ಹೃದಯ್ ಚಿಕಿತ್ಸೆಗೆ ನೆರವಾಗಲು ಮನವಿ
Team Udayavani, Feb 24, 2020, 8:05 AM IST
ಕುಂಬಳೆ: ಕಾಸರಗೋಡು ಜಿಲ್ಲೆಯ ಪುತ್ತಿಗೆ ಗ್ರಾಮ ಪಂಚಾಯತಿನ ಬಾಡೂರು ಹೊಸಗದ್ದೆ ಮನೆಯ ದೀಲಿಪ್ ಕುಮಾರ್ ವತ್ಸಲಾ ದಂಪತಿ ಪುತ್ರ ಹೃದಯ್ ಹುಟ್ಟಿನಿಂದಲೇ ತೀವ್ರತರವಾದ ಪಿತ್ತಜನಕಾಂಗದ ಕಾಯಿಲೆಯಿಂದ ಬಳಲುತ್ತಿರುವನು. ಈತನಿಗೆ ಈಗ ಕೇವಲ ಆರು ತಿಂಗಳ ಪ್ರಾಯ.
ಹೆತ್ತ ಆರಂಭದಿಂದಲೇ ರೋಗದಿಂದ ಬಳಲುತ್ತಿದ್ದ ಈತನಿಗೆ ಮಂಗಳೂರಿನ ಹೆಸರಾಂತ ಹಿರಿಯ ಮಕ್ಕಳ ತಜ್ಞ ಡಾ| ಗಣೇಶ್ ಪೈ ಮತ್ತು ಡಾ| ಆನಂದ ಪೈ ಅವರಿಂದ ಚಿಕಿತ್ಸೆ ನೀಡಲಾಗಿತ್ತು. ಎರಡು ತಿಂಗಳ ಚಿಕಿತ್ಸೆ ಹಾಗೂ ವಿವಿಧ ಉನ್ನತ ಪರೀಕ್ಷೆಗಳಿಂದ ಈ ಮಗುವಿಗೆ ಹುಟ್ಟುವಾಗಲೇ ಪಿತ್ತನಾಳ ಇಲ್ಲದೇ ಇರುವುದು ದೃಢಪಟ್ಟು ಮುಂದೆ ಪಿತ್ತಜನಕಾಂಗದ ತೀವ್ರ ತೊಂದರೆಯಿರುವುದು ಖಚಿತಪಟ್ಟಿತು.
ಪ್ರಕೃತ ತಜ್ಞ ವೈದ್ಯರು ಕಸಾಯಿ ಶಸ್ತ್ರಚಿಕಿತ್ಸೆ ಮಾಡಿ ಎರಡು ತಿಂಗಳ ಬಳಿಕ ತುರ್ತು ಚಿತ್ಸೆಯನ್ನು ಪಡೆಯುವಂತೆಯೂ ಬೆಂಗಳೂರಿನ ನಾರಾಯಣ ಹೃದಯಾಲಯದ ಪ್ರಸಿದ್ಧ ಪಿತ್ತಜನಕಾಂಗ ಕಸಿ ತಜ್ಞರಾದ ಡಾ| ಸಂಜಯ ರಾವ್ ಹಾಗೂ ಮಕ್ಕಳ ಪಚನಾಂಗ ತಜ್ಞರಾದ ಡಾ| ಎಚ್.ಆರ್. ಸೋಮಶೇಖರ್ ಅವರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಬೆಂಗಳೂರಿನ ನಾರಾಯಣ ಹƒದಯಾಲಯದಲ್ಲಿ ಮಗುವನ್ನು ದಾಖಲಿಸಿ ಮಗುವನ್ನು ಚಿಕಿತ್ಸೆಗಾಗಿ ಕೇವಲ ಎರಡು ತಿಂಗಳೊಳಗಾಗಿ ಪಿತ್ತಜನಕಾಂಗದ ಕಸಿ ಮಾಡಲೇಬೇಕೆಂದು ಎಚ್ಚರಿಸಿದ್ದಾರೆ.
ಕರುಳ ಕುಡಿಗಾಗಿ ತಾಯಿ ನಿರ್ಧಾರ
ಕರುಳ ಕುಡಿಯನ್ನು ಉಳಿಸಲು ತನ್ನದೇ ಪಿತ್ತ ಜನಕಾಂಗದ ಭಾಗವನ್ನು ನೀಡಲು ಮಗುವಿನ ತಾಯಿ ನಿರ್ಧರಿಸಿದ್ದು ಚಿಕ್ಸಿತೆಗೆ ಸುಮಾರು 18.5 ಲಕ್ಷ ರೂ. ತಗಲಬಹುದೆಂದು ವೈದ್ಯರು ತಿಳಿಸಿದ್ದಾರೆ. ಇದರ ಹೊರತು ಪಿತ್ತ ಜನಕಾಂಗದ ದಾನಿಯಾದ ಅಮ್ಮನ ತಪಾಸಣೆಗೆ ರೂ.1,00,000 ವನ್ನು ಭರಿಸಬೇಕಾಗಿದೆ. ಅಲ್ಲದೆ ಆ ಬಳಿಕ ಮೂರು ತಿಂಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿರಬೇಕೆಂದು ಸೂಚಿಸಿರುವರು. ತದನಂತರ ಮಗುವಿಗೆ ಜೀವನ ಪರ್ಯಂತ ತಿಂಗಳಿಗೆ ತಲಾ ರೂ. 15,000ಕ್ಕೂ ಮಿಕ್ಕಿ ಔಷಧೋಪಚಾರದ ಆವಶ್ಯಕತೆ ಇರುವುದಲ್ಲದೆ ಪ್ರತಿ ಮೂರು ತಿಂಗಳಿಗೊಮ್ಮೆ ಮಗುವನ್ನು ತಜ್ಞ ವೈದ್ಯರಿಂದ ತಪಾಸಣೆಗೊಳಿಸಬೇಕಾಗಿದೆ.
ಅರ್ಥಿಕವಾಗಿ ಹಿಂದುಳಿದ ಈ ಬಡ ಕುಟುಂಬ ಎಲ್ಲ ಉಳಿತಾಯವನ್ನು ಈಗಾಗಲೇ ಪುಟ್ಟ ಕಂದನ ಚಿಕಿತ್ಸೆಗೆಂದು ಖರ್ಚು ಮಾಡಿದೆ. ಇನ್ನು ಮುಂದಿನ ಚಿಕಿತ್ಸಾ ವೆಚ್ಚವನ್ನು ಭರಿಸಲು ಆಶಕ್ತರಾಗಿದ್ದಾರೆ.
ಆದುದರಿಂದ ಹೃದಯ ಶ್ರೀಮಂತಿಕೆಯ ದಾನಿಗಳು ಪುಟ್ಟ ಹೃದಯ್ನ ನೆರವಿಗೆ ಮುಂದಾಗಬೇಕಿದೆ.
ದಾನಿಗಳು ಧನ ಸಹಾಯ ಮಾಡುವಂತೆ ಕಂದನ ಮಾತಾಪಿತರು ಆಪೇಕ್ಷಿಸುತ್ತಿದ್ದಾರೆ. ಬ್ಯಾಂಕ್ ಖಾತೆಯ ವಿವರ: ವತ್ಸಲಾ ಪಿ., ಖಾತೆ ಸಂಖ್ಯೆ ನಂ: 200201011003751-ವಿಜಯಾ ಬ್ಯಾಂಕ್,ಬಾಯಾರು ಐಎಫ್ಎಸ್ಸಿ ನಂ: ವಿಐಜೆಬಿ: 0002002.