ನಮ್ಮ ಸಿನಿಮಾವನ್ನು ಉಳಿಸಿ ಎಂದ ಅನೀಶ್
Team Udayavani, Feb 6, 2021, 2:48 PM IST
ಅನೀಶ್ ನಟನೆ, ನಿರ್ದೇಶನದ “ರಾಮಾರ್ಜುನ’ ಚಿತ್ರ ಕಳೆದ ವಾರ ತೆರೆಕಂಡಿತ್ತು. ಒಂದು ಮಾಸ್ ಸಿನಿಮಾವಾಗಿ ವಿಮರ್ಶಕರಿಂದ ಮೆಚ್ಚುಗೆ ಪಡೆದಿದ್ದ ಈ ಚಿತ್ರಕ್ಕೆ ಮೊದಲ ವಾರ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಎರಡನೇ ವಾರ ಚಿತ್ರಕ್ಕೆ ಪ್ರೇಕ್ಷಕರ ಕೊರತೆ ಕಾಡಿದೆ. ಇದು ಸಹಜವಾಗಿಯೇ ಅನೀಶ್ ಬೇಸರಕ್ಕೆ ಕಾರಣವಾಗಿದೆ.
ಹೇಗಾದರೂ ಮಾಡಿ ಈ ಬಾರಿ ಸಿನಿಮಾವನ್ನು ಉಳಿಸಿ, ಗೆಲ್ಲಿಸಬೇಕೆಂಬ ಆಸೆ ಅನೀಶ್ ಅವರದ್ದು. ಅದೇ ಕಾರಣದಿಂದ ಅನೀಶ್, ವಿಡಿಯೋವೊಂದರ ಮೂಲಕ ಪ್ರೇಕ್ಷಕರಲ್ಲಿ ಸಿನಿಮಾವನ್ನು ಉಳಿಸಿಕೊಡುವಂತೆ ಕೇಳಿದ್ದಾರೆ.
ಇದನ್ನೂ ಓದಿ:‘ಸಲಾರ್’ ರಿಮೇಕ್ ಅಥವಾ ಸ್ವಮೇಕ್: ಸ್ಪಷ್ಟನೆ ನೀಡಿದ ಪ್ರಶಾಂತ್ ನೀಲ್
“ಸಿನಿಮಾಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಎರಡನೇ ವಾರ ಪ್ರೇಕ್ಷಕರೇ ಇಲ್ಲ. ಅತ್ತ ಕಡೆ ಚಿತ್ರಮಂದಿರಗಳಿಂದ ಸಿನಿಮಾವನ್ನು ತೆಗೆಯುವ ಭಯ. ಕಾಡಿಬೇಡಿ ಸಿನಿಮಾವನ್ನು ಎರಡನೇ ವಾರ ಉಳಿಸಿಕೊಂಡಿದ್ದೇನೆ. ಸಿನಿಮಾವನ್ನು ಚಿತ್ರಮಂದಿರಗಳಿಗೆ ಬಂದು ನೋಡಿ. ಮೊದಲ ವಾರ ಸಿನಿಮಾ ನೋಡಿದವರ ಅಭಿಪ್ರಾಯ ತೆಗೆದುಕೊಂಡೇ ಚಿತ್ರಮಂದಿರಕ್ಕೆ ಬನ್ನಿ. ಸಾಕಷ್ಟು ಶ್ರಮಪಟ್ಟು ಮಾಡಿದ ಸಿನಿಮಾವಿದು. ಈ ಬಾರಿ ಸೋಲು ಅನುಭವಿಸುತ್ತೇನಾ ಎಂಬ ಭಯ ಕಾಡುತ್ತಿದೆ. ಸಿನಿಮಾವನ್ನು ಉಳಿಸಿಕೊಡುವ ಜವಾಬ್ದಾರಿ ನಿಮ್ಮದು’ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ.