ಪರಿಸರ ಕೌತುಕದ ಕರ್ವಾಲೊ
Team Udayavani, Nov 6, 2020, 4:57 AM IST
ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.
ಒಂದೇ ಸಾಲಿನಲ್ಲಿ ಹೇಳುವುದಾದರೆ “ಕರ್ವಾಲೊ’ ಸೃಜನಶೀಲವಾಗಿದೆ. ನಿರೂಪಣೆ, ವಸ್ತುವಿನ ಆಯ್ಕೆ-ಹೀಗೆ ಎಲ್ಲದರಲ್ಲೂ ಲೇಖಕ ರಾದ ತೇಜಸ್ವಿಯವರು ತೋರಿಸಿರುವ ಸೃಜನ ಶೀಲತೆ ಪ್ರಶಂಸನೀಯ. ಬದುಕಿನ ಅನುಭವ ಗಳನ್ನೇ ಕಾದಂಬರಿಯ ರೂಪಕ್ಕಿಳಿ ಸಿರುವ ರೀತಿ ಗಮನಾರ್ಹ. ತಮಾಷೆಯಲ್ಲೇ ಸಾಗುವ “ಕರ್ವಾಲೊ’ ಪಯಣ ಕೊನೆ ಕೊನೆಗೆ ವೈಜ್ಞಾನಿ ಕತೆ ಮತ್ತು ವೈಚಾರಿಕತೆಯ ವಿವಿಧ ಮಜಲುಗಳಿಗೆ ತೆರೆ ದುಕೊಳ್ಳುತ್ತದೆ. ಮನುಷ್ಯ, ಪರಿಸರ ಉಳಿಸಿಕೊಂಡಿರುವ ಅಚ್ಚರಿಗಳು, ಜೈವಿಕ ಪ್ರಭೇ ದಗಳು, ಹಳ್ಳಿ ಸೊಗಡು, ಸಾಮಾನ್ಯರಲ್ಲಿ ಸಾಮಾನ್ಯರ ಜೀವನಶೈಲಿ.. ಹೀಗೆ ಜೀವ ನಕ್ಕೆ ಹತ್ತಿರವಾದ ಹಲವಾರು ವಿಷಯಗಳ ರಸಾಯನವಾಗಿ ಕರ್ವಾಲೊ ಮೈದಳೆದಿದೆ.
ಪೂರ್ಣಚಂದ್ರ ತೇಜಸ್ವಿಯವರು ಕಾದಂಬ ರಿಯ ನಾಯಕ ಮತ್ತು ನಿರೂಪಕ. ಅವರು ಆರಂಭದಲ್ಲಿ ಜೇನುತುಪ್ಪ ಖರೀದಿಸಲೆಂದು ಹೋದಾಗ ಆಗುವ ಅನಿರೀಕ್ಷಿತ ಗೆಳೆತನವನ್ನು ಕಥೆಗಿಳಿಸುವುದು ಮೊದಲ ಹೆಜ್ಜೆ. ಮಳಿಗೆಯಲ್ಲಿ ಕೆಲಸ ಮಾಡುವ ಲಕ್ಷ್ಮಣ ಮತ್ತು ಮಂದಣ್ಣ ಎಂಬ ಇಬ್ಬರು ಅಂದಿನ ಕಾಲದಲ್ಲೇ ಸೆಲೆಬ್ರಿಟಿ ಯಾಗಿದ್ದ ತೇಜಸ್ವಿಯವರಿಗೆ ಕಡಿಮೆ ಬೆಲೆಗೆ ಹೆಚ್ಚು ಜೇನುತುಪ್ಪವನ್ನು ಮಾರುತ್ತಾರೆ.
ವ್ಯವಹಾರದಲ್ಲಿ ಮೋಸವಿರುವ ಗುಮಾನಿಯಿ ದ್ದರೂ ತೇಜಸ್ವಿಯವರು ಅದನ್ನು ಕೊಳ್ಳುತ್ತಾರೆ. ಮನೆಗೆ ಹೋಗಿ ನೋಡಿದಾಗ ಕೊಬ್ಬರಿ ಎಣ್ಣೆಯಂತೆ ಕಾಣುತ್ತಿದೆ ಎಂದು ಕೆಲಸದಾಳು ಪ್ಯಾರಾ ಹೇಳುತ್ತಾನೆ. ಇದರಿಂದ ತೇಜಸ್ವಿಗೆ ಕೋಪವೂ ಬರುತ್ತದೆ.
ಜೇನು ಖರೀದಿಸಿ ಬಂದಿದ್ದ ತೇಜಸ್ವಿ ಸ್ವಲ್ಪ ಹಣ ವನ್ನು ಬಾಕಿ ಇರಿಸಿಕೊಂಡಿದ್ದರು. ನಕಲಿ ತುಪ್ಪ ನೀಡಿ ವಂಚಿಸಿದ್ದ ಕೋಪದಲ್ಲೇ ಅವರು ಬಾಕಿ ಹಣವನ್ನು ನೀಡಲು ಹೋದರು. ಆಗ ಮಂದಣ್ಣ ವಿವಿಧ ಜೇನುಹುಳುಗಳ ಕುರಿತು ತಿಳಿಸುತ್ತಾನೆ. ಮೊದಲಿಗೆ ಕೇವಲ ಜೇನು ತುಪ್ಪ ವನ್ನು ಖರೀದಿಸಲು ಹೋಗಿದ್ದ ಲೇಖಕರು ಮಂದಣ್ಣನ ವಿವರಣೆಯಿಂದಾಗಿಯೋ ಅಥವಾ ತಮ್ಮ ಪರಿಸರದೆಡೆಗಿನ ಅದಮ್ಯ ಅಚ್ಚರಿಗಳಿಂದಲೋ ಅವನ ಉಸ್ತುವಾರಿಯಲ್ಲಿ ಕೊನೆಗೆ ಜೇನನ್ನು ಸಾಕುವ ಸಾಹಸಕ್ಕೇ ಕೈ ಹಾಕುತ್ತಾರೆ.
ಇಲ್ಲಿ ನಾಯಕ ತೇಜಸ್ವಿಯವರಾದರೂ ಮಂದ ಣ್ಣನೂ ಅಷ್ಟೇ ಮುಖ್ಯವೆನಿಸುತ್ತಾನೆ. ತಮಾಷೆ ಯಿಂದ ಶುರುವಾಗಿ ಲೇಖಕರನ್ನು ಜೀವವಿಕಾಸ ದೆಡೆಗೆ ಕರೆದೊಯ್ದುದರಲ್ಲಿ ಅವನ ಪಾತ್ರ ದೊಡ್ಡದು. ಜೀವವಿಕಾಸ, ಜೇನುತುಪ್ಪ ಮಾತ್ರವಲ್ಲದೇ ಸಮಾಜದ ಓರೆಕೋರೆಗಳ ಬಗ್ಗೆಯೂ ಮುಕ್ತವಾಗಿ ಬರೆದಿ¨ªಾರೆ. ಮದುವೆ ಮತ್ತು ಅದಕ್ಕೆ ಅಂಟಿಕೊಂಡಿರುವ ಕೊಂಡಿ ಗಳು, ದೊಡ್ಡವರ ಸಣ್ಣತನ, ಕೃಷಿ, ಕಳ್ಳಭಟ್ಟಿ, ಪೊಲೀಸರು ಸಹಿತ ಹತ್ತು ಅನೇಕ ವಿಷಯಗಳು ಕಾದಂಬರಿ ಯಲ್ಲಿವೆ. ಲೇಖಕರ ನೆಚ್ಚಿನ ನಾಯಿಯಾದ ಕಿವಿ, ಬಿರಿಯಾನಿ ಕರಿಯಪ್ಪ , ಪ್ರಭಾಕರ ಮತ್ತು ಇತರ ಪಾತ್ರಗಳು ಕಾದಂಬ ರಿಯ ಓಘಕ್ಕೆ ಸಹಕರಿಸಿವೆ.
ಈ ಪಾತ್ರಗಳು ಸಹ್ಯಾದ್ರಿಯ ತಪ್ಪಲಿನಲ್ಲಿ ಏನ ನ್ನೋ ಹುಡುಕಲು ಹೋಗುತ್ತವೆ. ಆ ಸನ್ನಿವೇಶ ದಲ್ಲಿ ಸೃಷ್ಟಿಯೆಂಬುದು ಮಾಯೆಯೋ ಅಲ್ಲವೋ, ಎಲ್ಲವೂ ವೈಜ್ಞಾನಿಕವೋ, ಪ್ರಾಕೃತಿಕ ವೋ, ಅನ್ವೇಷಣೆಯ ಬೆನ್ನೇರುವುದೋ ಅಥವಾ ತೀರಾ ಸಾಮಾನ್ಯನ ಬದುಕೇ ಚಂದ ಎಂದುಕೊಳ್ಳುವುದೋ ಮುಂತಾದ ಪ್ರಶ್ನೆಗಳು ಮೂಡುತ್ತವೆ. ಇದನ್ನು ಓದುಗರಿಗೆ ವರ್ಗಾ ಯಿಸಿರುವ ಬಗೆ ವಿಶೇಷವಾಗಿದೆ.
ಅನೇಕ ದೃಶ್ಯಗಳು ನಗು ತರಿಸಿದರೂ ಓದು ಗನನ್ನು ಅಗಾಧ ಚಿಂತನೆಗೆ ಒಡ್ಡುತ್ತವೆ. ಮೇಲ್ನೋಟಕ್ಕೆ ಹಗುರವಾಗಿ ಕಂಡರೂ ಓದಿನ ಬಳಿಕ ಇಡೀ ಕೃತಿ ಬಹಳವಾಗಿ ಕಾಡುತ್ತದೆ. ಅಂದ ಹಾಗೆ, ಕರ್ವಾಲೊ ಎಂದರೆ ಏನು? ಸಹ್ಯಾದ್ರಿಯಲ್ಲಿ ಹುಡುಕಲು ಹೊರಟ ಸಂಜೀವಿನಿಯ ಹೆಸರಾ? ಕೃತಿಯನ್ನು ಓದಿ ಆ ಕೌತುಕವನ್ನು ತಣಿಸಿಕೊಳ್ಳಿ.
-ಅಭಿಷೇಕ್ ಎಸ್., ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ