ಕಳ್ಳನಿಗೆ ಸೋಂಕು: ಜಡ್ಜ್, ಪೊಲೀಸರು ಕ್ವಾರಂಟೈನ್ಗೆ
ತಿರುವನಂತಪುರ ಸಮೀಪದ ನೆಡುಮಾಂಗಾಡ್ನಲ್ಲಿ ಘಟನೆ ; ಮದ್ಯ ಸಾಗಣೆ ಪ್ರಕರಣದಲ್ಲಿ ಬಂಧಿತ ವ್ಯಕ್ತಿಗೆ ಸೋಂಕು ದೃಢ
Team Udayavani, May 26, 2020, 6:42 AM IST
ಸಾಂದರ್ಭಿಕ ಚಿತ್ರ
ತಿರುವನಂತಪುರ: ಅಕ್ರಮ ಮದ್ಯ ಮಾರಾಟ ಪ್ರಕರಣದ ಆರೋಪಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರು, ಸರ್ಕಲ್ ಇನ್ಸ್ಪೆಕ್ಟರ್, ಪೊಲೀಸರು ಸೇರಿದಂತೆ 100ಯನ್ನು ಮಂದಿ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಅಕ್ರಮ ಮದ್ಯ ಸಾಗಣೆ ಸೇರಿದಂತೆ 2 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಆತನನ್ನು ತಿರುವನಂತಪುರ ಬಳಿಯ ನೆಡುಮಾಂಗಾಡ್ನ ಸ್ಥಳೀಯ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಹೀಗಾಗಿ ಆತನನ್ನು ಪೂಜಾಪುರ ಕೇಂದ್ರೀಯ ಕಾರಾಗೃಹದಲ್ಲಿ ಇರಿಸಲಾಗಿತ್ತು. ಎರಡು ದಿನಗಳ ಹಿಂದೆ ಬಂಧಿತನಿಗೆ ಕೋವಿಡ್ ಸೋಂಕು ಪತ್ತೆ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿತ್ತು. ಸರ್ಕಲ್ ಇನ್ಸ್ಪೆಕ್ಟರ್ ಸೇರಿದಂತೆ 34 ಪೊಲೀಸರ ಸಂಪರ್ಕದಲ್ಲಿ ಬಂಧಿತ ವ್ಯಕ್ತಿ ಇದ್ದನು. ಆತನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರು, ಪೊಲೀಸರು ಸೇರಿದಂತೆ 100 ಮಂದಿ ಕ್ವಾರಂಟೈನ್ಗೆ ಒಳಗಾಗುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.
ನಡುವೆ, ಸರ್ಕಲ್ ಇನ್ಸ್ಪೆಕ್ಟರ್ ಭಾಗಿಯಾಗಿದ್ದ ಸಭೆಯೊಂದರಲ್ಲಿ ಸಂಪರ್ಕಕ್ಕೆ ಬಂದಿದ್ದ ಮಲೆಯಾಳಂ ನಟ ಸೂರಜ್ ಹಾಗೂ ಶಾಸಕ ಡಿ.ಕೆ.ಮುರಳಿ ಕೂಡ ಸೆಲ್ಫ್ ಕ್ವಾರಂಟೈನ್ನಲ್ಲಿದ್ದಾರೆ. ಇತ್ತೀಚೆಗೆ ಲುಧಿಯಾನಾದಲ್ಲಿ ಕೂಡ ಬಂಧಿತನೊಬ್ಬನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಮತ್ತು ಇತರರು ಕ್ವಾರಂಟೈನ್ನಲ್ಲಿ ಇದ್ದರು.