ಎಲ್ ಎಸಿ ಮತ್ತು ಎಲ್ಒಸಿ; ಪ್ರಧಾನಿ ನರೇಂದ್ರ ಮೋದಿ ಗುಡುಗಿಗೆ ಮೆತ್ತಗಾದ ಚೀನಾ
ಕ್ರಾಸ್ ಬಾರ್ಡರ್ ಪೆಟ್ರೋಲಿಯಂ ಪೈಪ್ಲೈನ್ ಅನ್ನೂ ನಿರ್ಮಿಸಲಾಗುತ್ತಿದೆ.
Team Udayavani, Aug 18, 2020, 9:57 AM IST
ಬೀಜಿಂಗ್/ ನವದೆಹಲಿ: “ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸಲು ಬಂದವರಿಗೆ ಎಲ್ ಎಸಿ ಮತ್ತು ಎಲ್ಒಸಿಯಲ್ಲಿ, ನಮ್ಮ ಸೇನೆ ತನ್ನದೇ ಭಾಷೆಯಲ್ಲಿ ಸೂಕ್ತ ಪ್ರತ್ಯುತ್ತರಿಸಿದೆ’ -ಆ.15ರಂದು ಕೆಂಪುಕೋಟೆ ಮೇಲೆ ನಿಂತು ತಿರಂಗಾ ಧ್ವಜ ಹಾರಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದೇ ಹೇಳಿದ್ದು, ಚೀನಾ ಇದೀಗ ಮೆತ್ತಗಾಗಿದೆ.
ಮೋದಿ ಅವರ ಈ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ವಿದೇಶಿ ಪತ್ರಕರ್ತರೊಬ್ಬರು ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ ಝಾವೋ ಲಿಜಿಯಾನ್ ಅವರಿಗೆ ಕೇಳಿದ್ದರು. “ಮೋದಿ ಅವರ ಭಾಷಣವನ್ನು ನಾನೂ ಕೇಳಿದೆ. ಭಾರತ- ಚೀನಾ ನೆರೆಹೊರೆಯ ನಿಕಟವರ್ತಿಗಳು. ಒಂದು ಶತಕೋಟಿಗೂ ಹೆಚ್ಚು ಜನರನ್ನು ಹೊಂದಿರುವ ರಾಷ್ಟ್ರಗಳು. ಉಭಯರಾಷ್ಟ್ರಗಳ ಜನರ ಹಿತಾಸಕ್ತಿ ಮಾತ್ರವಲ್ಲದೆ,ಶಾಂತಿ, ಸ್ಥಿರತೆ ಕಾಪಾಡುವುದು, ಪರಸ್ಪರ ಅಭಿವೃದ್ಧಿಗೆ ಕೈಜೋಡಿಸುವುದು ಇಡೀ ಜಗತ್ತಿಗೆ ಸಹಕಾರಿಯಾಗಿದೆ’ ಎಂದು ಹೇಳಿದ್ದಾರೆ.
ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ: ಗಡಿನಕ್ಷೆ ವಿವಾದದ ಬಳಿಕ ಇದೇ ಮೊದಲ ಬಾರಿಗೆ ಭಾರತ ಮತ್ತು ನೇಪಾಳ ನಡುವೆ ಉನ್ನತ ರಾಜತಾಂತ್ರಿಕ ಮಟ್ಟದ ಸಭೆ ಸೋಮವಾರ ನಡೆಯಿತು. ಭೂಕಂಪದಿಂದ ತತ್ತರಿಸಿರುವ ನೇಪಾಳದ ಗೋರ್ಖಾ ಮತ್ತು ನುವಾಕೋಟ್ ಜಿಲ್ಲೆಗಳಲ್ಲಿ ಭಾರತದ ಆರ್ಥಿಕ ನೆರವಿನೊಂದಿಗೆ 46,031 ಮನೆಗಳನ್ನು ಮರುನಿರ್ಮಿಸಲಾಗುತ್ತಿದೆ. ಕ್ರಾಸ್ ಬಾರ್ಡರ್ ಪೆಟ್ರೋಲಿಯಂ ಪೈಪ್ಲೈನ್ ಅನ್ನೂ ನಿರ್ಮಿಸಲಾಗುತ್ತಿದೆ. ಇವುಗಳೊಂದಿಗೆ ವಿವಿಧ ಕಾಮಗಾರಿಗಳ ಸಮಗ್ರ ಪರಿಶೀಲನೆಯನ್ನು ಭಾರತ ನಡೆಸಿತು.
ಕೊರೊನಾ ಸಂದರ್ಭದಲ್ಲಿ ಭಾರತ ನೀಡಿದ ವೈದ್ಯಕೀಯ ನೆರವನ್ನು ನೇಪಾಳ ಸ್ಮರಿಸಿತು. ನೇಪಾಳದ ಭಾರತೀಯ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ, ನೇಪಾಳದ ವಿದೇಶಾಂಗ ಕಾರ್ಯದರ್ಶಿ ಶಂಕರ್ದಾಸ್ ಬೈರಗಿ ಸಭೆಯ ನೇತೃತ್ವ ವಹಿಸಿದ್ದರು.