ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮನೆಯ ಎಲ್ಲಾ ದೀಪಗಳನ್ನು ಆರಿಸಿ ದೀಪವನ್ನು ಹಚ್ಚಿ ಬೆಳಗುವ ಮೂಲಕ ಪ್ರಧಾನಿ ಅವರ ಕರೆಗೆ ಸಾಥ್ ನೀಡಿದ್ದಾರೆ.
Team Udayavani, Apr 5, 2020, 9:34 PM IST
ನವದೆಹಲಿ: ದೇಶಕ್ಕೆ ಮಹಾಮಾರಿಯಾಗಿ ಪರಿಣಮಿಸಿರುವ ಕೋವಿಡ್ 19 ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರು ಒಗ್ಗಟ್ಟು ಪ್ರದರ್ಶಿಸಲು ಭಾನುವಾರ ರಾತ್ರಿ 9ಗಂಟೆಯಾಗಿ 9 ನಿಮಿಷಗಳ ಕಾಲ ಮನೆಯ ದೀಪಗಳನ್ನು ಆರಿಸಿ ಮೊಂಬತ್ತಿ, ದೀಪ ಅಥವಾ ಮೊಬೈಲ್ ಲೈಟ್ ಗಳನ್ನು ಬೆಳಗಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಜನರು ದೀಪಗಳನ್ನು ಬೆಳಗಿಸುವ ಮೂಲಕ ಕೋವಿಡ್ ಅಂಧಕಾರವನ್ನು ಹೊಡೆದೋಡಿಸುವ ಪಣತೊಟ್ಟಿರುವುದಾಗಿ ವರದಿ ತಿಳಿಸಿದೆ.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮನೆಯ ಎಲ್ಲಾ ದೀಪಗಳನ್ನು ಆರಿಸಿ ದೀಪವನ್ನು ಹಚ್ಚಿ ಬೆಳಗುವ ಮೂಲಕ ಪ್ರಧಾನಿ ಅವರ ಕರೆಗೆ ಸಾಥ್ ನೀಡಿದ್ದಾರೆ. ದೆಹಲಿ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಕೂಡಾ ಮನೆಯ ಲೈಟ್ ಆರಿಸಿ ದೀಪ ಬೆಳಗುವ ಮೂಲಕ ಬೆಂಬಲ ನೀಡಿರುವುದಾಗಿ ವರದಿ ತಿಳಿಸಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಪಶ್ಚಿಮಬಂಗಾಳ ರಾಜ್ಯಪಾಲ ಜಗ್ ದೀಪ್, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೀಗೆ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಮೇರೆಗೆ 9ಗಂಟೆ 9 ನಿಮಿಷಕ್ಕೆ ಮನೆಯ ದೀಪಗಳನ್ನು ಆರಿಸಿ, ಮೊಂಬತ್ತಿ, ದೀಪ ಬೆಳಗುವ ಮೂಲಕ ತಮ್ಮ ಬೆಂಬಲ ಸೂಚಿಸಿದ್ದಾರೆ.