ಕಟ್ಟಡದ ಮೇಲೇರಿ ಆತ್ಮಹತ್ಯೆ ಯತ್ನ
Team Udayavani, Dec 22, 2020, 6:29 PM IST
ಮೂಡಿಗೆರೆ: ಪಟ್ಟಣದ ರೈತ ಭವನದ ಕಟ್ಟಡದ ಮೇಲೇರಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸುವ ಮೂಲಕ ಹೈಡ್ರಾಮಾ ಸೃಷ್ಟಿಸಿದ ಘಟನೆ ಸೋಮವಾರ ನಡೆದಿದೆ.
ಮೂಡಿಗೆರೆ ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಮಿತಿ ಮಾಜಿಅಧ್ಯಕ್ಷ ಮಗ್ಗಲಮಕ್ಕಿ ಲಕ್ಷ್ಮಣ ಗೌಡ ಎಂಬುವವರೇ ಈ ಯತ್ನ ಮಾಡಿದವರು.ಲಕ್ಷ್ಮಣ ಗೌಡ ಅವರು ಸಮಿತಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರೈತಭವನ ನಿರ್ಮಾಣ ಕಾಮಗಾರಿಯಲ್ಲಿ 30 ಲಕ್ಷ ರೂ. ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹಾಲಿ ಆಡಳಿತ ಮಂಡಳಿ ಅಧ್ಯಕ್ಷರು ಸಮಿತಿಯ ಚುನಾವಣಾ ಸಂದರ್ಭದಿಂದಲೂ ಆರೋಪ ಮಾಡುತ್ತಲೇ ಬಂದಿದ್ದಾರೆ.
ಆದರೆ ಈ ವಿಚಾರವಾಗಿ ಸಭೆಯಲ್ಲಿಸ್ಪಷ್ಟೀಕರಣ ನೀಡಲು ಅವಕಾಶನೀಡುತ್ತಿಲ್ಲ. ನಾನು ಯಾವುದೇ ಹಣವನ್ನು ದುರುಪಯೋಗ ಮಾಡಿಕೊಂಡಿಲ್ಲ ನನ್ನ ಮೇಲೆ ವಿನಾಕಾರಣ ಆರೋಪ ಮಾಡುತ್ತನನ್ನ ತೇಜೋವಧೆ ಮಾಡುತ್ತಿದ್ದಾರೆ. ನನಗೆ ಅನ್ಯಾಯ ವಾಗುತ್ತಿದೆ. ನನಗೆ ನ್ಯಾಯ ಬೇಕು ಎಂದು ಕಟ್ಟಡದ ಮೇಲಿನಿಂದಲೇ ಕೂಗಿ ಹೇಳುತ್ತಿದ್ದರು. ಕಟ್ಟಡದ ಮೇಲೆ ನಿಂತಿದ್ದ ವ್ಯಕ್ತಿಯನ್ನು ಕೆಳಗೆ ಇಳಿಸಲು ಒಂದು ಗಂಟೆಗೂ ಹೆಚ್ಚು ಕಾಲ ರೈತ ಭವನದ ಕಟ್ಟದ ಮುಂದೆ ಸಾರ್ವಜನಿಕರು ಹರಸಾಹಸ ಪಟ್ಟರು.
ನಂತರ ಕೊಣಗೆರೆ ಶಿವಕುಮಾರ್ ಅವರು ಅಗ್ನಿಶಾಮಕ ಸಿಬ್ಬಂದಿಗಳ ಸಹಕಾರದಿಂದ ಲಕ್ಷ್ಮಣಗೌಡ ಅವರ ಗಮನವನ್ನು ಬೇರೆಡೆ ಸೆಳೆದು ಅವರನ್ನು ಕೆಳಗೆ ಇಳಿಸುವಲ್ಲಿ ಯಶಸ್ವಿಯಾದರು. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.