10 ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಿಸಿ
Team Udayavani, May 17, 2020, 5:41 AM IST
ಹಾಸನ: ಕೊರೊನಾ ಲಾಕ್ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಆಸಂಘಟಿತ ಕಾರ್ಮಿಕರು, ರೈತರು, ಕೂಲಿ ಕಾರ್ಮಿಕರಿಗಾಗಿ ಸರ್ಕಾರ ಕನಿಷ್ಠ 10 ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ರಾಜ್ಯ ಜೆಡಿಎಸ್ ಅಧ್ಯಕ್ಷ, ಮಾಜಿ ಸಚಿವ ಎಚ್. ಕೆ.ಕುಮಾರಸ್ವಾಮಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ವರೆಗೆ ಘೋಷಣೆ ಮಾಡಿರುವ ಮೂರು ಪ್ಯಾಕೇಜ್ಗಳು ಏನೇನೂ ಸಾಲದು. ಅಸಹಾಯಕ ವೃತ್ತಿಪರರಿಗೆ ರೈತರಿಗೆ ನೆರವು ನೀಡಲೇಬೇಕು ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್ನಲ್ಲಿ ಒಂದೊಂದಕ್ಕೂ ಒಂದೊಂದು ಹೆಸರಿಟ್ಟಿದ್ದಾರೆಯೇ ಹೊರತು ಅದರಿಂದ ನೊಂದವರಿಗೆ ವಾಸ್ತವಿಕ ನೆಲೆಯಲ್ಲಿ ನೆರವು ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ಯಾಕೇಜ್ನಲ್ಲಿ ಕಾಫಿ ಬೆಳೆಗಾರರಿಗೆ, ತೋಟದ ಕಾರ್ಮಿಕರ ಬಗ್ಗೆ ಪ್ರಸ್ತಾಪವಿಲ್ಲ. ಕಳೆದ ವರ್ಷ ಅತಿವೃಷ್ಟಿಯಿಂದ ಶೇ. 60ರಿಂದ 70ರಷ್ಟು ಕಾಫಿ ಬೆಳೆ ಮತ್ತು ಸಾಂಬಾರ ಬೆಳೆಗಳು ನಾಶವಾದರೂ ಪರಿಹಾರ ಸಿಕ್ಕಿಲ್ಲ ಎಂದು ಆಪಾದಿಸಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವಿರೋಧ: ಸರ್ಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ತಂದು ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಕಲ್ಪಿಸಲು ಮುಂದಾಗಿದೆ. ಇದರಿಂದ ರೈತರಿಗಾಗುವ ತೊಂದರೆಯ ಬಗ್ಗೆ ಚಿಂತನೆ ನಡೆಸಿಲ್ಲ. ಎಪಿಎಂಸಿ ಕಾಯ್ದೆ ತಿದ್ದುಪಡಿ ಜಾರಿಗೆ ಜೆಡಿಎಸ್ನ ತೀವ್ರ ವಿರೋಧವಿದ್ದು, ಶೀಘ್ರದಲ್ಲಿಯೇ ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದರು. ಸಹಾಯವಾಣಿ, ಸಾಂತ್ವನ ಯೋಜನೆ, ಮಾತೃಶ್ರೀ ಯೋಜನೆಯನ್ನು ಸರ್ಕಾರ ರದ್ದುಪಡಿಸಿರುವುದು ಸರಿಯಲ್ಲ ಎಂದರು. ಹಾಸನ ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್. ದ್ಯಾವೇಗೌಡ, ಜಿಲ್ಲಾ ಜೆಡಿಎಸ್ ವಕ್ತಾರ ಎಚ್.ಎಸ್ ರಘು ಸುದ್ದಿಗೋಷ್ಠಿಯಲ್ಲಿದ್ದರು.