ಕಾಶ್ಮೀರಿ ನಾಯಕರ ಬಿಡುಗಡೆ ಮಾಡಿ ಎಲ್ಲರಿಗೂ ಸಮಾನ ರಕ್ಷಣೆ ನೀಡಿ: ಅಮೆರಿಕ
Team Udayavani, Jan 25, 2020, 7:44 PM IST
ವಾಷಿಂಗ್ಟನ್/ಜೈಪುರ: ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಆರೋಪ ಎದುರಿಸದೇ ಬಂಧನದಲ್ಲಿರುವ ರಾಜಕೀಯ ನಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಪೌರತ್ವ ಕಾಯ್ದೆಯಡಿ ಧರ್ಮದ ಹಂಗಿಲ್ಲದೇ ಎಲ್ಲರಿಗೂ ಸಮಾನ ರಕ್ಷಣೆ ನೀಡಬೇಕು ಎಂದು ಭಾರತ ಸರ್ಕಾರಕ್ಕೆ ಅಮೆರಿಕ ಕೋರಿದೆ.
ದೆಹಲಿಯಲ್ಲಿ ರೈಸಿನಾ ಡೈಲಾಗ್ನಲ್ಲಿ ಭಾಗವಹಿಸಿ ಅಮೆರಿಕಕ್ಕೆ ವಾಪಸಾಗಿರುವ ದಕ್ಷಿಣ ಮತ್ತು ಕೇಂದ್ರ ಏಷ್ಯಾದ ವಿದೇಶಾಂಗ ಇಲಾಖೆ ಸಹಾಯಕ ಸಚಿವೆ(ಹಂಗಾಮಿ) ಅಲೀಸ್ ವೆಲ್ಸ್ ಅವರು ಶನಿವಾರ ಸುದ್ದಿಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆಯನ್ನು ಭಾಗಶಃ ಪುನಾರಂಭಿಸಿರುವ ವಿಚಾರ ಕೇಳಿ ಸಂತೋಷವಾಗಿದೆ. ಅಮೆರಿಕ ಸೇರಿದಂತೆ ವಿವಿಧ ದೇಶಗಳ ರಾಯಭಾರಿಗಳಿಗೆ ಕಣಿವೆ ರಾಜ್ಯಕ್ಕೆ ಭೇಟಿ ನೀಡಲು ಅವಕಾಶ ಕೊಟ್ಟಿರುವುದೂ ಉತ್ತಮ ಬೆಳವಣಿಗೆಯಾಗಿದೆ. ಆದರೆ, ಯಾವುದೇ ಆರೋಪವಿಲ್ಲದೇ ಬಂಧನದಲ್ಲಿರುವ ರಾಜಕೀಯ ನಾಯಕರಲ್ಲಿ ಭಾರತ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಅಲೀಸ್ ಹೇಳಿದ್ದಾರೆ.
ಜತೆಗೆ, ಭಾರತ ಭೇಟಿಯಿಂದಾಗಿ ಸಿಎಎ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಾಯಿತು. ಕಾನೂನಿನಡಿ ಎಲ್ಲರಿಗೂ ಸಮಾನ ರಕ್ಷಣೆ ಸಿಗಬೇಕು ಎನ್ನುವುದು ನಮ್ಮ ಅಭಿಪ್ರಾಯ ಎಂದಿದ್ದಾರೆ ಅಲೀಸ್.
ರಾಜಸ್ಥಾನದಲ್ಲೂ ನಿರ್ಣಯ
ಕೇರಳ, ಪಂಜಾಬ್ ಬಳಿಕ ರಾಜಸ್ಥಾನ ವಿಧಾನಸಭೆ ಕೂಡ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದೆ. ಕೇಂದ್ರ ಸರ್ಕಾರ ಕೂಡಲೇ ಈ ಕಾನೂನನ್ನು ವಾಪಸ್ ಪಡೆಯಬೇಕು ಎಂದು ನಿರ್ಣ¿ಏುದಲ್ಲಿ ಕೋರಲಾಗಿದೆ.