ಸಿಂಗಾಪುರ : ಸಾಮಾಜಿಕ ಅಂತರ ಪಾಲಿಸದಿದ್ದರೆ ಜೈಲು
Team Udayavani, Apr 12, 2020, 6:45 PM IST
ಸಿಂಗಾಪುರ: ಸಿಂಗಾಪುರ ಸಾಮಾಜಿಕ ಅಂತರ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಜನರು ಪರಸ್ಪರರಿಂದ ಅಂತರ ಕಾಯ್ದುಕೊಳ್ಳುವುದೇ ಕೋವಿಡ್ 19 ವೈರಸ್ ತಡೆಯಲು ಇರುವ ಏಕೈಕ ದಾರಿ ಎನ್ನುವುದೇ ಇದಕ್ಕೆ ಕಾರಣ.
ಆದರೆ ಕೆಲವರು ಉದ್ದೇಶ ಪೂರ್ವಕವಾಗಿ ಅಥವಾ ಅರಿವಿಲ್ಲದೆ ಇನ್ನೊಬ್ಬರ ಅತಿ ನಿಕಟಕ್ಕೆ ಬರುವ ಪ್ರಕರಣಗಳು ಸಂಭವಿಸುತ್ತಿರುವುದರಿಂದ ಸಿಂಗಾಪುರ ಸರಕಾರ ಹೊಸ ಕಾನೂನು ಜಾರಿಗೆ ತಂದಿದೆ.
ಈ ಕಾನೂನಿನ ಪ್ರಕಾರ ಇಬ್ಬರು ವ್ಯಕ್ತಿಗಳು ಪರಸ್ಪರ ಅತಿ ನಿಕಟವಾಗಿ ಇದ್ದರೆ ಅವರನ್ನು 6 ತಿಂಗಳ ಅವಧಿಗೆ ಜೈಲಿಗೆ ಕಳುಹಿಸಲಾಗುವುದು. ಜನರು ಕನಿಷ್ಠ ಒಂದು ಮೀಟರ್ ಅಥವಾ ಮೂರು ಅಡಿ ಅಂತರ ಕಾಯ್ದುಕೊಳ್ಳಬೇಕು. ಈ ನಿಯಮ ಪಾಲಿಸದವರನ್ನು ಪೊಲೀಸರು ನಿರ್ದಾಕ್ಷಿಣ್ಯವಾಗಿ ಬಂಧಿಸಿ ಜೈಲಿಗಟ್ಟುತ್ತಾರೆ.
ಸರತಿ ಸಾಲುಗಳಲ್ಲಿ ಬೇಕೆಂದೇ ಒಬ್ಬರ ಹತ್ತಿರ ಇನ್ನೊಬ್ಬರು ನಿಂತುಕೊಳ್ಳುವುದು ಅಥವಾ ಆಸನಗಳಲ್ಲಿ ಒಂದು ಮೀಟರ್ಗಿಂತ ಕಡಿಮೆ ಅಂತರದಲ್ಲಿ ಕುಳಿತುಕೊಳ್ಳುವುದೆಲ್ಲ ಶಿಕ್ಷಾರ್ಹ ಅಪರಾಧವೆಂದೇ ಪರಿಗಣಿಸಲ್ಪಡುತ್ತದೆ. ಅಂಗಡಿ ಹಾಗೂ ಇನ್ನಿತ್ತರ ವಾಣಿಜ್ಯ ಸಂಸ್ಥಾಪನೆಗಳಲ್ಲೂ ಆಸನಗಳನ್ನು ಒಂದು ಮೀಟರ್ ಅಂತರವಿಟ್ಟು ಇರಿಸಿರಬೇಕು. ಇಲ್ಲದಿದ್ದರೆ ಮಾಲಕರು ಜೈಲಿಗೆ ಹೋಗಬೇಕಾಗುತ್ತದೆ.