ಜೀವನದ ಕೊನೆಯ ಟ್ರಿಪ್ ಆದ ದಿನದ ಕೊನೆಯ ಟ್ರಿಪ್ : ಹೊಂಡಕ್ಕೆ ಟಿಪ್ಪರ್ ಬಿದ್ದು ಇಬ್ಬರು ಸಾವು
Team Udayavani, Aug 8, 2020, 8:26 AM IST
ಬೆಳ್ಮಣ್: ರಸ್ತೆಬದಿಯ ನೀರಿನ ಹೊಂಡಕ್ಕೆ ಟಿಪ್ಪರ್ ಬಿದ್ದು ಚಾಲಕ ಮತ್ತು ಕ್ಲೀನರ್ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಪಳ್ಳಿ ನಿಂಜೂರು ಬಳಿ ಶುಕ್ರವಾರ ಸಂಜೆ ನಡೆದಿದೆ.
ಚಾಲಕ ಕಾರ್ಕಳ ಕುಕ್ಕುಂದೂರಿನ ಅರುಣ್ ಕುಮಾರ್, ಕ್ಲೀನರ್ ತಮಿಳು ನಾಡು ಮೂಲದ ಯುವಕ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಮತ್ತೋರ್ವ ವಾಹನದಿಂದ ಎಸೆಯಲ್ಪಿಟ್ಟಿದ್ದು, ಗಾಯಗೊಂಡಿದ್ದಾರೆ.
ಮೃತ ಚಾಲಕ ಅರುಣ್ ಕುಮಾರ್ ಅವರು ಬಸ್ ಚಾಲಕರಾಗಿದ್ದು, ಸದ್ಯ ಕೋವಿಡ್ ಕಾರಣದಿಂದ ಬಸ್ ಟ್ರಿಪ್ ಕಡಿತವಾದ ಕಾರಣ ಟಿಪ್ಪರ್ ಚಾಲಕರಾಗಿ ದುಡಿಯುತ್ತಿದ್ದರು.
ಶುಕ್ರವಾರ ಸಂಜೆ ದಿನದ ಕೊನೆಯ ಟ್ರಿಪ್ ಆಗಿ ಜಾರ್ಕಳದಿಂದ ನಿಂಜೂರಿಗೆ ಕಲ್ಲು ಕೊಂಡೊಯ್ಯುತ್ತಿದ್ದರು. ಈ ವೇಳೆ ಪಳ್ಳಿ ನಿಂಜೂರು ಬಳಿ ನಿಯಂತ್ರಣ ತಪ್ಪಿ ನೀರಿನ ಹೊಂಡಕ್ಕೆ ಬಿದ್ದಿದೆ. ಟಿಪ್ಪರ್ ಪಲ್ಟಿಯಾದ ಕಾರಣ ಅದರಿಂದ ಹೊರಬರಲಾಗದೆ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.