ಪೈವಳಿಕೆ: ಬಾಧಿತರಿಂದ 70ಕ್ಕೂ ಹೆಚ್ಚು ಮಂದಿಯ ಸಂಪರ್ಕ
Team Udayavani, May 17, 2020, 5:39 AM IST
ಕಾಸರಗೋಡು: ಕೋವಿಡ್ ಸೋಂಕು ದೃಢವಾಗಿರುವ ಪೈವಳಿಕೆಯ ಸಿಪಿಎಂ ಪ್ರಾದೇಶಿಕ ಮುಖಂಡ ಮತ್ತು ಪಂಚಾಯತ್ ಸದಸ್ಯೆ ಸುಮಾರು 70ಕ್ಕೂ ಹೆಚ್ಚು ಮಂದಿಯನ್ನು ಸಂಪರ್ಕಿಸಿದ್ದಾರೆ ಎಂದು ಕೋವಿಡ್ ನಿಗಾವಣೆ ಸೆಲ್ ಅಂದಾಜಿಸಿದೆ.
ಈ ವ್ಯಕ್ತಿ ಕಾಂಞಂಗಾಡ್ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಮೂರು ಬಾರಿ ಹೋಗಿದ್ದಲ್ಲದೆ ಪೈವಳಿಕೆಯಲ್ಲಿಸಾವಿನ ಮನೆಗೂ ಹೋಗಿದ್ದರು. ಅವರ ಸಂಪರ್ಕದಲ್ಲಿದ್ದವರನ್ನು ಇದೀಗ ನಿಗಾದಲ್ಲಿರಿಸಲಾಗಿದೆ.
ಅವರ ಪತ್ನಿ (ಪಂಚಾಯತ್ ಸದಸ್ಯೆ)ಯ ಸಂಪರ್ಕ ಯಾದಿಯಲ್ಲಿ ಜನಪ್ರತಿನಿಧಿಗಳ ಸಹಿತ 20ಕ್ಕೂ ಹೆಚ್ಚು ಜನರಿದ್ದು, ಅವರನ್ನೂ ನಿಗಾದ ಲ್ಲಿರಿಸಲಾಗಿದೆ.
ಕಾಂಞಂಗಾಡ್ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಕಾರಣ ಇಬ್ಬರು ವೈದ್ಯರ ಸಹಿತ 20 ಮಂದಿ ಕ್ವಾರಂಟೈನ್ನಲ್ಲಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತೆಗೆ ಕೋವಿಡ್ ಬಾಧಿಸಿದ್ದರಿಂದ ಅಲ್ಲಿನ 17 ಮಂದಿ ಕ್ವಾರಂಟೈನ್ನಲ್ಲಿದ್ದಾರೆ.
ಕೇರಳದಲ್ಲಿ 11 ಮಂದಿಗೆ ಸೋಂಕು
ಕೇರಳದಲ್ಲಿ ಶನಿವಾರ ಮತ್ತೆ 11 ಮಂದಿಗೆ ಸೋಂಕು ಬಾಧಿಸಿದೆ. ತೃಶ್ಶೂರ್ನಲ್ಲಿ 4, ಕೋಯಿಕ್ಕೋಡ್ನಲ್ಲಿ 3, ಪಾಲಾಟ್, ಮಲಪ್ಪುರಂಗಳಲ್ಲಿ ತಲಾ ಇಬ್ಬರು ಬಾಧಿತರಾಗಿದ್ದಾರೆ. ಈ 11 ಮಂದಿಯೂ ಕೇರಳದ ಹೊರಗಿ ನಿಂದ ಬಂದವರು. 7 ಮಂದಿ ವಿದೇಶದಿಂದ ಬಂದವರು.
ತಲಾ ಇಬ್ಬರು
ತಮಿಳುನಾಡು ಮತ್ತು ಮಹಾರಾಷ್ಟ್ರ ದಿಂದ ಬಂದವರು. ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ ಹೊಸ ಪ್ರಕರಣ ದಾಖಲಾಗಿಲ್ಲ.
ಪ್ರಕರಣ ದಾಖಲು
ರೋಗ ಸಾಧ್ಯತೆಯ ವ್ಯಕ್ತಿಯೊಂದಿಗೆ ಸಂಪರ್ಕವಾಗಿದ್ದರೂ ಸಾಮೂ ಹಿಕ ಭೀತಿಗೆ ಕಾರಣವಾಗುವ ರೀತಿ ಯಲ್ಲಿ ನಡೆದುಕೊಂಡ ಹಿನ್ನೆಲೆಯಲ್ಲಿ ಸಿಪಿಎಂ ಪ್ರಾದೇಶಿಕ ಮುಖಂಡನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಚೆಕ್ಪೋಸ್ಟ್ನಲ್ಲಿ ಗೊಂದಲ
ಕ್ವಾರಂಟೈನ್ ತಪ್ಪಿಸಿ ಮಹಿಳೆ ಮನೆಗೆ !
ಪಡುಬಿದ್ರಿ: ಕೇರಳದಿಂದ ಮಂಗಳೂರಿಗೆ ಬಂದು ಅಲ್ಲಿಂದ ತಂದೆಯ ಬೈಕಲ್ಲಿ ಕುಂದಾಪುರಕ್ಕೆ ಹೋಗುತ್ತಿದ್ದ ಮಹಿಳೆಯೋರ್ವರು ಉಡುಪಿ ಜಿಲ್ಲೆಯ ಗಡಿಯ ಹೆಜಮಾಡಿ ಚೆಕ್ಪೋಸ್ಟ್ನಲ್ಲಿ ತಪಾಸಣೆಯ ಬಳಿಕ ಕ್ವಾರಂಟೈನ್ಗೊಳಪಡುವ ಬದಲು ಬೈಕಿನಲ್ಲೇ ಕುಂದಾಪುರದ ಆಜ್ರಿಯತ್ತ ತೆರಳಿ ಗೊಂದಲ ಮೂಡಿಸಿದ ಘಟನೆ ನಡೆದಿದೆ.
ಹೊರ ರಾಜ್ಯ/ಜಿಲ್ಲೆಗಳಿಂದ ಬರುವವರನ್ನು ಗಡಿಯಲ್ಲಿ ತಪಾಸಣೆ ನಡೆಸಿ ಬಳಿಕ ಪೊಲೀಸರ ಉಸ್ತುವಾರಿಯಲ್ಲಿ ಸಂಬಂಧಪಟ್ಟ ಊರಿಗೆ ಕಳುಹಿಸಿ ಕ್ವಾರಂಟೈನ್ಗೆ ಒಳಪಡಿಸಬೇಕೆಂಬುದು ನಿಯಮ. ಚೆಕ್ಪೋಸ್ಟ್ನಲ್ಲಿ ಸಂಬಂಧಪಟ್ಟ ಅರ್ಜಿ ತುಂಬಿದ ಮಹಿಳೆ ಮುಂದಿನ ಪ್ರಕ್ರಿಯೆಗಳಿಗೆ ಕಾಯದೆ ಚೆಕ್ಪೋಸ್ಟ್ನ ಸಿಬಂದಿಯ ಗಮನಕ್ಕೆ ಬಾರದಂತೆ ತಂದೆಯ ಬೈಕಿನಲ್ಲಿ ತೆರಳಿದರು. ಇತ್ತ ಸಿಬಂದಿಯ ಗಮನಕ್ಕೆ ಬಂದು ಪತ್ತೆಗೆ ಶ್ರಮಿಸುವಾಗ ಆಕೆ ತನ್ನ ಮನೆ ಸೇರಿರುವುದಾಗಿ ತಿಳಿದುಬಂದಿದೆ.
ಚೆಕ್ಪೋಸ್ಟ್ನಿಂದ ಬಂದ ಮಾಹಿತಿಯಂತೆ ಆಕೆಯನ್ನು ಕುಂದಾಪುರ ತಹಶೀಲ್ದಾರ್ ತಿಪ್ಪೆಸ್ವಾಮಿ ಮತ್ತು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಪತ್ತೆಹಚ್ಚಿ ಸರಕಾರಿ ಕ್ವಾರಂಟೈನ್ಗೆ ಸ್ಥಳಾಂತರಿಸಿದ್ದಾರೆ.
ದಾದಿಯರಿಬ್ಬರಿಗೆ ಹೋಂ ಕ್ವಾರಂಟೈನ್
ಸುರತ್ಕಲ್ನ ಕೋವಿಡ್ ಬಾಧಿತ ಮಹಿಳೆಯು ಮೊದಲಿಗೆ ಚಿಕಿತ್ಸೆಗೆಂದು ತೆರಳಿದ್ದ ಸ್ಥಳೀಯ ನರ್ಸಿಂಗ್ ಹೋಂನಲ್ಲಿ ಕರ್ತವ್ಯ ನಿರ್ವಹಿಸಿರುವ ಪಡುಬಿದ್ರಿ ಮೂಲದ ದಾದಿಯರಿಬ್ಬರು ಗೃಹ ನಿಗಾದಲ್ಲಿರುವಂತೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ನಿರ್ದೇಶಿಸಿದೆ.