ಒಂದೇ ದಿನ 5 ಸಾವಿರಕೂ ಅಧಿಕ ಮಂದಿ ಬಿಡುಗಡೆ
Team Udayavani, Jun 17, 2020, 10:04 AM IST
ಸಾಂದರ್ಭಿಕ ಚಿತ್ರ
ಮುಂಬಯಿ, ಜೂ. 16: ರಾಜ್ಯಾದ್ಯಂತ 5,000ಕ್ಕೂ ಅಧಿಕ ಸೋಂಕಿತರು ಸೋಮವಾರದಂದು ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಹೊಂದಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಗರಿಷ್ಠ ಸಂಖ್ಯೆಯ ಸೋಂಕು ಪತ್ತೆಯಾಗಿರುವುದರಿಂದ ಈ ಬೆಳವಣಿಗೆ ರಾಜ್ಯ ಆಡಳಿತಕ್ಕೆ ಸಮಾಧಾನ ತಂದಿದೆ. 5,000 ಸೋಂಕಿತರ ಬಿಡುಗಡೆಯಿಂದ ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 53,017ರಿಂದ 50,554ಕ್ಕೆ ಇಳಿಸಿದೆ. ಈ ಮಧ್ಯೆ ಸೋಮವಾರ 2,786 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದು ರಾಷ್ಟ್ರೀಯ ಸರಾಸರಿ ಚೇತರಿಕೆ ದರಕ್ಕೆ ಸಮನಾಗಿ ಚೇತರಿಕೆ ದರವು ಶೇ. 50.61ರಷ್ಟು ಸುಧಾರಿಸಿದಂತಾಗಿದೆ. ಸೋಮವಾರ ಬಿಡುಗಡೆಯಾದವರಲ್ಲಿ 4,242 ಮಂದಿ ಮುಂಬಯಿ ಮೂಲದವರು ಎಂದು ತಿಳಿದು ಬಂದಿದೆ. ಇಲ್ಲಿಯವರೆಗೆ ನಾವು 56,089 ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ ತಿಳಿಸಿದ್ದಾರೆ.
ಮುಂಬಯಿಯಲ್ಲಿ ಈವರೆಗೆ ಒಟ್ಟು 39,976 ಸೋಂಕಿತರು ಚೇತರಿಸಿಕೊಂಡಿದ್ದಾರೆ. ನಗರದಲ್ಲಿ 59,293 ಸೋಂಕಿತರಿದ್ದು, ಅವರಲ್ಲಿ 26,910 ರೋಗಿಗಳು ಸಕ್ರಿಯರಾಗಿದ್ದಾರೆ. ಈ ಹಿಂದೆ ಮೇ 29ರಂದು ದಾಖಲೆಯ 8,381 ರೋಗಿಗಳು ಚೇತರಿಸಿಕೊಂಡು ರಾಜ್ಯದ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ರಾಜ್ಯದ ಮರಣ ಪ್ರಮಾಣವು ಮೇ 25ರಂದು ಶೇ. 3.25ರಿಂದ ಶೇ. 3.73ಕ್ಕೆ ಏರಿದ್ದು, ಜೂನ್ ಮೊದಲ ಹದಿನೈದು ದಿನಗಳಲ್ಲಿ ರಾಜ್ಯವು 1,842 ಸಾವುಗಳನ್ನು ದಾಖಲಿಸಿದೆ. ಕಳೆದ 15 ದಿನಗಳಲ್ಲಿ ರಾಜ್ಯದಲ್ಲಿ ಒಟ್ಟು ಶೇ. 44.62ರಷ್ಟು ಸಾವು ದಾಖಲಾಗಿವೆ. ಕಳೆದ ಹದಿನೈದು ದಿನಗಳಲ್ಲಿ ಕೋವಿಡ್-19 ಸಾವಿನ ಪ್ರಕರಣಗಳಲ್ಲಿ ಏರಿಕೆಯಾಗಿವೆ ಎಂದು ರಾಜ್ಯ ಆರೋಗ್ಯ ಆಯುಕ್ತ ಅನುಪ್ ಕುಮಾರ್ ಯಾದವ್ ಹೇಳಿದ್ದಾರೆ.