ಜಿಲ್ಲಾದ್ಯಂತ ಬಕ್ರೀದ್ ಆಚರಣೆ
Team Udayavani, Aug 2, 2020, 9:43 AM IST
ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಶನಿವಾರ ಮುಸ್ಲಿಂ ಸಮುದಾಯದವರು ಕೋವಿಡ್ ಹಿನ್ನೆಲೆಯಲ್ಲಿ ಜಾಮೀಯಾ ಮಸೀದಿಗಳ ಬಳಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಜಿಲ್ಲಾಡಳಿತ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಮೆರವಣಿಗೆ ಹಾಗೂ ಪ್ರಾರ್ಥನೆಗೆ ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಗುಂಪು ಸೇರದೇ 50 ಸಂಖ್ಯೆಯ ಮಿತಿಯೊಳಗೆ ಮಸೀದಿಗಳಿಗೆ ಆಗಮಿಸಿ ಪ್ರಾರ್ಥನೆ ಮಾಡಿದ ದೃಶ್ಯಗಳು ಸಾಮಾನ್ಯವಾಗಿತ್ತು. ಮಸೀದಿಗಳಲ್ಲಿ ವಿಶೇಷ ಉಪನ್ಯಾಸ ನೀಡಿದ ಧರ್ಮಗುರುಗಳು, ಬಕ್ರೀದ್ ತ್ಯಾಗ, ಬಲಿದಾನದ ಸಂಕೇತವಾಗಿದ್ದು, ಉಳ್ಳವರು ಸಮಾಜದಲ್ಲಿರುವ ಬಡವರನ್ನು ಮುಖ್ಯವಾಹಿನಿಗೆ ತರಬೇಕು ಎಂದರು.
ನಗರದ ಟೌನ್ಹಾಲ್ ಸಮೀಪದ ಜಾಮೀಯಾ ಮಸೀದಿ, ಬಿಬಿ ರಸ್ತೆಯಲ್ಲಿರುವ ಮಸೀದಿ ಕುರುದು, ದರ್ಗಾ ಮೊಹಲ್ಲಾದ ಶಮ್ಸ್ ಮಸೀದಿ, ಶಾಂತಿ ನಗರದ ಹುಸೇನಿಯಾ ಮಸೀದಿ ಸೇರಿದಂತೆ 12 ಕಡೆಗಳಲ್ಲಿ ಪ್ರಾರ್ಥನೆಗೆ ಜಿಲ್ಲಾಡಳಿತ ಅವಕಾಶ ನೀಡಿತ್ತು. ಅಹಿತಕರ ಘಟನೆಗಳಿಗೆ ಅವಕಾಶ ಇಲ್ಲದಂತೆ ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.