ರಾಜ್ಯ-ಕೇಂದ್ರ ಸರ್ಕಾರಗಳ ಅಂತ್ಯದ ದಿನ ಹತ್ತಿರ ಬರುತ್ತಿದೆ: ಡಿ.ಕೆ ಶಿವಕುಮಾರ್
Team Udayavani, Jan 26, 2021, 5:34 PM IST
ಚಿಕ್ಕಮಗಳೂರು: ರಾಜ್ಯ-ಕೇಂದ್ರ ಸರ್ಕಾರಗಳ ಅಂತ್ಯದ ದಿನ ಹತ್ತಿರ ಬರುತ್ತಿದೆ. ರೈತ ವಿರೋಧಿ ಸರ್ಕಾರ ಎಂಬುದಕ್ಕೆ ದೆಹಲಿ ದೌರ್ಜನ್ಯವೇ ಸಾಕ್ಷಿ. ರೈತರ ಕೋಪ-ಶಾಪ-ತಾಪ ಎಲ್ಲವೂ ಇವರಿಗೆ ತಗುಲುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಆಶ್ರಮಕ್ಕೆ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದ ಡಿಕೆಶಿ, ಕೆಂಪೇಗೌಡ ಕಟ್ಟಿದ ಬೆಂಗಳೂರು ರಾಜ್ಯದ ಆಸ್ತಿ. ರಾಜಧಾನಿಯಲ್ಲಿ ಬೆಂಝ್ ಹಾಗೂ ದೊಡ್ಡ ಕಾರುಗಳು ಮಾತ್ರ ಓಡಾಡಬೇಕಾ ? ಟ್ರ್ಯಾಕ್ಟರ್ ಓಡಾಡಬಾರದೇ ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.
ರೈತರಿಲ್ಲದೆ ಬೆಂಗಳೂರಿಗರು ಊಟ ಮಾಡುತ್ತಾರಾ ? ರೈತರ ಮಕ್ಕಳೆಂದು ಶಾಲು ಹಾಕಿಕೊಂಡು ಸರ್ಕಾರ ಮಾಡುವವರು, ಅವರನ್ನ ಬೆಂಗಳೂರಿನೊಳಗೆ ಬರಲು ಏಕೆ ಬಿಡುತ್ತಿಲ್ಲ. ಸರ್ಕಾರದ ವೈಫಲ್ಯವನ್ನು ವಿಪಕ್ಷ ಹಾಗೂ ಸಂಘಟನೆಗಳು ಪ್ರಶ್ನಿಸುತ್ತಿವೆ ಎಂದು ಕಿಡಿಕಾರಿದರು.
ಇದಕ್ಕೂ ಮೊದಲು ಎನ್.ಆರ್.ಪುರ ತಾಲೂಕಿನ ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಡಿ.ಕೆ ಶಿವಕುಮಾರ್, ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದು, ಮಗಳ ಮದುವೆಯ ಆಹ್ವಾನ ಪತ್ರಿಕೆ ನೀಡಿದರು. ಬಳಿಕ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಆಶ್ರಮಕ್ಕೆ ತೆರಳಿದ ಡಿಕೆಶಿ, ವಿನಯ್ ಗುರೂಜಿ ಭೇಟಿ ಮಾಡಿದರು.
ಇದನ್ನೂ ಓದಿ: ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ರೈತರಲ್ಲ, ಭಯೋತ್ಪಾದಕರು : ಬಿ ಸಿ ಪಾಟೀಲ್
ಈ ವೇಳೆ ಮಾತನಾಡಿದ ವಿನಯ್ ಗುರೂಜಿ, ಡಿಕೆಶಿ ಮಗಳ ಮದುವೆ ವ್ಯಾಲಂಟೈನ್ ಡೇಗೆ ಆಗಲೆಂದು ತಮಾಷೆ ಮಾಡಿದ್ದೆ. ಈಗ ಅದೇ ವ್ಯಾಲಂಟೈನ್ ಡೇ ದಿನ ಮದುವೆಯಾಗುತ್ತಿದೆ. ನನಗೆ ಎರಡು ಕುಟುಂಬದ ಜೊತೆಯೂ ನಿಕಟ ಸಂಪರ್ಕವಿದೆ. ಅವರ ಮದುವೆ ಆಶ್ರಮದ ಮದುವೆ ಇದ್ದಂತೆ. ಇಬ್ಬರೂ ಮಕ್ಕಳಲ್ಲೂ ಒಂದೇ ಥಿಂಕಿಂಗ್ ಇದೆ. ಭವಿಷ್ಯದಲ್ಲಿ ಅವರಿಬ್ಬರೂ ತುಂಬಾ ಚೆನ್ನಾಗಿ ಇರುತ್ತಾರೆ. ಸಿದ್ದಾರ್ಥ್ ಅವರು ಎಲ್ಲೆ ಇದ್ದರೂ ಸೂಕ್ಷ್ಮ ಶರೀರದಲ್ಲಿ ಇರುತ್ತಾರೆ. ಅವರು ಮಕ್ಕಳ ಮದುವೆ ಕಂಡು ಅಲ್ಲಿಂದಲೇ ಖುಷಿ ಪಡುತ್ತಾರೆ ಎಂದರು.
ರಂಭಾಪುರಿ ಪೀಠ, ಗೌರಿಗದ್ದೆ ಬಳಿಕ ಶೃಂಗೇರಿ ಭೇಟಿ ನೀಡಿದ ಡಿಕೆಶಿ, ಶೃಂಗೇರಿ ಶಾರದಾಂಭೆ ದರ್ಶನ ಪಡೆದರು. ಶಾರದಾಂಭೆಯ ಎದುರು ಮಗಳ ಮದುವೆಯ ಆಹ್ವಾನ ಪತ್ರಿಕೆಯಿಟ್ಟು ಪೂಜೆ ಸಲ್ಲಿಸಿದರು.
ಇದನ್ನೂ ಓದಿ: ರೈತರ ಹೆಸರಿನಲ್ಲಿ ಗಲಭೆ ಮಾಡಿದ್ದು ಯಾರೆಂದು ಗೊತ್ತಿದೆ: ಭಾರತೀಯ ಕಿಸಾನ್ ಸಂಘ