ಅಳಿಯನ ಕೊಲ್ಲುವುದಕ್ಕೆ ಸುಪಾರಿ ಕೊಟ್ಟ ಅತ್ತೆ-ಮಾವ
Team Udayavani, Feb 16, 2020, 3:00 AM IST
ಮಳವಳ್ಳಿ: ದರೋಡೆಕೋರರೆಂದು ಬಂಧಿಸಲಾದ ಐವರು ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟ ಮಾಹಿತಿಯಂತೆ ಅಳಿಯನನ್ನು ಕೊಲ್ಲುವುದಕ್ಕೆ ಅತ್ತೆ-ಮಾವನೇ ಸುಪಾರಿ ನೀಡಿದ್ದ ಸಂಗತಿ ಬಯಲಾಗಿದೆ. ಮಳವಳ್ಳಿಯ ವಡ್ಡರ ಕಾಲೋನಿ ನಿವಾಸಿ ಪುಟ್ಟತಾಯಮ್ಮ ಹಾಗೂ ವೆಂಕ ಟೇಶ್ ಅವರ ಪುತ್ರಿಯನ್ನು ಅನ್ಯಜಾತಿಯ ಅರುಣ್ಕುಮಾರ್ ಮದುವೆಯಾಗಿದ್ದ.
ತಮ್ಮ ವಿರೋಧ ಲೆಕ್ಕಿಸದೆ ಮದುವೆಯಾಗಿದ್ದಕ್ಕೆ ಅಳಿಯನನ್ನು ಕೊಂದು, ಮಗಳನ್ನು ಮನೆಗೆ ಕರೆಸಿಕೊಳ್ಳುವುದಕ್ಕೆ ಸಂಚು ರೂಪಿಸಿದ್ದರು. ಅದರಂತೆ ಬೆಂಗಳೂರು ಹಾಗೂ ಮಳವಳ್ಳಿ ಮೂಲದ ಐವರಿಗೆ 4.50 ಲಕ್ಷ ರೂ.ಗೆ ಮಾತುಕತೆ ನಡೆಸಿ, ಅಳಿಯನನ್ನು ಮುಗಿಸಲು ಸುಪಾರಿ ನೀಡಿದ್ದರು. ಮುಂಗಡವಾಗಿ 1.30 ಲಕ್ಷ ರೂ.ಕೊಟ್ಟಿದ್ದರು.
ಆದರೆ, ಕೊಲೆ ಮಾಡುವುದಕ್ಕೂ ಮುನ್ನ ಮತ್ತಷ್ಟು ಹಣ ಕೊಡುವಂತೆ ಸುಪಾರಿ ಪಡೆದವರು ಪುಟ್ಟತಾಯಮ್ಮ ಹಾಗೂ ವೆಂಕಟೇಶ್ರನ್ನು ಪೀಡಿಸಲಾರಂಭಿಸಿದರು. ಮತ್ತಷ್ಟು ಹಣ ನೀಡದಿದ್ದಾಗ ಸುಪಾರಿ ಪಡೆದವರು, ಫೆ.12ರ ರಾತ್ರಿ ಪಟ್ಟಣದ ವಡ್ಡರ ಕಾಲೋನಿಯಲ್ಲಿ ಪೊಲೀಸರ ವೇಷ ಧರಿಸಿ ವೆಂಕಟೇಶ್ ಮನೆಗೆ ಬಂದು ಚಾಕು ಮತ್ತು ಬಂದೂಕು ತೋರಿಸಿ, ಬೆದರಿಸಿ 35 ಸಾವಿರ ರೂ.ನಗದು,
30 ಗ್ರಾಂ ಚಿನ್ನದ ಸರ, 3 ಗ್ರಾಂ ಚಿನ್ನದ ಉಂಗುರ ಕಿತ್ತು ಕಾರಿನಲ್ಲಿ ಪರಾರಿ ಯಾಗಿದ್ದರು. ಪುಟ್ಟತಾಯಮ್ಮ ಹಾಗೂ ವೆಂಕಟೇಶ್ ಈ ಸಂಬಂಧ ಪಟ್ಟಣ ಠಾಣೆಗೆ ದೂರು ನೀಡಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು, ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ವಿಚಾರಣೆ ವೇಳೆ ಆರೋಪಿಗಳು, ಸುಪಾರಿ ನೀಡಿದ್ದ ವಿಷಯ ಬಾಯ್ಬಿಟ್ಟಿದ್ದಾರೆ.