Moodbidri : ಡಿಸಿಸಿ ಬ್ಯಾಂಕ್ ಹಾಗೂ ನವೋದಯದಿಂದ 205 ಆಹಾರ ಕಿಟ್ ವಿತರಣೆ
Team Udayavani, Apr 29, 2020, 5:22 PM IST
ಮೂಡುಬಿದಿರೆ: ಆಶಾ ಕಾರ್ಯಕರ್ತೆಯರ ಬ್ಯಾಂಕ್ ಖಾತೆಗೆ ಡಿಸಿಸಿ ಬ್ಯಾಂಕ್ನಿಂದ ರೂ. ಒಂದು ಸಾವಿರ ಜಮಾ ಮಾಡಲಾಗುವುದು ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರಕುಮಾರ್ ಅವರು ತಿಳಿಸಿದರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಇವುಗಳ ಸಂಯುಕ್ತಾಶ್ರಯದಲ್ಲಿ ದ.ಕ., ಉಡುಪಿ ಜಿಲ್ಲಾ ಆಶಾ ಕಾರ್ಯಕರ್ತೆಯರು ಹಾಗೂ ನವೋದಯ ಸ್ವಸಹಾಯ ಗುಂಪುಗಳ ಪ್ರೇರಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣ ಕಾರ್ಯಕ್ರಮದಂಗವಾಗಿ ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆದ, ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಒಟ್ಟು 205 ಮಂದಿ ಆಶಾ ಕಾರ್ಯಕರ್ತೆಯರು, ನವೋದಯದ ಪ್ರೇರಕರು, ದಾದಿಯರು ಹಾಗೂ ಪತ್ರಕರ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಾಸಕ ಉಮಾನಾಥ ಕೋಟ್ಯಾನ್ ಚಾಲನೆ ನೀಡಿ, ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಡಿಸಿಸಿ, ಅಪೆಕ್ಸ್ ಬ್ಯಾಂಕ್ ಸಹಿತ ಸಹಕಾರಿ ಸಂಸ್ಥೆಗಳಿಂದ ಶಾಸಕರು, ಸಂಸದರು, ಮುಖ್ಯಮಂತ್ರಿ, ಪ್ರಧಾನಮಂತ್ರಿ ನಿಧಿಗಳಿಗೆ ಗರಿಷ್ಠ ಮೊತ್ತದ ದೇಣಿಗೆ ಸಮರ್ಪಣೆಯಾಗುವಲ್ಲಿ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಮುಕ್ತ ಸಹಾಯಹಸ್ತ ಚಾಚಿದ್ದಾರೆ ಎಂದರು. ಮಾಜಿ ಸಚಿವ ಕೆ. ಅಭಯಚಂದ್ರ, ತಹಶೀಲ್ದಾರ್ ಅನಿತಾಲಕ್ಷ್ಮೀ, ಪುರಸಭಾ ಮುಖ್ಯಾಧಿಕಾರಿ ಇಂದೂ ಎಂ., ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ| ಶಶಿಕಲಾ, ಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಎಸ್. ಕೋಟ್ಯಾನ್, ಜೋಕಿಂ ಕೊರೆಯ, ಹರಿಪ್ರಸಾದ್ ಶೆಟ್ಟಿ , ಪದ್ಮಪ್ರಸಾದ್ ಜೈನ್, ಅಶ್ವಿನ್ ಜೊಸ್ಸಿ ಪಿರೇರಾ , ಪ್ರವೀಣ್ಕುಮಾರ್ ಮೊದಲಾದವರಿದ್ದರು. ಮೋಹನದಾಸ ಪ್ರಭು ನಿರೂಪಿಸಿದರು.