ಸೀಲ್ಡೌನ್ ಪ್ರದೇಶಕ್ಕೆ ಸಾರಾ ಭೇಟಿ
Team Udayavani, Jun 13, 2020, 5:06 AM IST
ಕೆ.ಆರ್.ನಗರ: ಪಟ್ಟಣದ ಮುಸ್ಲಿಂ ಬಡಾವಣೆಯಲ್ಲಿ ಗರ್ಭಿಣಿಗೆ ಕೋವಿಡ್ 19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲೆ ಹಾಗೂ ತಾಲೂಕು ಆಡಳಿತ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಶುಕ್ರವಾರ ಮಧ್ಯಾಹ್ನ ಸೀಲ್ಡೌನ್ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಮುಸ್ಲಿಂ ಬಡಾವಣೆಯ ನಾಗರೀಕರು ತಾಲೂಕು ಆಡಳಿತದೊಂದಿಗೆ ಸಹಕರಿಸಿ ಸಹನೆಯಿಂದ ವರ್ತಿಸಬೇಕು. ಏನೇ ಸಮಸ್ಯೆ ಇದ್ದರೂ ನನಗೆ ಮಾಹಿತಿ ನೀಡುವಂತೆ ಹೇಳಿದರು. ಸೋಂಕಿತ ವ್ಯಕಿತ ಮೂಲತಃ ಕೆ.ಆರ್.ಪೇಟೆಯವರು. ಕೆ.ಆರ್.ನಗರದಲ್ಲಿರುವ ತವರು ಮನೆಗೆ ಹೆರಿಗೆಗೆ ಬಂದಿದ್ದರು.
ಜೂ.9ರಂದು ಅವರು ಪಟ್ಟಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಸಾಮಾನ್ಯ ಪರೀಕ್ಷೆಗೆ ತೆರಳಿದ್ದ ವೇಳೆ ಸೋಂಕು ದೃಢಪಟ್ಟಿದೆ. ಆಕೆ ಸಂಚರಿಸಿದ್ದ ಮಾಹಿತಿ ಸಂಗ್ರಹಿಸಿ ಎರಡು ಔಷಧ ಅಂಗಡಿ, ಖಾಸಗಿ ಕ್ಲಿನಿಕ್ಗಳನ್ನು ಸೀಲ್ಡೌನ್ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದ 17 ಹಾಗೂ ದ್ವಿತೀಯ ಸಂಪರ್ಕವುಳ್ಳ 12 ಮಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ಪುರಸಭೆಯಿಂದ ಸೀಲ್ಡೌನ್ ಆಗಿರುವ ಪ್ರದೇಶದ ವ್ಯಾಪ್ತಿಗೆ ಸ್ಯಾನಿಟೈಸರ್ ಸಿಂಪಡಿಸಿ ಸುತ್ತ ಮುತ್ತಲಿನ ಜನರಿಗೆ ಮನೆಯಿಂದ ಹೊರಗೆ ಬರದಂತೆ ಎಚ್ಚರಿಸಿದರು. ತಹಶೀಲ್ದಾರ್ ಮಂಜುಳ, ಡಾ.ಮಹೇಂ ದ್ರಪ್ಪ, ಮುಖ್ಯಾಧಿಕಾರಿ ಕೆ.ಶಿವಣ್ಣ, ಸಿಪಿಐ ರಾಜು, ಪಿಎಸ್ಐ ಚೇತನ್ಕುಮಾರ್, ಸಹಾಯಕ ಆರೋಗ್ಯ ನಿರೀಕ್ಷಕ ರಮೇಶ್, ಆರೋಗ್ಯ ಶಿಕ್ಷಣಾಧಿಕಾರಿ ರೇಖಾ ಇತರರಿದ್ದರು.