ಪಿಚ್ ಬ್ಯಾಟಿಂಗಿಗೆ ಸಹಕರಿಸುತ್ತಿದೆ: ಅಶ್ವಿನ್
Team Udayavani, Jan 11, 2021, 6:30 AM IST
ಸಿಡ್ನಿ : ಸಿಡ್ನಿ ಕ್ರಿಕೆಟ್ ಗ್ರೌಂಡ್ ಪಿಚ್ ಬ್ಯಾಟಿಂಗಿಗೆ ಸಹಕರಿಸುತ್ತಿದ್ದು, ಈಗ ಕ್ರೀಸಿನಲ್ಲಿರುವ ಜಂಟ್ಲಮನ್ಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ವಿಶ್ವಾಸವಿದೆ ಎಂಬುದಾಗಿ ಟೀಮ್ ಇಂಡಿಯಾದ ಪ್ರಧಾನ ಸ್ಪಿನ್ನರ್ ಆರ್. ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
“ನಿಜ, ಪಿಚ್ ತುಸು ನಿಧಾನ ಗತಿಯಿಂದ ಕೂಡಿದೆ. ಆದರೆ ಬ್ಯಾಟಿಂಗಿಗೆ ಖಂಡಿತವಾಗಿಯೂ ಸಹಕರಿಸಲಿದೆ. ಬೆಳಗ್ಗಿನ ವೇಳೆ ಸ್ವಲ್ಪ ಹೊತ್ತು ಕಷ್ಟವಾದೀತು. ಆದರೆ ಹೊತ್ತೇರಿದಂತೆ, ಬಿಸಿಲಿನ ಪ್ರಖರತೆ ಹೆಚ್ಚಿದಂತೆ ಇಲ್ಲಿ ಬ್ಯಾಟಿಂಗ್ ಸುಲಭವಾಗಲಿದೆ. ಕ್ರೀಸಿನಲ್ಲಿರುವ ಬ್ಯಾಟಿಂಗ್ ಜಂಟ್ಲ ಮನ್ಗಳಾದ ಪೂಜಾರ-ರಹಾನೆ ನಿಂತು ಆಡುವ ವಿಶ್ವಾಸವಿದೆ. ಇವರಿಬ್ಬರು ಮೊದಲ ಅವಧಿಯನ್ನು ಎಚ್ಚರಿಕೆಯಿಂದ ಕಳೆದರೆ ಭಾರತ ಈ ಪಂದ್ಯವನ್ನು ಉಳಿಸಿಕೊಳ್ಳಬಲ್ಲದು’ ಎಂದು ಅಶ್ವಿನ್ ಹೇಳಿದರು.ಚಾಳಿ ಬಿಡಲಿಲ್ಲ
ಇದೇ ವೇಳೆ ವೀಕ್ಷಕರ ನಿಂದನೆ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅಶ್ವಿನ್, “ನಾನು ಆಸ್ಟ್ರೇಲಿಯಕ್ಕೆ ಬರುತ್ತಿರುವುದು ಇದು ನಾಲ್ಕನೇ ಸಲ. ಪ್ರತೀ ಸಲವೂ ಇಂಥ ನಿಂದನೆಯ ಕಹಿ ಅನುಭವಿಸಿದ್ದೇನೆ. ಅವರಿನ್ನೂ ಚಾಳಿ ಬಿಟ್ಟಿಲ್ಲ’ ಎಂದರು.