ಪ್ರಧಾನಿ ಮೋದಿ ‘ಹಿಟ್ಲರ್ ‘ಎಂದ ದಿನೇಶ್ ಹೇಳಿಕೆ ವಿರುದ್ಧ ಕ್ಯಾಪ್ಟನ್ ಗಣೇಶ್ ವಾಗ್ದಾಳಿ
ಪ್ರಧಾನಿಗಳ ಕುರಿತ ಬಾಲಿಶ, ಹತಾಶ ಹೇಳಿಕೆ- ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಟೀಕೆ
Team Udayavani, Feb 9, 2021, 10:21 PM IST
ಬೆಂಗಳೂರು : ಪ್ರಧಾನಿ ಮೋದಿ ಹಿಟ್ಲರ್ ಎಂದು ಕರೆದ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಗೆ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿರುಗೇಟು ನೀಡಿದ್ದಾರೆ.
ಪ್ರಧಾನಿಗಳ ಕುರಿತು ಗುಂಡೂರಾವ್ ಅವರ ಮಾತುಗಳು ಅವರ ಮತ್ತು ಕಾಂಗ್ರೆಸ್ ಪಕ್ಷದ ಹತಾಶೆಯ ಪ್ರತೀಕವಾಗಿದೆ. ಉಪ ಚುನಾವಣೆಗಳು, ಗ್ರಾಮ ಪಂಚಾಯತ್ ಚುನಾವಣೆಗಳು ಸೇರಿದಂತೆ ಎಲ್ಲೆಡೆ ಕಾಂಗ್ರೆಸ್ ಸೋಲುತ್ತಿರುವುದನ್ನು ಗಮನಿಸಿದ ದಿನೇಶ್ ಗುಂಡೂರಾವ್, ತಮ್ಮ ಹತಾಶೆಯ ಸಂಕೇತವಾಗಿ ಪ್ರಧಾನಿಗಳು ಹಿಟ್ಲರ್ರಂತೆ ವರ್ತಿಸುತ್ತಿದ್ದಾರೆ ಎಂಬ ಹೇಳಿಕೆ ನೀಡಿ ತಮಗಿರುವ ಅಲ್ಪಜ್ಞಾನ ಪ್ರದರ್ಶಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶವನ್ನು ಸಮರ್ಥವಾಗಿ ಮುನ್ನಡೆಸುವ ದೃಷ್ಟಿಯಿಂದ ಅತ್ಯುತ್ತಮ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಕೊರೋನಾ ಲಸಿಕೆ ಉತ್ಪಾದನೆ ಮೂಲಕ ಭಾರತವನ್ನು ಆರೋಗ್ಯ ಕ್ಷೇತ್ರದಲ್ಲಿ ವಿಶ್ವಕ್ಕೇ ಮಾದರಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ದೃಢ ಹೆಜ್ಜೆಯನ್ನಿಟ್ಟಿದೆ. ಇದಲ್ಲದೆ, ಕೃಷಿ ಸುಧಾರಣಾ ಮಸೂದೆಗಳ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ಕಡೆ ಹಾಗೂ ಮಧ್ಯವರ್ತಿಗಳು ಮತ್ತು ದಲ್ಲಾಳಿಗಳನ್ನು ದೂರವಿಡಲು ಕೇಂದ್ರ ಸರಕಾರವು ಮುಂದಾಗಿದೆ. ದಲ್ಲಾಳಿಗಳನ್ನೇ ನೆಚ್ಚಿಕೊಂಡಿರುವ ಕಾಂಗ್ರೆಸ್ ಪಕ್ಷದ ದಿನೇಶ್ ಗುಂಡೂರಾವ್ ಅವರು ಇದರಿಂದ ನಿರಾಶರಾಗಿರುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಅದನ್ನು ಪ್ರತಿಬಿಂಬಿಸುವ ಮಾದರಿಯಲ್ಲಿ ಈ ಹೇಳಿಕೆ ಹೊರಬಿದ್ದಿದೆ ಎಂದು ಕಾರ್ಣಿಕ್ ತಿರುಗೇಟು ನೀಡಿದ್ದಾರೆ.