ಲ್ಯಾಬ್ ಟೆಕ್ನಿಶಿಯನ್ ಕೊಲೆ ಪ್ರಕರಣ: ಐಪಿಎಸ್ ಅಧಿಕಾರಿ, ಡಿಎಸ್ಪಿ ಅಮಾನತು
30 ಲಕ್ಷ ರೂಪಾಯಿ ಲಂಚ ಪಾವತಿಸುವಂತೆ ಪೊಲೀಸರು ಸಂಜೀತ್ ಕುಟುಂಬದವರಲ್ಲಿ ಕೇಳಿದ್ದರು
Team Udayavani, Jul 24, 2020, 4:26 PM IST
Sanjeet Yadav
ಕಾನ್ಪುರ್:ಲ್ಯಾಬ್ ಟೆಕ್ನಿಶಿಯನ್ ಸಂಜೀತ್ ಯಾದವ್ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಶುಕ್ರವಾರ(ಜುಲೈ24) ಐಪಿಎಸ್ ಅಧಿಕಾರಿ ಅಪರ್ಣಾ ಗುಪ್ತಾ ಮತ್ತು ಡೆಪ್ಯುಟಿ ಎಸ್ಪಿ ಮನೋಜ್ ಗುಪ್ತಾ ಮತ್ತು ಇಬ್ಬರು ಪೊಲೀಸರನ್ನು ಅಮಾನತು ಮಾಡಿರುವುದಾಗಿ ವರದಿ ತಿಳಿಸಿದೆ.
ಈಗಾಗಲೇ ಕರ್ತವ್ಯಲೋಪ ಆರೋಪದ ಮೇಲೆ ಬರ್ರಾ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಂಜಿತ್ ರಾಯ್ ಮತ್ತು ಚೌಕಿ ಇನ್ ಚಾರ್ಜ್ ರಾಜೇಶ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿತ್ತು ಎಂದು ವರದಿ ವಿವರಿಸಿದೆ.
ಜೂನ್ 22ರಂದು ಸಂಜೀತ್ ಅವರನ್ನು ಅಪಹರಿಸಿದ ಪ್ರಕರಣದ ಬಗ್ಗೆ ಐಪಿಎಸ್ ಅಧಿಕಾರಿ ಬಿ.ಪಿ.ಜೋಗ್ಡಾಂಡ್ ಅವರು ತನಿಖೆ ನಡೆಸುವಂತೆ ಉತ್ತರಪ್ರದೇಶ ಸರ್ಕಾರ ಸೂಚಿಸಿದೆ. ಅಲ್ಲದೇ ಜುಲೈ 13ರಂದು 30 ಲಕ್ಷ ರೂಪಾಯಿ ಲಂಚ ಪಾವತಿಸುವಂತೆ ಪೊಲೀಸರು ಸಂಜೀತ್ ಕುಟುಂಬದವರಲ್ಲಿ ಕೇಳಿದ್ದರು ಎಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆ ನಿರ್ದೇಶನ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಗೆಳೆಯರು ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಸಂಜೀತ್ ಅವರನ್ನು ಜೂನ್ 26, 27ರಂದು ಹತ್ಯೆಗೈಯಲಾಗಿತ್ತು. ನಂತರ ಪಾಂಡು ನದಿಗೆ ಶವವನ್ನು ಎಸೆಯಲಾಗಿತ್ತು ಎಂದು ತಿಳಿಸಿದ್ದಾರೆ.