ಕೋವಿಡ್ ಸೋಂಕು ವಿಚಾರದಲ್ಲಿ ನಿರ್ದಿಷ್ಟ ಸಮುದಾಯಕ್ಕೆ ಕಳಂಕ ಬೇಡ: ಕೇಂದ್ರದ ಮನವಿ
Team Udayavani, Apr 9, 2020, 6:04 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ಕೋವಿಡ್ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಧರ್ಮ, ಸಮುದಾಯ ಅಥವಾ ಪ್ರದೇಶದ ಮೇಲೆ ಕಳಂಕ ಹೊರಿಸುವುದು ಇಲ್ಲವೇ ಇವರೇ ಸೋಂಕು ಹರಡುತ್ತಿದ್ದಾರೆ ಎಂದು ಹಣೆಪಟ್ಟಿ ಕಟ್ಟುದಂತೆ ಕೇಂದ್ರ ಸರಕಾರ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಹೊಸದಿಲ್ಲಿಯ ನಿಜಾಮುದ್ದೀನ್ನಲ್ಲಿರುವ ತಬ್ಲೀಘಿ ಜಮಾತ್ ಸಮಾವೇಶದ ಬಳಿಕ, ಸೋಂಕು ವ್ಯಾಪಕವಾಗಿ ಹರಡಲು ಮುಸ್ಲಿಂ ಸಮುದಾಯವೇ ಕಾರಣ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ, ಅದರಲ್ಲೂ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ಹರಿದಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ರೀತಿ ಮನವಿ ಮಾಡಿದೆ.
ಸಾಂಕ್ರಾಮಿಕ ಸೋಂಕುಗಳು ದೇಶವನ್ನು ಬಾಧಿಸುತ್ತಿರುವ ಸಂದರ್ಭದಲ್ಲಿ ಈ ರೀತಿ ನಿರ್ದಿಷ್ಟ ಗುಂಪು ಅಥವಾ ಸಮುದಾಯದ ಮೇಲೆ ಕಳಕ ಹೊರಿಸುವುದರಿಂದ ಸಮುದಾಯಗಳ ನಡುವೆ ಪರಸ್ಪರ ದ್ವೇಷ, ಅಸೂಯೆ ಬೆಳೆದು, ಸಾಮಾಜಿಕ ಸ್ವಾಸ್ಥ್ಯ ಹಾಳಾಗಿ, ಅಶಾಂತಿ ಮತ್ತು ಆತಂಕ ಸೃಷ್ಟಿಯಾಗುತ್ತದೆ ಎಂದು ಸರಕಾರ ಅಭಿಪ್ರಾಯಪಟ್ಟಿದೆ.
ಹಾಗೇ ಈ ಸಂದರ್ಭದಲ್ಲಿ ಆರೋಗ್ಯ ಸೇವಾ ಸಿಬ್ಬಂದಿ, ಸ್ವಚ್ಛತಾ ಕೆಲಸಗಾರರು ಮತ್ತು ಪೊಲೀಸರು ಸೋಂಕು ಹರಡದಂತೆ ಹಗಲಿರುಳು ಶ್ರಮಿಸುತ್ತಿದ್ದು, ಅವರ ಜತೆ ಅನುಚಿತವಾಗಿ ವರ್ತಿಸದಂತೆಯೂ ಸರಕಾರ ಜನರಲ್ಲಿ ವಿನಂತಿ ಮಾಡಿಕೊಂಡಿದೆ.