ಮಳೆಗಾಲದ ಅನಂತರವೇ ಕ್ರಿಕೆಟ್ ಚಟುವಟಿಕೆ: ಜೋಹ್ರಿ
Team Udayavani, May 22, 2020, 6:01 AM IST
ಹೊಸದಿಲ್ಲಿ: ಕೋವಿಡ್ 19 ವೈರಸ್ನಿಂದಾಗಿ ದೇಶದಲ್ಲಿ ನಿಂತಿರುವ ಕ್ರಿಕೆಟ್ ಚಟುವಟಿಕೆಗಳು ಮಳೆಗಾಲದ ಅನಂತರವೇ ಪ್ರಾರಂಭವಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ರಾಹುಲ್ ಜೋಹ್ರಿ ತಿಳಿಸಿದ್ದಾರೆ.
ಟ್ವೆಂಟಿ ಫಸ್ಟ್ ಸೆಂಚುರಿ ಮೀಡಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಪ್ರತಿ ವ್ಯಕ್ತಿಗೂ ತನ್ನ ರಕ್ಷಣೆ ಬಗ್ಗೆ ಯೋಚಿಸುವ ಹಕ್ಕಿದೆ, ಅದನ್ನು ಗೌರವಿಸಬೇಕು, ಸರಕಾರ ಏನನ್ನು ಹೇಳುತ್ತದೆಯೋ ಅದನ್ನು ನಾವು ಪಾಲಿಸುತ್ತೇವೆ, ಸದ್ಯ ಐಪಿಎಲ್ ನಡೆಸುವ ಬಗ್ಗೆ ನಾವು ಆಶಾವಾದ ಹೊಂದಿದ್ದೇವೆ, ಇಂದಿನಿಂದ ನಾಳೆಗೆ ಎಲ್ಲವೂ ಸರಿ ಆಗುವುದಿಲ್ಲ, ಸರಕಾರ ನಮಗೆ ಒಪ್ಪಿಗೆ ನೀಡಬೇಕು, ವಿಮಾನ ಪ್ರಯಾಣ ಆರಂಭವಾಗಬೇಕು, ಬಳಿಕ ಆಟಗಾರರನ್ನು ಆಟಕ್ಕೂ ಮೊದಲು 14 ದಿನ ಕ್ವಾರೆಂಟೈನ್ನಲ್ಲಿ ಇಡಬೇಕು, ಹೀಗೆ…ಹಂತಹಂತವಾಗಿ ತೆಗೆದುಕೊಳ್ಳಬೇಕಿರುವ ಹಲವಾರು ಕ್ರಮಗಳು ಬಾಕಿ ಇವೆ, ಅದಕ್ಕೆಲ್ಲ ಸಾಕಷ್ಟು ಸಮಯ ಹಿಡಿಯಬಹುದು, ಈಗಲೇ ಏನನ್ನೂ ಹೇಳಲಾಗದು’ ಎಂದು ಜೋಹ್ರಿ ತಿಳಿಸಿದರು.