ಸೀಲ್ಡೌನ್ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿರುವ ಬಂಟ್ವಾಳ ಪೇಟೆಯ ಮುಖ್ಯರಸ್ತೆ ತೆರವಿಗೆ ಒತ್ತಾಯ
Team Udayavani, May 21, 2020, 4:30 PM IST
ಬಂಟ್ವಾಳ: ಇಲ್ಲಿನ ಕಸ್ಬಾ ಗ್ರಾಮದ ಸೀಲ್ ಡೌನ್ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿರುವ ಪೇಟೆಯ ಮುಖ್ಯರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ ಘಟನೆ ಗುರುವಾರ ನಡೆದಿದೆ.
ಬಂಟ್ವಾಳ ಸರಕಾರಿ ಆಸ್ಪತ್ರೆಯ ಬಳಿ ಮುಚ್ಚಲ್ಪಟ್ಟಿರುವ ರಸ್ತೆಯ ಒಂದು ಬದಿಯಲ್ಲಿ ಸೇರಿದ ಜನತೆ ತೆರವು ಮಾಡುವಂತೆ ಒತ್ತಾಯಿಸಿದರು. ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್.ಸೇರಿದಂತೆ ಪೊಲೀಸ್ ಅಧಿಕಾರಿ, ಸಿಬಂದಿ ಸಾರ್ವಜನಿಕರ ಮನವೊಲಿಸುವ ಕಾರ್ಯ ಮಾಡಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ತಾನು ಮೇ 20ರಂದೇ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರ ಜತೆ ಚರ್ಚೆ ನಡೆಸಿದ್ದೇನೆ. ಜೊತೆಗೆ ಗುರುವಾರ ಬೆಳಗ್ಗೆಯೇ ಉಪಮುಖ್ಯಮಂತ್ರಿಯವರನ್ನು ಭೇಟಿಯಾಗಿದ್ದು, ಅವರು ಜಿಲ್ಲಾಧಿಕಾರಿ ಅವರಿಗೂ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಜೊತೆಗೆ ಜನತೆಯ ಬೇಡಿಕೆಗೆ ಪೂರಕ ಸ್ಪಂದನೆಯೂ ಸಿಗಲಿದೆ ಎಂದಿದ್ದಾರೆ.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಕ್ರಿಯಿಸಿ, ಈ ಕುರಿತು ಮೇಲಾಧಿಕಾರಿಗಳು ಗಮನಹರಿಸಿ ಜನತೆಗೆ ತೊಂದರೆಯಾಗದ ರೀತಿಯಲ್ಲಿ ಕ್ರಮಕೈಗೊಳ್ಳಬೇಕಿದೆ. ವೈಜ್ಞಾನಿಕ ರೀತಿಯಲ್ಲೇ ಜನತೆಯ ಬೇಡಿಕೆಗೆ ಸ್ಪಂದನೆ ನೀಡುವ ಕಾರ್ಯ ನಡೆಸಬೇಕಿದೆ ಎಂದು ಹೇಳಿದ್ದಾರೆ.