್ದಾರೆ. ಎಲ್ಲೂ ಕೂಡ ಅಹಿತಕರ ಘಟನೆಗಳು ನಡೆದಿಲ್ಲ. ಮುಷ್ಕರ ಶಾಂತಿಯುತವಾಗಿ ಮುಗಿದಿದೆ.
-ಅಭಿನವ ಖರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
* ಕಾಗತಿ ನಾಗರಾಜಪ್ಪ