ಮಂಗಳೂರು ಗೋಲಿಬಾರ್: ಮ್ಯಾಜಿಸ್ಟೀರಿಯಲ್ ವಿಚಾರಣೆ
ಸಾಕ್ಷಿಗಳ ಹೇಳಿಕೆ, ವೀಡಿಯೋ ದಾಖಲು
Team Udayavani, Feb 14, 2020, 7:20 AM IST
ಮಂಗಳೂರು: ನಗರದಲ್ಲಿ ಡಿಸೆಂಬರ್ 19ರಂದು ನಡೆದ ಅಹಿತಕರ
ಘಟನೆ ಮತ್ತು ಪೊಲೀಸ್ ಗೋಲಿಬಾರ್ ಕುರಿತ ಮ್ಯಾಜಿಸ್ಟೀರಿಯಲ್ ತನಿಖೆಯ ಭಾಗವಾಗಿ ಗುರುವಾರ ಮಂಗಳೂರು ಸಹಾಯಕ ಆಯುಕ್ತರ ಕೋರ್ಟ್ ಹಾಲ್ನಲ್ಲಿ ಸಾಕ್ಷಿಗಳ ವಿಚಾರಣೆ ನಡೆಯಿತು.
ಮ್ಯಾಜಿಸ್ಟೀರಿಯಲ್ ತನಿಖೆಗೆ ನೇಮಕಗೊಂಡಿರುವ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಸಾಕ್ಷಿಗಳ ಹೇಳಿಕೆಗಳನ್ನು ಹಾಗೂ ಪೊಲೀಸರಿಂದ ವೀಡಿಯೋ ಸಾಕ್ಷ್ಯದ ತುಣುಕುಗಳನ್ನು ಸ್ವೀಕರಿಸಿ ದಾಖಲಿಸಿಕೊಂಡರು.
ಪೊಲೀಸರ ಪರ ನೋಡಲ್ ಅಧಿಕಾರಿ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಕೆ.ಯು. ಬೆಳ್ಳಿಯಪ್ಪ ವೀಡಿಯೋಗಳನ್ನು ಹಾಜರು ಪಡಿಸಿದರು.
ಫೆ. 6ರಂದು ಸಾಕ್ಷಿ ಹೇಳಿಕೆ ನೀಡಲು ತಡವಾಗಿ ಬಂದಿದ್ದ 8 ಮಂದಿಗೆ ಫೆ. 13ರಂದು ಸಾಕ್ಷಿ ಹೇಳಿಕೆ ನೀಡಲು ಅವಕಾಶ ನೀಡಲಾಗಿತ್ತು. ಆದರೆ ಗುರು
ವಾರ ಕೇವಲ ಇಬ್ಬರು ಮಾತ್ರ ಲಿಖೀತ ಹೇಳಿಕೆ ನೀಡಿದರು. ಇನ್ನೋರ್ವ ವ್ಯಕ್ತಿ ಮೊಬೈಲ್ ಧ್ವನಿ ಮುದ್ರಿಕೆ ಹಾಜರು ಪಡಿಸಿದರು.
ಒಟ್ಟು 203 ಮಂದಿ ಸಾಕ್ಷ್ಯ
ವಿಚಾರಣೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜಗದೀಶ್ ಅವರು, ಈ ಮೊದಲು 201 ಮಂದಿ ಸಾಕ್ಷಿ ನುಡಿದು ಸಾಕ್ಷ್ಯಗಳನ್ನು ಹಾಜರು ಪಡಿಸಿದ್ದರು. ಗುರುವಾರ ಇಬ್ಬರು ಸಾಕ್ಷ್ಯ ನುಡಿದಿದ್ದಾರೆ. ಈ ತನಕ ಒಟ್ಟು 203 ಮಂದಿ ಸಾಕ್ಷ್ಯ ನುಡಿದಂತಾಗಿದೆ ಎಂದು ತಿಳಿಸಿದರು.
ಎಸಿಪಿ ಬೆಳ್ಳಿಯಪ್ಪ ಅವರು 50 ವೀಡಿಯೋ ತುಣುಕುಗಳ ಪೆನ್ಡ್ರೈವ್ ಮತ್ತು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಸಿಸಿ ಟಿವಿ ಫುಟೇಜ್ಗಳ 23 ಸಿಡಿಆರ್ಗಳಿಗೆ ಸಂಬಂಧಿಸಿದ ಸ್ವೀಕೃತಿಯನ್ನು ಸಲ್ಲಿಸಿದ್ದಾರೆ ಎಂದರು.
ಕೇವಲ 1 ವೀಡಿಯೊ!
ಹೈಕೋರ್ಟ್ ಸೂಚನೆಯಂತೆ ವೀಡಿಯೋ ತುಣುಕು, ಸಿಸಿಟಿವಿ ಫುಟೇಜ್ಗಳನ್ನು ಹಾಜರುಪಡಿಸಲು ಸಾರ್ವಜನಿಕರು, ಮಾಧ್ಯಮ, ಪೊಲೀಸರಿಗೆ ಸೂಚಿಸಲಾಗಿತ್ತು. ಆದರೆ ಸಾರ್ವಜನಿಕರ ಪರವಾಗಿ ಓರ್ವ ಮಾತ್ರ ಮೊಬೈಲ್ ರೆಕಾರ್ಡಿಂಗ್ನ ತುಣುಕನ್ನು ಹಾಜರುಪಡಿಸಿದ್ದಾರೆ ಎಂದರು.
ಫೆ. 24ರಂದು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯಲಿದ್ದು, ಈವರೆಗಿನ ವರದಿ ಸಲ್ಲಿಸಲಾಗುವುದು ಎಂದು ಜಗದೀಶ್ ವಿವರಿಸಿದರು.
ಫೆ. 19ರಂದು ಮತ್ತೂಂದು ಅವಕಾಶ
ಇಂದು ಕರ್ನಾಟಕ ಬಂದ್ ಇದ್ದ ಕಾರಣ ಹಾಗೂ ಸಾರ್ವಜನಿಕರಿಗೆ ಇನ್ನೊಂದು ಅವಕಾಶ ನೀಡುವ ನಿಟ್ಟಿನಲ್ಲಿ ಫೆ. 19ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ. ಅಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆ ವರೆಗೆ ವಿಚಾರಣೆ ನಡೆಯಲಿದೆ. ಸಾಮಾಜಿಕ ಜಾಲತಾಣದಲ್ಲಿನ ವೀಡಿಯೋಗಳನ್ನು ಪರಿಗಣಿಸು ವುದಿಲ್ಲ. ಸ್ವತಃ ಅವರೇ ಮಾಡಿದ ವೀಡಿಯೋ ತುಣುಕುಗಳನ್ನು ಅಥವಾ ಮನೆಯಲ್ಲಿನ ಸಿಸಿಟಿವಿಯ ಸಿಡಿಆರ್ಗಳನ್ನು ಸ್ವೀಕರಿಸಲಾಗುವುದು ಎಂದು ತಿಳಿಸಿದರು.