ಕೋಟಿ-ಚೆನ್ನಯ ಜೋಡುಕರೆ ಕಂಬಳ ಉದ್ಘಾಟನೆ
Team Udayavani, Feb 20, 2021, 10:30 PM IST
ಮೂಡುಬಿದಿರೆ: ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮ, ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ 18ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಬಯಲು ಕಂಬಳ ಶನಿವಾರ ಮುಂಜಾನೆ 7 ಗಂಟೆಗೆ ಪ್ರಾರಂಭಗೊಂಡಿತು.
ಚೌಟರ ಅರಮನೆ ಕುಲದೀಪ ಎಂ. ಅವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನ ಕಾರ್ಯಕ್ರಮದ ಪ್ರಾರಂಭದಲ್ಲಿ ಒಂಟಿಕಟ್ಟೆ ಅಯ್ಯಪ್ಪ ಮಂದಿರದಲ್ಲಿ ಪೂಜೆ ಸಲ್ಲಿಸಿ, ಬಳಿಕ, ಕರೆಯಲ್ಲಿ ಸೀಯಾಳ, ವೀಳ್ಯದೆಲೆ ಅಡಿಕೆ ಇರಿಸಿಕೊಂಡು, ಮೂಡುಬಿದಿರೆ ಪರಿಸರದ ವಿವಿಧ ಆರಾಧನ ಕ್ಷೇತ್ರಗಳ ಪ್ರಸಾದ ಮತ್ತು ತೀರ್ಥವನ್ನು ಕರೆಗೆ ಪ್ರೋಕ್ಷಣೆಗೈದ ಬಳಿಕ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಈಶ್ವರ ಭಟ್, ಅಲಂಗಾರು ಚರ್ಚ್ನ ಧರ್ಮಗುರು ವಂ| ವಾಲ್ಟರ್ ಡಿ’ಸೋಜಾ, ಪುತ್ತಿಗೆ ನೂರಾನಿ ಮಸೀದಿಯ ಮೌಲಾನಾ ಝಿಯಾವುಲ್ಲ ಕರೆಯಲ್ಲಿ ದೀಪ ಬೆಳಗಿಸಿ ಕಂಬಳವನ್ನು ಉದ್ಘಾಟಿಸಿದರು.
ಮಾಜಿ ಸಚಿವ ಕೆ. ಅಭಯಚಂದ್ರ, ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ಜತೆಗೂಡಿ ಕಂಬಳ ಕರೆಯಲ್ಲಿ ದೀಪ ಬೆಳಗಿಸಿದರು.
“ದೇವರನ್ನು ಮುಂದಿಟ್ಟುಕೊಂಡು ನಡೆಸುವ ಕೆಲಸಗಳಿಗೆ ದೇವರ ಅನುಗ್ರಹವಿರುತ್ತದೆ; ಕಂಬಳಕ್ಕೆ ಎಲ್ಲ ಆರಾಧನ ಶಕ್ತಿಗಳ ಅನುಗ್ರಹ ಒದಗಿಬರಲಿ’ ಎಂದು ಈಶ್ವರ ಭಟ್, “ಪ್ರಾಣಿಗಳನ್ನು ದೇವರು ಮನೋರಂಜನೆಗೆ ಬಳಸಲು ಅವಕಾಶ ನೀಡಿರುವರಾದರೂ ಹಿಂಸೆಗೆ ಆಸ್ಪದ ನೀಡದಿರೋಣ’ ಎಂದು ವಂ| ವಾಲ್ಟರ್ ಡಿ’ಸೋಜಾ, ಕಂಬಳವು ಸುರಕ್ಷಿತವಾಗಿ ಜರಗಲಿ ಎಂದು ಮೌಲಾನಾ ಝಿಯಾವುಲ್ಲ ಪ್ರಾರ್ಥನೆಗೈದರು.
ಮಾದರಿ ಕಂಬಳವಾಗಲಿ
ಕೆ. ಅಭಯಚಂದ್ರ ಮಾತನಾಡಿ, “ಮೂಡುಬಿದಿರೆ ಕಂಬಳವನ್ನು ದೇಶದಲ್ಲಿ ಮಾದರಿ ಕಂಬಳ ಎಂದು ತೋರಿಸಿ ಕೊಡುವಂತಾಗಲಿ. ಕಂಬಳ ನಿಲ್ಲುವ ಸಂದರ್ಭದಲ್ಲಿ ಮೂಡುಬಿದಿರೆಯಲ್ಲಿ ಪ್ರತಿಭಟನೆಯ ಮೂಲಕ ಹೋರಾಟ ವನ್ನು ಮಾಡಿ ಜಾನಪದ ಕ್ರೀಡೆ ಉಳಿಯ ಬೇಕೆಂದು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ತೋರಿಸಿಕೊಟ್ಟಿದ್ದೇವೆ. ಈಗಿನ ಶಾಸಕರು ಉತ್ತಮವಾಗಿ ಕಂಬಳವನ್ನು ಮುನ್ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಪಕ್ಷಬೇಧ ಮರೆತು ಸಹಕಾರ
ಕಂಬಳ ಸಮಿತಿಯ ಅಧ್ಯಕ್ಷ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, “ರಾಜಕೀಯ ಎಂಬುದು ಚುನಾವಣೆಯ ಸಂದರ್ಭದಲ್ಲಿ ಮಾತ್ರ. ಊರಿನ ಅಭಿವೃದ್ಧಿ ಯಾಗಬೇಕಾದರೆ ನಾವೆಲ್ಲರೂ ಸೇರಬೇಕು. ಕಂಬಳಕ್ಕಾಗಿ ಗುಣಪಾಲ ಕಡಂಬ ಮತ್ತು ಭಾಸ್ಕರ್ ಕೋಟ್ಯಾನ್ ಹೇಗೆ ಕೆಲಸ ಮಾಡುತ್ತಾರೋ ಹಾಗೆ ನಾನು ಮತ್ತು ನೀವು ಕೋಟಿ-ಚೆನ್ನಯರಂತೆ ಕೆಲಸ ಮಾಡೋಣ ಎಂದು ಅಭಯಚಂದ್ರರಲ್ಲಿ ವಿನಂತಿಸಿದರು. ಹಿರಿಯ ಚಿತ್ರನಿರ್ಮಾಪಕ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಉಪಾಧ್ಯಕ್ಷ ಈಶ್ವರ್ ಕಟೀಲು, ಮಂಡಲ ಅಧ್ಯಕ್ಷ ಸುನಿಲ್ ಆಳ್ವ ಜಿ.ಪಂ. ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, “ಮೂಡಾ’ ಅಧ್ಯಕ್ಷ ಮೇಘನಾಥ ಶೆಟ್ಟಿ, ಬಸದಿಗಳ ಮೊಕ್ತೇಸರ ದಿನೇಶ್ ಆನಡ್ಕ, ಪುರಸಭಾ ಸದಸ್ಯರಾದ ನಾಗರಾಜ ಪೂಜಾರಿ, ಸುರೇಶ್ ಕೋಟ್ಯಾನ್, ಸೌಮ್ಯಾ ಶೆಟ್ಟಿ, ರಾಜೇಶ್ ನಾಯ್ಕ, ಸ್ವಾತಿ ಶಿವಾನಂದ ಪ್ರಭು, ಜಯಶ್ರೀ, ಕುಶಲಾ ದೇವಾಡಿಗ, ರಾಜೇಶ್ ಮಲ್ಯ, ಬಸದಿಗಳ ಮೊಕ್ತೇಸರ ದಿನೇಶ್ ಆನಡ್ಕ, ಡಾ| ಸುದೀಪ್ಕುಮಾರ್, ಸೀತಾರಾಮ ಆಚಾರ್ಯ, ವಿಶ್ವನಾಥ ಪ್ರಭು-ರಾಜಶ್ರೀ ವಿ.ಪ್ರಭು , ಕೆ. ಶ್ರೀಪತಿ ಭಟ್, ತಿಮ್ಮಯ್ಯ ಶೆಟ್ಟಿ, ರಂಜಿತ್ಪೂಜಾರಿ, ಭಾಸ್ಕರ್ ಎಸ್.ಕೋಟ್ಯಾನ್, ಗುಣಪಾಲ ಕಡಂಬ ಹಾಗೂ ಗ್ರಾ.ಪಂ. ಹಾಲಿ, ಮಾಜಿ ಅಧ್ಯಕ್ಷರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ
ಇಂದು ವಿಶ್ವ ಅಸ್ತಮಾ ದಿನ; ದೈಹಿಕ- ಮಾನಸಿಕವಾಗಿ ಕುಗ್ಗಿಸುವ “ಅಸ್ತಮಾ’
D.K ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್ ನಲ್ಲಿ 6 ಬೆಡ್ ಮೀಸಲು
May 9: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಮೊದಲ ತಂಡದಿಂದ ಹಜ್ ಯಾತ್ರೆ
Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ