ಲೇಡಿಗೋಶನ್ನಲ್ಲಿ ಸಮಸ್ಯೆ ಆಗದಂತೆ ಕ್ರಮ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ
Team Udayavani, Oct 5, 2020, 10:01 AM IST
ಮಂಗಳೂರು: ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ)ನೌಕರರ ಪ್ರತಿಭಟನೆ ಕಾರಣದಿಂದ ಲೇಡಿಗೋಶನ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿರುವ “ಉದಯವಾಣಿ’ ವರದಿ ಗಮನಿಸಿದ್ದೇನೆ. ಈ ಬಗ್ಗೆ ಆಸ್ಪತ್ರೆ ಅಧೀಕ್ಷಕರಿಂದ ವಿವರಣೆ ಪಡೆಯಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ನವಜಾತ ಶಿಶುಗಳ ವಿಭಾಗ ಭರ್ತಿಯಾಗಿರುವ ಕಾರಣ ವೆಂಟಿಲೇಟರ್ ಆವಶ್ಯಕತೆ ಇರುವ ಮಕ್ಕಳನ್ನು ಆಯುಷ್ಮಾನ್ ಭಾರತ್ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗಿದೆಯೇ ವಿನಃ ಮುಷ್ಕರ ಕಾರಣದಿಂದ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿಲ್ಲ ಎಂದರು.
ಲೇಡಿಗೋಶನ್ನಲ್ಲಿರುವ ಮೂವರು ಎನ್ಎಚ್ಎಂ ವೈದ್ಯರು ಮುಷ್ಕರದಲ್ಲಿ ಭಾಗಿ ಯಾಗಿದ್ದು, ಅಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಇತರ ವೈದ್ಯರು, ಇತರ ಸಿಬಂದಿ ಮೇಲೆ ಸಹಜವಾಗಿ ಸ್ವಲ್ಪ ಒತ್ತಡ ಇದೆ. ಆದರೆ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಆಸ್ಪತ್ರೆಯ ವತಿಯಿಂದ ನೋಡಿಕೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ :ಮುನ್ನೆಚ್ಚರಿಕೆಯೊಂದಿಗೆ ಮಂಗಳೂರು ದಸರಾ : ಈ ಬಾರಿ ದಸರಾ ಮೆರವಣಿಗೆ ಇಲ್ಲ