ರಾಜಕಾಲುವೆ ಹೂಳೆತ್ತುವ ಕಾಮಗಾರಿ ಆರಂಭ
Team Udayavani, May 9, 2020, 5:02 AM IST
ಮಂಗಳೂರು: ಇನ್ನೇನು ಕೆಲವು ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಮುಂಜಾಗ್ರತಾ ದೃಷ್ಟಿಯಿಂದ ಇದೀಗ ಮಂಗಳೂರು ಮಹಾನಗರ ಪಾಲಿಕೆಯು ನಗರದ ರಾಜಕಾಲುವೆಗಳಲ್ಲಿ ಹೂಳೆತ್ತುವ ಕಾಮಗಾರಿ ಆರಂಭಿಸಿದೆ.
ನಗರದ ಕೊಟ್ಟಾರ ಚೌಕಿ ಬಳಿ ಸುಮಾರು 2 ಕಿ. ಮೀ. ವ್ಯಾಪ್ತಿಯ ರಾಜಕಾಲುವೆಯಲ್ಲಿ ಶುಕ್ರವಾರ ಬೆಳಗ್ಗೆ ಹೂಳೆತ್ತುವ ಕಾಮಗಾರಿ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ನಗರದ ಇನ್ನುಳಿದ ಭಾಗಗಳಲ್ಲಿಯೂ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಪಾಲಿಕೆ ಎಂಜಿನಿಯರ್ ಮರಳಹಳ್ಳಿ ಅವರು “ಸುದಿನ’ಕ್ಕೆ ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ನಗರದಲ್ಲಿ ಸುರಿದ ಭಾರೀ ಮಳೆಗೆ ನಗರದ ಬಹುತೇಕ ಭಾಗ ಮುಳುಗಡೆಗೊಂಡಿತ್ತು. ರಾಜಕಾಲುವೆ ಹೂಳೆತ್ತದೇ ಇರುವುದೇ ಕಾರಣ ಎಂದು ಸಾರ್ವಜನಿಕರು ದೂರಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಮಳೆಗಾಲ ಆರಂಭಕ್ಕೆ ಒಂದು ತಿಂಗಳು ಇರುವಾಗಲೇ ಮಹಾನಗರ ಪಾಲಿಕೆಯು ಹೂಳೆತ್ತುವ ಕಾಮಗಾರಿ ಆರಂಭಿಸಿದೆ.
ಹೆದ್ದಾರಿ ಇಲಾಖೆಯಿಂದ
ಕಾಮಗಾರಿ ಆರಂಭ
ನಗರದ ನಂತೂರು ವೃತ್ತ ಬಳಿ ಹೆದ್ದಾರಿ ಇಲಾಖೆಯಿಂದ ಕಾಮಗಾರಿ ಆರಂಭವಾಗಿದೆ. ಕಳೆದ ಕೆಲವು ವರ್ಷಗಳಿಂದ ಮಳೆಗಾಲದಲ್ಲಿ ನಂತೂರು ವೃತ್ತ ಬಳಿ ನೀರು ನಿಂತು ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿತ್ತು. ಕೆ.ಪಿ.ಟಿ. ಕಡೆಯಿಂದ ನಂತೂರಿಗೆ ಇಳಿಜಾರು ಇದ್ದು, ಈ ಪ್ರದೇಶದಿಂದ ಮಳೆ ನೀರು ಬಂದು ನಂತೂರು ವೃತ್ತ ಬಳಿ ನಿಲ್ಲುತ್ತಿತ್ತು. ಇದೀಗ ನಂತೂರು ವೃತ್ತದಿಂದ ಕುಲಶೇಖರ ಕಡೆ ತೆರಳುವ ರಾಷ್ಟ್ರೀಯ ಹೆದ್ದಾರಿಯ ಒಂದು ಕಡೆ ರಸ್ತೆ ಬಂದ್ ಮಾಡಲಾಗಿದ್ದು, ರಸ್ತೆ ಅಗೆದು ಕಾಮಗಾರಿ ಆರಂಭವಾಗಲಿದೆ. ಹೆದ್ದಾರಿ ಇಲಾಖೆ ಅಧಿಕಾರಿಗಳು ಹೇಳುವಂತೆ ಮುಂದಿನ ಸುಮಾರು ಮೂರು ವಾರಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.