ಭಾರತೀಯನ ಶಿರಚ್ಛೇದ: ಮೋದಿ ಮೌನ ಪ್ರಶ್ನಿಸಿದ ಕಾಂಗ್ರೆಸ್
Team Udayavani, Jan 12, 2020, 9:58 PM IST
ನವದೆಹಲಿ: ಭಾರತ-ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನದ ಗಡಿ ಕಾರ್ಯಾಚರಣೆ ಪಡೆ (ಬ್ಯಾಟ್), ಭಾರತದ ನಾಗರಿಕನೊಬ್ಬನ ಶಿರಚ್ಛೇದ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಯಾವುದೇ ಪ್ರತಿಕ್ರಿಯೆ ನೀಡದಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ, “”ಪಾಕಿಸ್ತಾನ ಯೋಧರು ಭಾರತೀಯ ಕೂಲಿಯಾಳುವೊಬ್ಬನ ಶಿರಚ್ಛೇದ ಮಾಡಿ, ಇಬ್ಬರು ಭಾರತೀಯ ಯೋಧರನ್ನೂ ಹತ್ಯೆಗೈದಿದ್ದಾರೆ. ಈ ಬಗ್ಗೆ ಪ್ರಧಾನಿಯಾಗಲೀ, ಕೇಂದ್ರ ಗೃಹ ಸಚಿವರಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಾಕಿಸ್ತಾನದ ಈ ಹೇಯ ಕೃತ್ಯದ ಬಗ್ಗೆ ಮೋದಿಯವರ ಸರ್ಕಾರ ಏಕೆ ಮೌನವಾಗಿದೆ? ಈ ಮೌನವನ್ನು ಮಾಧ್ಯಮಗಳೂ ಏಕೆ ಪ್ರಶ್ನೆ ಮಾಡುತ್ತಿಲ್ಲ” ಎಂದು ಪ್ರಶ್ನಿಸಿದ್ದಾರೆ.
“”ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರದ ಸ್ಥಿತಿಗತಿಗಳನ್ನು ನೋಡಿಕೊಂಡು ಪಾಕಿಸ್ತಾನದ ಸೇನೆಯ ಕೈಯ್ಯಲ್ಲಿ ಹುತಾತ್ಮರಾಗುವ ಭಾರತೀಯ ಯೋಧರ ಸುದ್ದಿಗಳನ್ನು ಬಿತ್ತರಿಸಬೇಕೇ, ಬೇಡವೇ ಎಂಬುದನ್ನು ಮಾಧ್ಯಮಗಳು ನಿರ್ಧರಿಸುತ್ತವೆಯೇ? ಪಾಕಿಸ್ತಾನದ ಈ ಹೇಯ ಕೃತ್ಯಕ್ಕೆ ಪ್ರತೀಕಾರ ಯಾವಾಗ? ಭಾರತೀಯ ಯೋಧರ ಒಂದು ತಲೆಗೆ ಪ್ರತಿಯಾಗಿ ಪಾಕ್ ಸೈನಿಕರ 10 ತಲೆಗಳನ್ನು ತರುತ್ತೇವೆ ಎಂಬ ವೀರಾವೇಶದ ಮಾತುಗಳು ಈಗ ಎಲ್ಲಿ ಹೋದವು?” ಎಂದು ಅವರು ಖಾರವಾಗಿ ಕೇಳಿದ್ದಾರೆ.