ನಗರೋತ್ಥಾನ ಅನುದಾನ ತಾರತಮ್ಯ ನಿವಾರಣೆ: ಸಿಎಂ
Team Udayavani, Mar 18, 2020, 3:02 AM IST
ವಿಧಾನಸಭೆ: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ನಗರೋತ್ಥಾನ ಯೋಜನೆ ಯಡಿ ಹಂಚಿಕೆಯಾಗಿದ್ದ ಅನುದಾನ ರದ್ದುಪಡಿಸಿರುವ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆದು ಆರ್ಥಿಕ ಸಂಕಷ್ಟದ ಕಾರಣ ಕೆಲವೊಂದು ಕ್ರಮ ಕೈಗೊಳ್ಳಲಾಗಿತ್ತು, ಇದೀಗ ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದರು.
ಈ ಕುರಿತು ನಡೆದ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ನ ಶಿವಲಿಂಗೇಗೌಡ, ಸುರೇಶ್ಗೌಡ, ಸಿ.ಎನ್.ಬಾಲಕೃಷ್ಣ, ಎ.ಟಿ.ರಾಮಸ್ವಾಮಿ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 642 ಕೋಟಿ ರೂ. ಬಿಡುಗಡೆಗೆ ಆದೇಶ ಹೊರಡಿಸಲಾಗಿತ್ತು. ಅದರಂತೆ ಕೆಲವೆಡೆ ಕಾಮಗಾರಿಯೂ ಮುಗಿದಿದೆ. ಆದರೆ, ಇದೀಗ ತಡೆ ಹಿಡಿದಿರುವುದರಿಂದ ಹಣ ಬಿಡುಗಡೆಯಾಗಿಲ್ಲ ಎಂದು ದೂರಿದರು.