ಬಾಲಕಾರ್ಮಿಕರನ್ನು ಹುಟ್ಟೂರಿಗೆ ಕಳುಹಿಸಲು ಪತ್ರ
Team Udayavani, May 31, 2020, 5:05 AM IST
ಬೆಂಗಳೂರು: ಬಾಲ ಕಾರ್ಮಿಕ ಸುಳಿಯಿಂದ ಪಾರಾದ ಅಂತಾರಾಜ್ಯ ಮತ್ತು ಅಂತರ ಜಿಲೆಯ ಮಕ್ಕಳನ್ನು ಕೊರೊನಾ ಹಿನ್ನೆಲೆ ಬಾಲಮಂದಿರದಲ್ಲಿ ಇರಿಸಲಾಗಿದ್ದು, ಅವರನ್ನು ಹುಟ್ಟೂರಿಗೆ ಕಳುಹಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಅಧಿಕಾರಿಗೆ ಪತ್ರ ಬರೆದಿದೆ.
ಲಾಕ್ ಡೌನ್ ಸಡಿಲಗೊಳ್ಳುತ್ತಿದ್ದು, ಕೇಂದ್ರ ಸರ್ಕಾರವು ರೈಲ್ವೆ ಸಂಚಾರಕ್ಕೆ ಅನುಮತಿ ನೀಡಿದೆ. ಆದ್ದರಿಂದ ಮಕ್ಕಳನ್ನು ಕಳುಹಿಸಲು ಇದು ಸಕಾಲವಾಗಿದೆ. ಮಕ್ಕಳನ್ನು ತಮ್ಮ ಊರುಗಳಿಗೆ ಕಳುಹಿಸಲು ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಉಲ್ಲೇಖೀಸಲಾಗಿದೆ. ಬಿಹಾರ್, ಪಶ್ಚಿಮ ಬಂಗಾಳ, ನಾಗಾಲ್ಯಾಂಡ್, ಒಡಿಶಾ, ಬಾಂಗ್ಲಾದೇಶ ದೇಶ ಸೇರಿದಂತೆ ಉತ್ತರ ಭಾರತಕ್ಕೆ ತೆರಳಬೇಕಾದ ಮಕ್ಕಳು ಬೆಂಗಳೂರಿನ ಬಾಲಮಂದಿರದಲ್ಲಿದ್ದಾರೆ.
ಈ ಮಕ್ಕಳಿಗೆ ಕೌನ್ಸೆಲಿಂಗ್ ಮಾಡಲಾಗಿದ್ದು, ಆಯಾ ರಾಜ್ಯಗಳ ಮಕ್ಕಳ ಕಲ್ಯಾಣ ಸಮಿತಿ ಜತೆ ಚರ್ಚಿಸಲಾಗಿದೆ. ಇಲಾಖೆ ಅಧಿಕಾರಿಗಳು, ಚೈಲ್ಡ ಲೈನ್ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ, ಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಲಾಗಿದೆ ಎಂದು ಸಮಿತಿಯ ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷೆ ಅಂಜಲಿ ರಾಮಣ್ಣ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಪ್ರಯಾಣ
ಬೆಂಗಳೂರು: ನಗರ ಜಿಲ್ಲಾಡಳಿತ ವ್ಯಾಪ್ತಿಯ ರಾಜಾನುಕುಂಟೆ ಗ್ರಾಪಂನಲ್ಲಿ ಆಶ್ರಯ ಪಡೆದಿದ್ದ ಪಶ್ಚಿಮ ಬಂಗಾಳ ಮೂಲದ 95 ಕಾರ್ಮಿಕರು ಸ್ವಗ್ರಾಮಕ್ಕೆ ತೆರಳಿದರು. ಬೆಂಗಳೂರು ಸಿ.ಟಿ ರೈಲ್ವೆ ನಿಲ್ದಾಣದಿಂದ ಎಲ್ಲಾ ಕಾರ್ಮಿಕರು ರೈಲಿನಲ್ಲಿ ಪಶ್ಚಿಮ ಬಂಗಾಳಕ್ಕೆ ತೆರಳಿದರು. ಕುಡಿಯವ ನೀರು ಮತ್ತು ಬಿಸ್ಕೆಟ್ ಸೇರಿದಂತೆ ಇನ್ನಿತರ ಆಹಾರ ಕಿಟ್ ಗಳನ್ನು ನೀಡಿ ಗ್ರಾಮ ಪಂಚಾಯ್ತಿ ಆಡಳಿತ ಮಾನವೀಯತೆ ಮೆರೆಯಿತು. ಈ ಎಲ್ಲಾ ಕಾರ್ಮಿಕರು ರಾಜಾನುಕುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಶ್ರಯ ಪಡೆದಿದ್ದರು.
ರೆಡ್ ಕ್ರಾಸ್ ಸಂಸ್ಥೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳು ಪ್ರತಿ ನಿತ್ಯ ಊಟದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದವು. ಕೊಲ್ಕತ್ತಾ ಮೂಲದ ವಲಸೆ ಕಾರ್ಮಿಕರು ಊರಿಗೆ ತೆರಳಲು ಸಿದರಾಗಿದ್ದರು. ಆದರೆ ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿದ್ದ ಚಂಡಮಾರುತದ ಹಿನ್ನೆಲೆಯಲ್ಲಿ ವಿಶೇಷ ರೈಲು ಓಡಾಟದಲ್ಲಿ ವಿಳಂಬವಾಗಿತ್ತು.