ಆನ್ಲೈನ್ ಕಂಪೆನಿಗಳಿಂದ ಸಮಸ್ಯೆ: ಮೊಬೈಲ್ ವ್ಯಾಪಾರಿಗಳ ಆತಂಕ
Team Udayavani, Aug 26, 2020, 12:43 AM IST
ಉಡುಪಿ: ಇತ್ತೀಚೆಗೆ ತಲೆಎತ್ತಿರುವ ಆನ್ಲೈನ್ ಕಂಪೆನಿಗಳಿಂದಾಗಿ ಹಲವಾರು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಎಲ್ಲ ಚೈನೀಸ್ ಮೊಬೈಲ್ ಕಂಪೆನಿಗಳು ಸಾಥ್ ನೀಡುತ್ತಿವೆ. ಇದು ಹೀಗೆಯೇ ಮುಂದುವರಿದರೆ ವ್ಯಾಪಾರ ಅವನತಿಯತ್ತ ಸಾಗುವುದರಲ್ಲಿ ಸಂಶಯವಿಲ್ಲ ಎಂದು ದ.ಕ., ಉಡುಪಿ ಮೊಬೈಲ್ ರಿಟೈಲರ್ ಅಸೋಸಿಯೇಶನ್ ಕಾರ್ಯದರ್ಶಿ ಮುನೀರ್ ಹೇಳಿದರು.
ಕರಾವಳಿ ಬೈಪಾಸ್ ಬಳಿಯ ಮಣಿಪಾಲ ಇನ್ಹೊಟೇಲ್ನಲ್ಲಿ ಮಂಗಳವಾರ ನಡೆದ ಉಡುಪಿ, ಕುಂದಾಪುರ ಮತ್ತು ಕಾರ್ಕಳ ಮೊಬೈಲ್ ರಿಟೈಲರ್ಸ್ ಸಭೆಯಲ್ಲಿ ಅವರು ಮಾತನಾಡಿದರು. ಆನ್ಲೈನ್ ಮೊಬೈಲ್ ಕಂಪೆನಿಗಳು ಮತ್ತು ಮೊಬೈಲ್ ಕಂಪೆನಿಗಳಿಂದ ನ್ಯಾಯ ಸಿಗಬೇಕಾದರೆ ಪ್ರತಿಯೊಬ್ಬ ಮೊಬೈಲ್ ವ್ಯಾಪಾರಸ್ಥರು ಎಐಎಂಆರ್ಎ ಯೊಂದಿಗೆ ಕೈಜೋಡಿಸಬೇಕು. ಟ್ವಿಟರ್ ಮೂಲಕ ನಿರಂತರ ಟ್ವೀಟ್ ಮಾಡಬೇಕು. ಈ ಮೂಲಕ ಸರಕಾರಕ್ಕೆ ನಮ್ಮ ಕೂಗು ಕೇಳಿಸಿಕೊಳ್ಳಬೇಕು ಎಂದರು. ಆನ್ಲೈನ್ ಹಿಂದೆ ಹೋದರೆ ಅಂಗಡಿ ಸಿಬಂದಿ, ಡಿಸ್ಟ್ರಿಬ್ಯೂಟರ್ಗಳು, ಎಎಸ್ಎಂ, ಆರ್ಎಸ್ಎಂಗಳು ಬೀದಿಗೆ ಬರಲಿದ್ದಾರೆ. ಈ ಬಗ್ಗೆ ಸರಕಾರ ಕೂಡ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಅನ್ಯಾಯವಾಗದಿರಲಿ
ಎಐಎಂಆರ್ಎ ಉಡುಪಿಯ ಕಾರ್ಯದರ್ಶಿ ವಿವೇಕ ಜಿ. ಸುವರ್ಣ (ವಿಕ್ಕಿ) ಮಾತನಾಡಿ, ಆನ್ಲೈನ್ ಕಂಪೆನಿಗಳು ಮತ್ತು ಮೊಬೈಲ್ ಕಂಪೆನಿಗಳಿಂದ ನ್ಯಾಯ ಸಿಗಬೇಕಾದರೆ ಪ್ರತಿಯೊಬ್ಬ ಮೊಬೈಲ್ ವ್ಯಾಪಾರಸ್ಥರು ಆಲ್ ಇಂಡಿಯಾ ಮೊಬೈಲ್ ರಿಟೈಲರ್ಸ್ ಅಸೋಸಿಯೇಶನ್(ಎಐಎಂಆರ್ಎ)ನೊಂದಿಗೆ ಕೈಜೋಡಿಸಬೇಕು. ಮೊಬೈಲ್ ಉದ್ಯೋಗದಲ್ಲಿ ಯುವಜನರೇ ಅಧಿಕವಾಗಿದ್ದು, ಸರಕಾರದ ಯಾವುದೇ ಸೌಲಭ್ಯ ಪಡೆಯದೆ ಸೊದ್ಯೋಗದಲ್ಲಿ ತೊಡಗಿರುವುದಲ್ಲದೆ ಅನೇಕ ಮಂದಿಗೆ ಉದ್ಯೋಗ ಕೊಟ್ಟು ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿದ್ದಾರೆ. ಸರಕಾರ ಕೂಡಲೇ ಎಚ್ಚೆತ್ತುಕೊಂಡು ಸ್ಥಳೀಯ ವ್ಯಾಪಾರಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಕೂಡಲೇ ಪರಿಹರಿಸಬೇಕು ಎಂದರು.
ದ.ಕ., ಉಡುಪಿ ಮೊಬೈಲ್ ರಿಟೈಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಸಲೀಂ, ಉಪಾಧ್ಯಕ್ಷ ಅಝರ್, ಎಐಎಂಆರ್ಎ ಉಡುಪಿ ಅಧ್ಯಕ್ಷ ಸುಹಾಸ್ ಕಿಣಿ ಉಪಸ್ಥಿತರಿದ್ದರು. ವಿವೇಕ ಜಿ. ಸುವರ್ಣ(ವಿಕ್ಕಿ) ಸ್ವಾಗತಿಸಿ, ನಿರ್ವಹಿಸಿದರು.