ಫಡ್ನವೀಸ್ಗೆ ಶರದ್ ಪವಾರ್ “ಸಾಮ್ನಾ’ ಮೂಲಕ ತಿರುಗೇಟು
Team Udayavani, Jul 12, 2020, 11:36 AM IST
ಮುಂಬಯಿ: ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ಗೆ ಎನ್ಸಿಪಿ ನೇತಾರ ಶರದ್ ಪವಾರ್ ಶಿವಸೇನೆ ಮುಖವಾಣಿ “ಸಾಮ್ನಾ’ ಮೂಲಕ ತಿರುಗೇಟು ನೀಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ “ನಾನು ಮತ್ತೆ ಅಧಿಕಾರಕ್ಕೆ ಬರುತ್ತೇನೆ’ ಎಂಬ ದೇವೇಂದ್ರ ಫಡ್ನವೀಸ್ ಹೇಳಿಕೆಯನ್ನು ಉಲ್ಲೇಖೀಸಿ ಪ್ರತಿಕ್ರಿಯೆ ನೀಡಿರುವ ಶರದ್ ಪವಾರ್, ಈ ಹೇಳಿಕೆ ಅಹಂಕಾರದಿಂದ ಕೂಡಿದೆ ಎಂಬುದು ಮತದಾರರಿಗೆ ಗೊತ್ತಾಗಿದ್ದರಿಂದ ಅವರು ತಕ್ಕ ಪಾಠ ಕಲಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಾಮಾನ್ಯರು ರಾಜ ಕಾರಣಿಗಳಿಗಿಂತ ಬುದ್ಧಿವಂತರಿದ್ದಾರೆ. ನಾವು ಹಾದಿ ತಪ್ಪಿದರೆ ಮತದಾರರು ಪಾಠ ಕಲಿಸುತ್ತಾರೆ. ಶಾಶ್ವತವಾಗಿ ಅಧಿಕಾರ ದಲ್ಲಿ ಇರುತ್ತೇವೆ ಎಂದು ಭಾವಿಸಬಾರದು. ಚುನಾವಣೆಯಲ್ಲಿ ಬಲಿಷ್ಠ ನಾಯಕರಾದ ಇಂದಿರಾ ಗಾಂಧಿ ಹಾಗೂ ವಾಜಪೇಯಿ ಕೂಡ ಸೋತಿದ್ದಾರೆ. ಹೀಗಾಗಿ ರಾಜ ಕಾರಣಿಗಳು ಮತದಾರರನ್ನು ಲಘುವಾಗಿ ಪರಿಗಣಿಸಬಾರದು ಎಂದಿದ್ದಾರೆ.
ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಶರದ್ ಪವಾರ್ “ಸಾಮ್ನಾ’ಗೆ ಸರಣಿ ಸಂದರ್ಶನ ನೀಡಿದ್ದಾರೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ಅಘಾಡಿ ಸರಕಾರ ಚೆನ್ನಾಗಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.