ಗೌಡರ ಕುಡಿಗೆ ಸಿಟ್ಯಾಕೆ-ಸಿಡುಕ್ಯಾಕೆ?


Team Udayavani, Jul 10, 2017, 8:14 AM IST

ANKAN-2.jpg

ಯಾವಾಗ ಎಚ್‌.ವಿಶ್ವನಾಥ್‌ಗೆ ಹುಣಸೂರು ಕ್ಷೇತ್ರದ ಟಿಕೆಟ್‌ ಪಕ್ಕಾ ಎಂದಾಯಿತೋ ಆಗ ಪ್ರಜ್ವಲ್‌ ರೇವಣ್ಣ ಕೋಪಗೊಂಡರು. ಅದರ ಪರಿಣಾಮವೇ ಹುಣಸೂರು ಕಾರ್ಯಕರ್ತರ ಸಭೆಯಲ್ಲಿನ “ಸ್ಫೋಟ’ ಎಂದು ಹೇಳಲಾಗುತ್ತದೆ. ಒಟ್ಟಾರೆ ಪ್ರಹಸನ ದೇವೇಗೌಡರಿಗೆ ಆಘಾತ ತಂದಿದ್ದು, ಪಕ್ಷವೋ ಕುಟುಂಬವೋ ಎಂಬ ಪ್ರಶ್ನೆ ಮುಂದಿಟ್ಟು ತೀರ್ಮಾನ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಕನಸಿನೊಂದಿಗೆ ರಣೋತ್ಸಾಹದಲ್ಲಿದ್ದ ಜೆಡಿಎಸ್‌ನಲ್ಲಿ ಪ್ರಜ್ವಲ್‌ ರೇವಣ್ಣ ಪ್ರಸ್ತಾಪಿಸಿದ “ಸೂಟ್‌ಕೇಸ್‌’ ವಿಚಾರ ಇದೀಗ ಬಹುಚರ್ಚಿತ ವಿಷಯವಾಗಿದೆ. ಹುಣಸೂರಿನ ಕಾರ್ಯಕರ್ತರ ಸಭೆಯಲ್ಲಿ ಪ್ರಜ್ವಲ್‌ ರೇವಣ್ಣ ಆಡಿದ ಮಾತುಗಳು ಜೆಡಿಎಸ್‌ ಪಕ್ಷದಲ್ಲಷ್ಟೇ ಅಲ್ಲದೆ ದೇವೇಗೌಡರ ಕುಟುಂಬದಲ್ಲೂ ಸಣ್ಣ ಮಟ್ಟದ ಬಿರುಕು ಮೂಡಿಸಿದೆ.
ಮೇಲ್ನೋಟಕ್ಕೆ ಎಚ್‌.ವಿಶ್ವನಾಥ್‌ ಜೆಡಿಎಸ್‌ ಪ್ರವೇಶ ಇದಕ್ಕೆ ಕಾರಣ ಎಂದು ಕಂಡುಬಂದರೂ ಬೇರೆ ಬೇರೆ ಕಾರಣಗಳೂ ಸಾಕಷ್ಟಿವೆ. ಹಾಸನ ಜಿಲ್ಲಾ ರಾಜಕಾರಣಕ್ಕೆ ಸೀಮಿತವಾಗಿದ್ದ ಭವಿಷ್ಯದಲ್ಲಿ ರಾಜ್ಯ ರಾಜಕಾರಣದ ಕನಸು ಕಂಡಿದ್ದ ಪ್ರಜ್ವಲ್‌ ರೇವಣ್ಣ ವಯಸ್ಸು ಚಿಕ್ಕದಾದರೂ ಕಳೆದ ಐದು ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯ. 

ದೇವೇಗೌಡರು ಸಂಸದರಾಗಿದ್ದರೂ ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಬ್ಯುಸಿಯಾಗಿರುವುದರಿಂದ ಹಾಸನದ ಉಸ್ತುವಾರಿ ಎಚ್‌.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಹಾಗೂ ಪುತ್ರ ಪ್ರಜ್ವಲ್‌ ರೇವಣ್ಣ ಅವರದೇ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಭವಾನಿ ರೇವಣ್ಣ ಅವರೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಬಯಕೆ ಹೊಂದಿದ್ದವರು. ಅದು ಸಾಧ್ಯವಾಗದಿದ್ದಾಗ ವಿಧಾನಪರಿಷತ್‌ ಮೂಲಕ ಪ್ರವೇಶಕ್ಕೂ ಒಲವು ವ್ಯಕ್ತಪಡಿಸಿ ಗೌಡರ ಅಸಮ್ಮತಿಯಿಂದ ಅದೂ ಸಾಧ್ಯವಾಗದಿದ್ದಾಗ ಹಠ ಹಿಡಿದು ಜಿಲ್ಲಾ ಪಂಚಾಯತ್‌ ಸದಸ್ಯರಾಗಿ ಕೊನೆಗೂ ರಾಜಕೀಯ ಪ್ರವೇಶಿಸಿದರು.   

ಭವಾನಿ ರೇವಣ್ಣ ಅವರೇ ಮುಂದಿನ ಲೋಕಸಭೆ ಅಭ್ಯರ್ಥಿ ಎಂದು ಹೇಳಲಾಗಿತ್ತಾದರೂ ನಂತರ ಪ್ರಜ್ವಲ್‌ ರೇವಣ್ಣ  ದೇವೇಗೌಡರ ವಾರಸುದಾರ ಎಂದು ಬಿಂಬಿತವಾಯಿತು. ಇದರ ನಡುವೆ, ಎಚ್‌.ಡಿ.ಕುಮಾರಸ್ವಾಮಿಯವರ ಪುತ್ರ ನಿಖೀಲ್‌ ರಾಜಕೀಯ ಪ್ರವೇಶ ಮಾಡ್ತಾರೆ ಎಂಬ ಮಾತುಗಳು ಕೇಳಿಬಂದಾಗ, ಪ್ರಜ್ವಲ್‌ ಜೆಡಿಎಸ್‌ನಲ್ಲಿ ಹೆಚ್ಚು ಸಕ್ರಿಯನಾಗಿ ಪ್ರಜ್ವಲ್‌ ಬ್ರಿಗೇಡ್‌ ಎಂಬ ಯುವಕರ ತಂಡವನ್ನೂ ಕಟ್ಟಿದ್ದರು. ರಾಜ್ಯ ರಾಜಕಾರಣದಲ್ಲಿರಬೇಕು ಎಂಬ ಆಸೆ ಹೆಚ್ಚಾಗಿ ಬೇಲೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ತಯಾರಿಯನ್ನೂ ಮಾಡಿಕೊಂಡಿದ್ದರು.   ಈ ಮಧ್ಯೆ, ಮೈಸೂರಿನ ಕೆಲವು ಶಾಸಕರು ಪ್ರಜ್ವಲ್‌ಗೆ ಹುಣಸೂರಿನಿಂದ ಸ್ಪರ್ಧಿಸಿ ಗೆದ್ದೇ ಗೆಲ್ತಿàರಿ ಎಂಬ ಆಸೆ ಹುಟ್ಟಿಸಿ ಕರೆತಂದರು. ಪ್ರಸ್ತುತ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಆಗಿರುವ ಜಿ.ಟಿ.ದೇವೇಗೌಡರ ಮೇಲಿನ ಸಿಟ್ಟಿಗೆ (ಹುಣಸೂರು ಕ್ಷೇತ್ರಕ್ಕೆ ಜಿ.ಟಿ.ದೇವೇಗೌಡರು ತಮ್ಮ ಪುತ್ರ ಅಥವಾ ಪತ್ನಿಯನ್ನು ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಸಲು ಬಯಸಿದ್ದರು. ಯಾಕೆಂದರೆ ಹುಣಸೂರಿನಿಂದ ಒಮ್ಮೆ ಜಿ.ಟಿ.ದೇವೇಗೌಡರು ಶಾಸಕರಾಗಿದ್ದವರು, ಕ್ಷೇತ್ರದಲ್ಲಿ ಹಿಡಿತ ಇದ್ದ ಕಾರಣ ತಮ್ಮ ಕುಟುಂಬದವರೇ ಶಾಸಕರಾಗಬೇಕು ಎಂದು ಬಯಕೆ ಹೊಂದಿದ್ದರು) ಪ್ರಜ್ವಲ್‌ ರೇವಣ್ಣ ಅವರನ್ನು ಕರೆತಂದರು.

ಹುಣಸೂರು ಕ್ಷೇತ್ರಕ್ಕೆ ಬಂದ ಪ್ರಜ್ವಲ್‌ ಚುನಾವಣೆ ತಯಾರಿ ಆರಂಭಿಸಿಯೇ ಬಿಟ್ಟರು. ಇತ್ತ ಪತ್ನಿ ಪುತ್ರನನ್ನು ಇಳಿಸುವ ಬಯಕೆ ಹೊಂದಿದ್ದ ಜಿ.ಟಿ.ದೇವೇಗೌಡರು ಇದರಿಂದ ಅಸಮಾಧಾನಗೊಂಡಿದ್ದರು. ಈ ನಡುವೆ, ಎಚ್‌.ವಿಶ್ವನಾಥ್‌ ಕಾಂಗ್ರೆಸ್‌ನಲ್ಲಿ ಅಸಮಾಧಾನಗೊಂಡಿದ್ದ ವಿಷಯ ತಿಳಿದ ಎಚ್‌.ಡಿ.ಕುಮಾರಸ್ವಾಮಿ, ಅವರನ್ನು ಜೆಡಿಎಸ್‌ಗೆ ಕರೆತಂದು ಹುಣಸೂರು ಕ್ಷೇತ್ರದಿಂದ ಕಣಕ್ಕಿಳಿಸುವ ತಂತ್ರಗಾರಿಕೆ ರೂಪಿಸಿದರು. ಕೆ.ಆರ್‌.ನಗರ ಸೇರಿ ಮೈಸೂರು ಜಿಲ್ಲೆಯಲ್ಲಿ ಪ್ರಭಾವ ಹೊಂದಿರುವ ವಿಶ್ವನಾಥ್‌ ಜೆಡಿಎಸ್‌ ಸೇರ್ಪಡೆಗೆ ಇದೇ ಜಿ.ಟಿ.ದೇವೇಗೌಡ ವಿರೋಧಿ ಬಣವೂ ಖುಷಿಯಿಂದಲೇ ಸಮ್ಮತಿಸಿತು. ದೇವೇಗೌಡರ ಒಪ್ಪಿಗೆ ಪಡೆದ ಕುಮಾರಸ್ವಾಮಿ “ಆಪರೇಷನ್‌’ ಮುಗಿಸಿಯೇಬಿಟ್ಟರು.  ಆ ಮೂಲಕ ಪ್ರಜ್ವಲ್‌ ರೇವಣ್ಣ ಹುಣಸೂರು ಬಿಡಬೇಕು ಎಂಬ ಸಂದೇಶವೂ ರವಾನೆಯಾಯಿತು.ಆದರೆ, ಯಾವಾಗ ಎಚ್‌.ವಿಶ್ವನಾಥ್‌ಗೆ ಹುಣಸೂರು ಕ್ಷೇತ್ರದ ಟಿಕೆಟ್‌ ಪಕ್ಕಾ ಎಂದಾಯಿತೋ ಆಗ ಪ್ರಜ್ವಲ್‌ ರೇವಣ್ಣ ಕೋಪಗೊಂಡರು. ಅದರ ಪರಿಣಾಮವೇ ಹುಣಸೂರು ಕಾರ್ಯಕರ್ತರ ಸಭೆಯಲ್ಲಿನ “ಸ್ಫೋಟ’ ಎಂದು ಹೇಳಲಾಗುತ್ತದೆ.

ಒಟ್ಟಾರೆ ಪ್ರಹಸನ ದೇವೇಗೌಡರಿಗೆ ಆಘಾತ ತಂದಿದ್ದು, ಪಕ್ಷವೋ ಕುಟುಂಬವೋ ಎಂಬ ಪ್ರಶ್ನೆ ಮುಂದಿಟ್ಟು ತೀರ್ಮಾನ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದೋ,  ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅನಿತಾಕುಮಾರಸ್ವಾಮಿ ಹಾಗೂ ಪ್ರಜ್ವಲ್‌ ರೇವಣ್ಣ ಇಬ್ಬರೂ ಸ್ಪರ್ಧೆ ಮಾಡುವುದು ಬೇಡ. ಎಚ್‌.ಡಿ.ಕುಮಾರಸ್ವಾಮಿ-ಎಚ್‌.ಡಿ.ರೇವಣ್ಣ ಮಾತ್ರ ಸಾಕು ಎಂಬ ಫ‌ರ್ಮಾನು ಹೊರಡಿಸಬೇಕು. ಇಲ್ಲವೋ ತೀರಾ ಒತ್ತಡ ಹೆಚ್ಚಾದರೆ ಅನಿತಾಕುಮಾರಸ್ವಾಮಿ ಯವರಿಗೆ ಚೆನ್ನಪಟ್ಟಣದಲ್ಲಿ ಸ್ಪರ್ಧೆಗೆ ಅನುಮತಿ ನೀಡಿ ಪ್ರಜ್ವಲ್‌ ರೇವಣ್ಣಗೆ ಬೇಲೂರಿನಲ್ಲಿ ಅನುಮತಿ ನೀಡಬೇಕು. ಇಲ್ಲವೇ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಬೇಡ, ಲೋಕಸಭೆಗೆ ಸ್ಪರ್ಧೆ ಮಾಡು ಎಂದು ಸುಮ್ಮನಿರಸಬೇಕು.ಮುಂದಿನ ಲೋಕಸಭೆ ಚುನಾವಣೆಯಲ್ಲೂ ದೇವೇಗೌಡರು ಸ್ಪರ್ಧೆ ಮಾಡಬಹುದು ಎಂದುಕೊಂಡಿರುವ ಪ್ರಜ್ವಲ್‌ ರೇವಣ್ಣ, ಅದೇ ಕಾರಣಕ್ಕೆ ವಿಧಾನಸಭೆ ಪ್ರವೇಶಕ್ಕೆ ಪಟ್ಟು ಹಿಡಿದಿದ್ದಾರೆ. ಇದರಲ್ಲಿ ಯಾರ ಕೈ ಮೇಲಾಗುತ್ತೆ? ಎಂಬುದು ಕಾದು ನೋಡಬೇಕಿದೆ. ಹಾಗೆ ನೋಡುವುದಾದರೆ, ದೇವೇಗೌಡರ ಕುಟುಂಬದಲ್ಲಿ ಗೌಡರ ನಂತರ ರಾಜಕೀಯಕ್ಕೆ ಬಂದವರು ಎಚ್‌.ಡಿ.ರೇವಣ್ಣ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ರಾಜಕೀಯ “ಅರಂಗೇಟ್ರಂ” ಮಾಡಿದ ಅವರು 1994 ರಲ್ಲಿ ಶಾಸಕರಾಗಿ ಜೆ.ಎಚ್‌.ಪಟೇಲರ ಸಂಪುಟದಲ್ಲಿ ಸಚಿವರೂ ಆದರು. ಹಾಸನದ ಮಟ್ಟಿಗೆ ಪಕ್ಷ ಸಂಘಟನೆಯಲ್ಲೂ ದೇವೇಗೌಡರ ಜತೆಗೂಡಿ ಕೆಲಸ ಮಾಡಿದವರು. ಸಹಕಾರ ಕ್ಷೇತ್ರವನ್ನೂ ಪ್ರವೇಶಿಸಿ ಸುದೀರ್ಘ‌ ಕಾಲ ಕೆಎಂಎಫ್ ಅಧ್ಯಕ್ಷರಾಗಿದ್ದವರು. ರಾಜ್ಯ ರಾಜಕಾರಣದಲ್ಲಿ ಗೌಡರ ನಂತರ ನಾಯಕತ್ವ ವಹಿಸುವ ಆಸೆ ಹೊಂದಿದ್ದವರು. ಆದರೆ, ಗುತ್ತಿಗೆ ಹಾಗೂ ಚಿತ್ರೋದ್ಯಮದಲ್ಲಿ ತೊಡಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅನಿರೀಕ್ಷಿತವಾಗಿ 1996ರಲ್ಲಿ ಕನಕಪುರ ( ಈಗಿನ ಬೆಂಗಳೂರು ಗ್ರಾಮಾಂತರ) ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆದ್ದು ರಾಜಕೀಯ ಪ್ರವೇಶ ಪಡೆದರು. ಇದಾದ ನಂತರ ಸಹಜವಾಗಿ ಕುಮಾರಸ್ವಾಮಿ ಕೇಂದ್ರ ರಾಜಕಾರಣ, ರೇವಣ್ಣ ರಾಜ್ಯ ರಾಜಕಾರಣ ಎಂಬುದು ಕುಟುಂಬದಲ್ಲಿ ಚರ್ಚಿತವಾಗಿತ್ತು. ಆದರೆ, 1998ರ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಕುಮಾರಸ್ವಾಮಿ 1999ರಲ್ಲಿ ರಾಜ್ಯ ರಾಜಕಾರಣಕ್ಕೆ ಮರಳಿದರು. ಸಾತನೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತರೂ ನಂತರ 2004ರಲ್ಲಿ ರಾಮನಗರದಿಂದ ಗೆಲುವು ಸಾಧಿಸಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆಯಲ್ಲೂ ಪರೋಕ್ಷ ಪಾತ್ರ ವಹಿಸಿದ್ದರು. ಆದರೆ, ವಿಧಾನಸಭೆಯಲ್ಲಿ ಲಾಸ್ಟ್‌ ಬೆಂಚ್‌ “ಶಾಸಕರೇ’ ಆಗಿದ್ದ ಎಚ್‌.ಡಿ.ಕುಮಾರಸ್ವಾಮಿ ಸಿದ್ದರಾಮಯ್ಯ ಜೆಡಿಎಸ್‌ ತೊರೆದ ನಂತರ ನಡೆದ ವಿದ್ಯಮಾನಗಳಲ್ಲಿ ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆ 20 ತಿಂಗಳು ಮುಖ್ಯಮಂತ್ರಿಯೂ ಆದರು. ಮುಖ್ಯಮಂತ್ರಿಯಾಗಿದ್ದಾಗ ಗ್ರಾಮವಾಸ್ತವ್ಯ, ಜನತಾದರ್ಶನದಂತಹ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಪಡೆದ ಕುಮಾರಸ್ವಾಮಿ ಕುಮಾರಣ್ಣ ಆಗಿ ಜೆಡಿಎಸ್‌ ರಾಜ್ಯ ಘಟಕವೂ ಸಂಪೂರ್ಣ ಅವರ ತೆಕ್ಕೆಗೆ ಬಂತು.

ಬಿಜೆಪಿ ಸರ್ಕಾರದಲ್ಲಿ ಆಪರೇಷನ್‌ ಕಮಲ ಹಿನ್ನೆಲೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ ಸಹ ಅನಿರೀಕ್ಷಿತವಾಗಿ ರಾಜಕಾರಣಕ್ಕೆ ಬಂದು ಮಧುಗಿರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಅನಿತಾ ಕುಮಾರಸ್ವಾಮಿ ಶಾಸಕಿ ಆಗುವುದಾದರೆ ತಾನೂ ಯಾಕೆ ಶಾಸಕಿಯಾಗಬಾರದು ಎಂಬ ಆಸೆ ಎಚ್‌.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಲ್ಲೂ ಚಿಗುರೊಡೆಯಿತು. ಆದರೆ, ದೇವೇಗೌಡರು ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಅಲ್ಲಿಂದಲೇ ಒಂದು ರೀತಿಯಲ್ಲಿ ಕುಟುಂಬದ ಒಳಗೆ ಅಸಮಾಧಾನ ಪ್ರಾರಂಭವಾಯಿತು.  ಕುಮಾರಸ್ವಾಮಿಗಿಂತ ದೊಡ್ಡವರು ಹಾಗೂ ಅವರಿಗಿಂತ ಮುಂಚೆ ರಾಜಕಾರಣಕ್ಕೆ ಬಂದು ದೇವೇಗೌಡರಿಗೆ ಹೆಗಲು ಕೊಟ್ಟ ರೇವಣ್ಣ  ಏನೂ ಆಗಲಿಲ್ಲ ಎಂಬ ಬೇಸರ ಇತ್ತು. ದೇವೇಗೌಡರು ಹಾಕಿದ ಗೆರೆ ದಾಟದ ರೇವಣ್ಣನವರಿಗೆ ಆ ರೀತಿಯ ಬೇಸರ ಇಲ್ಲದಿದ್ದರೂ ಪತ್ನಿ ಭವಾನಿ ಅವರಿಗೆ ಇತ್ತು. ಆ ನಂತರ ಪುತ್ರ ಪ್ರಜ್ವಲ್‌ಗ‌ೂ ಅದು ಕಾಡುತ್ತಿತ್ತು. ರೇವಣ್ಣ ಉಪ ಮುಖ್ಯಮಂತ್ರಿಯಾದರೂ ಆಗಬೇಕು ಎಂಬ ಆಸೆ ಖುದ್ದು ದೇವೇಗೌಡರಿಗೆ ಇತ್ತು, ಈಗಲೂ ಇದೆ. ಮುಂದೆ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆಯಾಗುವ ಅನಿವಾರ್ಯತೆ ಅಥವಾ ಸಂದರ್ಭ ಬಂದರೆ ಅದು ಸಾಕಾರವಾಗುವ ಸಾಧ್ಯತೆಯೂ ಇದೆ ಎಂಬ ಮಾತುಗಳೂ ಇವೆ. 

ಮುದ್ದಿನ ಮೊಮ್ಮಗ
ಎಚ್‌.ಡಿ. ದೇವೇಗೌಡರ ಮುದ್ದಿನ ಮೊಮ್ಮಗ ಹಾಗೂ ಹಾಸನ ಲೋಕಸಭೆ ಕ್ಷೇತ್ರಕ್ಕೆ ಗೌಡರ ನಂತರದ ವಾರಸುದಾರ ಎಂದು ಬಿಂಬಿತವಾಗಿರುವ ಪ್ರಜ್ವಲ್‌ ರೇವಣ್ಣ ರಾಜಕೀಯವಾಗಿ ಬೆಳೆಯುವ ಅವಕಾಶ ಸಾಕಷ್ಟು ಇದ್ದರೂ ಆತುರ ಪಟ್ಟರಾ? ಅಥವಾ ತಾನು ರಾಜಕೀಯವಾಗಿ ಬೆಳೆಯಲು ಕುಟುಂಬದಲ್ಲೇ ಅಡ್ಡಿಯುಂಟಾಗುತ್ತಿದೆ ಎಂದು ಭಾವಿಸಿಕೊಂಡು ಆವೇಶಭರಿತರಾಗಿ ಮಾತನಾಡಿದರಾ? ಎಂಬ ಪ್ರಶ್ನೆಗಳೂ ಇವೆ. ಆದರೂ, ಈ ಘಟನೆ ಪ್ರಜ್ವಲ್‌ ರಾಜಕೀಯ ಬೆಳವಣಿಗೆಗೆ ತಕ್ಷಣಕ್ಕೆ ಅಡ್ಡಿಯಾಗಲಿದೆ ಎಂಬ ಮಾತುಗಳೂ ಇವೆ. ತಾತನ ತಾಕೀತಿನ ಮೇರೆಗೆ ಪ್ರಜ್ವಲ್‌ ಸ್ವಲ್ಪ ಕಾಲ ಮೌನವಾಗಿರಲೇಬೇಕು.

ಎಸ್‌.ಲಕ್ಷ್ಮಿನಾರಾಯಣ 

ಟಾಪ್ ನ್ಯೂಸ್

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.