ಸಾಮಾನ್ಯ ವಿದ್ಯಾರ್ಥಿಗೂ ಐ.ಎ.ಎಸ್‌. ಸಾಧ್ಯ


Team Udayavani, Oct 4, 2017, 4:46 AM IST

04-ANNA-2.jpg

ರಾಜತಾಂತ್ರಿಕರಾಗಿ ವೃತ್ತಿ ಜೀವನವನ್ನು ಸ್ವಿಟ್ಸರ್ಲೆಂಡಿನಲ್ಲಿ ಆರಂಭಿಸಿ, ಸೋವಿಯತ್‌ ಒಕ್ಕೂಟದಲ್ಲಿ ಗ್ಲಾಸ್‌ ನಾಸ್ಟ್‌ ಮತ್ತು ಪೆರಿಸ್ಟ್ರಾಯಿಕಾ ಇದ್ದ ಕಾಲದಲ್ಲಿ ಕೆಲಸ ಮಾಡಿ, ಸ್ವೀಡನ್‌ ರಾಯಭಾರಿಯಾಗಿ 2010ರಲ್ಲಿ ನಿವೃತ್ತರಾದ ಬಾಲಕೃಷ್ಣ ಶೆಟ್ಟಿ ಉಡುಪಿ ಜಿಲ್ಲೆಯ ಕುಂದಾಪುರದವರು. ಭಾರತೀಯ ವಿದೇಶಾಂಗ ಸೇವೆಗೆ ಸೇರಿದ ಅವರು ಈಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರತೀಯ ನಾಗರಿಕ ಸೇವೆಗಳ ಪರೀಕ್ಷೆಗೆ  ಸಂಬಂಧಿಸಿದಂತೆ  ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಅವರನ್ನು ತಯಾರು ಮಾಡುವ ಕೈಂಕರ್ಯಕ್ಕೆ ಕೈಹಾಕಿದ್ದಾರೆ. ಮಂಗಳೂರಿನಲ್ಲಿ ಮಾತಿಗೆ ಸಿಕ್ಕ ಅವರು ತಮ್ಮ ವೃತ್ತಿ ಜೀವನದ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್‌)ಗೇ ಸೇರಬೇಕು ಎಂದು ಏಕೆ ನಿರ್ಧರಿಸಿದಿರಿ?
ನಾನು ಮೂಲತಃ ಉಡುಪಿಯ ಕುಂದಾಪುರದವನಾದರೂ ಬೆಳೆದದ್ದು, ಓದಿದ್ದೆಲ್ಲ ಉತ್ತರದಲ್ಲಿ. ಅಲ್ಲಿ ಸಿವಿಲ್‌ ಸರ್ವಿಸಸ್‌ ಬಗ್ಗೆ ಅರಿವು ಜಾಸ್ತಿ. ನಾನು ಹಾಗೆ ಆಸಕ್ತಿ ಬೆಳೆಸಿಕೊಂಡೆ. ನಮ್ಮ ತಂದೆ ಟೆಲಿಕಾಂನಲ್ಲಿದ್ದರು. ಹಾಗಾಗಿ ಓದುವುದೆಲ್ಲ ಉತ್ತರ ಭಾರತದಲ್ಲಿ ಆಯಿತು. ನನ್ನ ಪ್ರಕಾರ ಈ ಸಿವಿಲ್‌ ಸರ್ವಿಸ್‌ ಇದೆಯಲ್ಲ, ಅದು ಒಂದು ನೌಕರಿ ಅಂತ ಅಲ್ಲ. ಅದು ದೇಶಕ್ಕೆ ಸಲ್ಲಿಸುವ ಸೇವೆ. ನಾನಂತೂ ಆ ಮನೋಭಾವದವನು.

 ಅಮೆರಿಕದ ಬ್ಯುರಾಕ್ರಸಿಗೂ ಭಾರತದ ಬ್ಯೂರಾಕ್ರಸಿಗೂ ಏನು ವ್ಯತ್ಯಾಸ?
ಅಲ್ಲಿಯ ವ್ಯವಸ್ಥೆಗೆ ಸ್ಪಾಯಿಲ್‌ ಸಿಸ್ಟಂ ಅನ್ನುತ್ತೇವೆ. ಅಲ್ಲಿ ಗೆದ್ದವರು, ಅವರ ಜನರನ್ನು ತರುತ್ತಾರೆ. ಅದು ರಾಜಕೀಯ ಬ್ಯೂರಾಕ್ರಸಿ. ಭಾರತದಲ್ಲಿ ಹಾಗಾಗುವುದಿಲ್ಲ. 99% ಮಂದಿ ನಾಗರಿಕ ಸೇವೆಗಳಲ್ಲಿ ಪಾಸಾದವರೇ ಇರ್ತಾರೆ. ಇಲ್ಲೊಂದು ನಿರಂತರತೆ ಇರುತ್ತದೆ. ನನ್ನ ಪ್ರಕಾರ ನಾಗರಿಕ ಸೇವೆ ಅಂದರೆ ಭಾರತದಲ್ಲಿ ಅದೊಂದು ದೇಶಕ್ಕೆ ಉಕ್ಕಿನ ಚೌಕಟ್ಟು ಇದ್ದ ಹಾಗೆ. ಕರ್ನಾಟಕದವರು ಹೋಗಿ ಅಸ್ಸಾಂನಲ್ಲಿ ಸೇವೆ ಮಾಡಬಹುದು. ಅಲ್ಲಿಯವರು, ಅಂದರೆ ಉತ್ತರಪ್ರದೇಶದವರು ಅಥವಾ ಯಾವುದೇ ರಾಜ್ಯದವರು ಎಲ್ಲಿಯೂ ಹೋಗಿ ಕೆಲಸ ಮಾಡಬಹುದು, ಇದರಿಂದ ರಾಷ್ಟ್ರೀಯ ಸಮಗ್ರತೆ ಸಾಧ್ಯ ಆಗುತ್ತದೆ. ನಮ್ಮಲ್ಲಿ ಏಕ ರೂಪದ ಕಾನೂನು ವ್ಯವಸ್ಥೆ ಇದೆ.

ಆಯ್ಕೆ ಪ್ರತಿಭೆ ಆಧಾರದಲ್ಲೇ ಆಗುತ್ತದೆಯೇ?
ನಿಸ್ಸಂಶಯವಾಗಿ, ನಮ್ಮ ಆಯ್ಕೆ ಮೆರಿಟ್‌ ಮತ್ತು ಸಾಮರ್ಥ್ಯ ವನ್ನು ಅವಲಂಬಿಸಿರುತ್ತದೆ. ಎವರೇಜ್‌ ವಿದ್ಯಾರ್ಥಿ ಕೂಡ ಪ್ರಯತ್ನ ಮಾಡಿದರೆ ಸಿವಿಲ್‌ ಸರ್ವಿಸಸ್‌ ಪರೀಕ್ಷೆಯನ್ನು ಪಾಸ್‌ ಮಾಡಬಹುದು. ಸಾಮಾನ್ಯ ಜ್ಞಾನ ಬೇಕು, ರೀಸನಿಂಗ್‌ ತುಂಬಾ ಮುಖ್ಯ. ಒಬ್ಬ ಜಿಲ್ಲಾಧಿಕಾರಿಯೋ ಜಿಲ್ಲಾ ಪೊಲೀಸ್‌ ಅಧಿಕಾರಿಯೋ ಗಲಾಟೆ, ದೊಂಬಿ ಅಥವಾ ಇನ್ಯಾವುದೇ ಅನಾಹುತಕಾರಿ ಘಟನೆಗಳು ನಡೆದಾಗ ಫೋನ್‌ ಮಾಡಿ ಸಲಹೆ ಕೊಡಿ ಅಂತ ಯಾರನ್ನಾದರೂ ಕೇಳಲಿಕ್ಕಾಗುವುದಿಲ್ಲ; ಕೇಳುವಷ್ಟು ಸಮಯವೂ ಅವರಿಗೆ ಇರುವುದಿಲ್ಲ. ಅವರೇ ಆ ಸಂದ‌ರ್ಭದಲ್ಲಿ ಸರಿಯಾದ ನಿರ್ಧಾರವೊಂದನ್ನು ಕೈಗೊಳ್ಳ ಬೇಕಾಗುತ್ತದೆ. ಅದಕ್ಕೆ ರೀಸನಿಂಗ್‌ ಸಾಮರ್ಥ್ಯ ಅಗತ್ಯ. 
ಭಾರತೀಯ ನಾಗರಿಕ ಸೇವೆಗಳಲ್ಲಿ ಯೋಗ್ಯತೆಯೇ ಮಾನ ದಂಡ. ಅಧಿಕಾರಿ ಆಗುವವನಿಗೆ ದೃಢವಾದ ಸಾಮಾನ್ಯ ಜ್ಞಾನ ಬೇಕು. ಬಿಕ್ಕಟ್ಟಿನ ಸಮಯದಲ್ಲಿ ತತ್‌ಕ್ಷಣ ಕ್ರಮ ತಗೊಳ್ಳಬೇಕು. ಪ್ರೌಢಿಮೆ ಬೇಕು.ಸಮಸ್ಯೆಗಳನ್ನು ಪರಿಹಾರ ಮಾಡುವುದಕ್ಕೆ ಗೊತ್ತಿರಬೇಕು. ಆತ /ಆಕೆ ಸದಾ ಜಾಗೃತರಾಗಿರಬೇಕು. ನಮ್ಮ ಸರಕಾರ ರಾಜಕೀಯ ವ್ಯಕ್ತಿಗಳಿಂದಾಗಿರುವಂತಹ ಸರಕಾರ. ಅವರು ಚುನಾವಣೆಯ ಸಂದರ್ಭದಲ್ಲಿ ಜನರಿಗೆ ಭರವಸೆ ಗಳನ್ನು ಕೊಡುತ್ತಾರೆ. ಅವುಗಳನ್ನು ಜಾರಿಗೆ ತರುವುದು ನಮ್ಮ (ಅಧಿಕಾರಿಗಳ) ಕೆಲಸ. ನಾವು ನೀತಿ ರೂಪಿಸುವುದರಲ್ಲಿ ಪಾತ್ರ ವಹಿಸುವುದಿಲ್ಲ. ನಾವು ನೀತಿಯನ್ನು ಅನುಷ್ಠಾನ ಮಾಡುತ್ತೇವೆ. ನೀತಿಗಳಲ್ಲಿ ದೋಷ ಇದ್ದರೂ ಅದನ್ನು ತಿದ್ದುಪಡಿ, ದುರಸ್ತಿ ಮಾಡಿ ಅನುಷ್ಠಾನಿಸುವ ಅಧಿಕಾರ ನಮಗಿಲ್ಲ. ಆದರೆ ನೀತಿಯಲ್ಲಿ ದೋಷ ಇದೆ ಎಂದು ನೀತಿ ರೂಪಕರಿಗೆ ಹೇಳಬಹುದು. ತಿದ್ದುಪಡಿಯನ್ನು ಅವರೇ ಮಾಡಬೇಕು.

ನೀವು ಬೇರೆ ಬೇರೆ ದೇಶಗಳಲ್ಲಿ ಕೆಲಸ ಮಾಡಿದ್ದೀರಿ, ಯಾವ ದೇಶ ನಿಮಗೆ ಅಚ್ಚುಮೆಚ್ಚು? ನಿಮಗೆ ನೀವೇ ರೇಟಿಂಗ್‌ ಕೊಡುವ ಪರಿಸ್ಥಿತಿ ಬಂದರೆ ಯಾವ ದೇಶದಲ್ಲಿ ನೀವು ಒಳ್ಳೆಯ ಕೆಲಸ ಮಾಡಲು ಸಾಧ್ಯವಾಯಿತು ಎಂದು ಭಾವಿಸುತ್ತೀರಿ? 
ನಾವು ಪ್ರತೀ ದೇಶಕ್ಕೆ ಹೋಗುವಾಗ ಅಲ್ಲಿಯ ಸಂಸ್ಕೃತಿಯ ಜತೆಗೆ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತೇವೆ. ನಮಗೆ ನಿರ್ದಿಷ್ಟ ಕಾರ್ಯಭಾರಗಳು ಇರುತ್ತವೆ. ನಾನು ಡೆಪ್ಯುಟಿ ಹೈಕಮಿಶನರ್‌ ಸಿಂಗಾಪುರದಲ್ಲಿದ್ದೆ. ಆಗ ಭಾರತಕ್ಕೆ ವಿದೇಶೀ ನೇರ ಹೂಡಿಕೆ ಬೇಕಾಗಿತ್ತು. ನಾವು ಜಂಟಿ ಸಹಯೋಗದಲ್ಲಿ ತುಂಬಾ ಖಾಸಗಿ ಹೂಡಿಕೆಯ ಯೋಜನೆಗಳನ್ನು ತಂದೆವು. ಬೆಹರಿನ್‌ನಲ್ಲಿ ರಾಯಭಾರಿ ಆಗಿದ್ದೆ. ಆಗ ಅಲ್ಲಿ ಕಾರ್ಮಿಕ ವಿಷಯ ಪ್ರಧಾನವಾಗಿತ್ತು. ನಾನು ಕಾರ್ಮಿಕ ವ್ಯವಹಾರಗಳನ್ನು ನಿರ್ವಹಿಸಿದೆ. ಭಾರತದಿಂದ ಹೋದ ಕಾರ್ಮಿಕರಿಗೆ ಸ್ವಲ್ಪ ಒಳ್ಳೆಯ ಸವಲತ್ತುಗಳು ಸಿಗುವ ನಿಟ್ಟಿನಲ್ಲಿ ಕೆಲಸ ಮಾಡಿದೆ. ಆರು ಆಫ್ರಿಕನ್‌ ದೇಶಗಳಿಗೆ ರಾಯಭಾರಿಯಾಗಿದ್ದೆ. ಆಗ ಸಹಕಾರ ವಲಯದ ತುಂಬಾ ಯೋಜನೆಗಳನ್ನು ತಂದೆವು. ಈ ಆಫ್ರಿಕನ್‌ ದೇಶಗಳು ಐರೋಪ್ಯ ಮಾರುಕಟ್ಟೆಗಳಾಗಿದ್ದವು. ಅಲ್ಲಿಗೆ ಎಲ್ಲವೂ ಯುರೋಪಿನಿಂದ ಬರಬೇಕಿತ್ತು. ಇವತ್ತು ಸೆನೆಗಲ್‌ನ ರಾಜಧಾನಿ ಡೆಕಾರ್‌ನಲ್ಲಿ ಭಾರತೀಯ ಸ್ಕೂಟರುಗಳು, ಬಸ್ಸುಗಳು ಓಡುತ್ತಿವೆ. ಭಾರತದ ಜನರೇಟರ್‌ಗಳು ಅಲ್ಲಿ ಕಾರ್ಯಾಚರಿಸುತ್ತಿವೆ. ಎಚ್‌ಎಂಟಿ ಟ್ರ್ಯಾಕ್ಟರುಗಳಿವೆ. ಇವೆಲ್ಲ ನಾನು ಅಲ್ಲಿದ್ದಾಗ ಮಾಡಿದ ಕೆಲಸ. ಈ ಕಾರ್ಯನಿರ್ವಹಣೆ ನನಗೆ ತುಂಬಾ ತೃಪ್ತಿ ತಂದಿದೆ. ಸ್ವೀಡನ್‌ನಲ್ಲಿ ನಾನು ರಾಯಭಾರಿಯಾಗಿದ್ದೆ. ಹೈಟೆಕ್‌ ಯಂತ್ರೋಪಕರಣಗಳನ್ನು ತಂದೆವು. ಬೆಂಗಳೂರಿನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ವೈಟ್‌ಫೀಲ್ಡ್‌ನಲ್ಲಿರುವ ಐ.ಟಿ. ಪಾರ್ಕಿಗೂ ಹತ್ತಿರದ ಸಂಬಂಧ ಇದೆ. ಆ ಐ.ಟಿ. ಪಾರ್ಕ್‌ ಇಲ್ಲದಿದ್ದರೆ ಅಲ್ಲಿ ವಿಮಾನ ನಿಲ್ದಾಣ ಬರುತ್ತಿರಲಿಲ್ಲ. ವಿಮಾನ ನಿಲ್ದಾಣ ಇಲ್ಲದಿದ್ದರೆ ಐ.ಟಿ. ಪಾರ್ಕ್‌ ಆಗುತ್ತಿರಲಿಲ್ಲ. ಎರಡೂ ನಿಕಟ ಸಂಬಂಧಿಗಳು. ಬಾಂಗ್ಲಾದೇಶದಲ್ಲಿದ್ದೆ, ನನ್ನ ಅವಧಿಯಲ್ಲಿ ಭಾರತ- ಬಾಂಗ್ಲಾ ದೇಶದ ನಡುವೆ ಎಸ್‌ಟಿಡಿ ಸಂಪರ್ಕ ಬೆಸೆಯಿತು.

ವಿದೇಶಾಂಗ ಸೇವೆಯಲ್ಲಿ ಶ್ರೇಣಿ ವ್ಯವಸ್ಥೆಯ ರಚನೆ ಹೇಗಿದೆ?
ಮೊದಲನೆಯದ್ದು ಥರ್ಡ್‌ ಸೆಕ್ರೆಟರಿ, ಅನಂತರ ಸೆಕೆಂಡ್‌ ಸೆಕ್ರೆಟರಿ, ಫ‌ಸ್ಟ್‌ ಸೆಕ್ರೆಟರಿ, ಕೌನ್ಸಿಲರ್‌, ಮಿನಿಸ್ಟರ್‌, ಆಮೇಲೆ ರಾಯಭಾರಿ. ಈ ರಾಯಭಾರಿಯಲ್ಲಿ ನಾಲ್ಕು ಶ್ರೇಣಿಗಳಿವೆ. ಅಂಬಾಸಿಡರ್‌ ಗ್ರೇಡ್‌ 4, ಆ ಮೇಲೆ ಅಂಬಾಸಿಡರ್‌ ಗ್ರೇಡ್‌ 3-ಅಂದರೆ ಜಂಟಿ ಕಾರ್ಯದರ್ಶಿ, ರಾಯಭಾರಿ ಗ್ರೇಡ್‌ 2-ಹೆಚ್ಚುವರಿ ಕಾರ್ಯದರ್ಶಿ ಮತ್ತು ಗ್ರೇಡ್‌ 1-ಕಾರ್ಯದರ್ಶಿ. ನಾವು ಯಾವ ದೇಶಕ್ಕೆ ಹೋದರೂ ರಾಯಭಾರಿ ಅಂತ ಕರೆಯಲ್ಪಡುತ್ತೇವೆಯೇ ಹೊರತು ಅಲ್ಲಿ ಗ್ರೇಡ್‌ ಹಾಕುವುದಿಲ್ಲ. ಇದು ಆಡಳಿತಾತ್ಮಕ, ಇಲಾಖೆಯೊಳಗೆ ಇರುವ ವ್ಯವಸ್ಥೆ.

ಐಎಫ್ಎಸ್‌ನವರು ಕ್ಯಾಬಿನೆಟ್‌ ಕಾರ್ಯದರ್ಶಿ ಮಟ್ಟದ ಹುದ್ದೆಗೇರಲು ಸಾಧ್ಯವೇ?
ಈಗ ಇಲ್ಲ. ಕಾರ್ಯದರ್ಶಿ ಹುದ್ದೆಯವರೆಗೆ ಏರಬಲ್ಲರು. 50ರ ದಶಕದಲ್ಲಿ, ನೆಹರೂ ಕಾಲದಲ್ಲಿ ಸೆಕ್ರೆಟರಿ ಜನರಲ್‌ ಎಂಬ ಒಂದು ಹುದ್ದೆ ಇತ್ತು, ಅದು ಕ್ಯಾಬಿನೆಟ್‌ ಸೆಕ್ರೆಟರಿ ಹುದ್ದೆಗಿಂತ ಒಂದು ಗುಲಗುಂಜಿ ತೂಕ ಹೆಚ್ಚಿನದ್ದು. (ಮುಖದಲ್ಲೊಂದು ಕಿರುನಗು) ನೆಹರೂ ಕಾಲದಲ್ಲಿದ್ದದ್ದನ್ನು ಈಗ ತೆಗೆದು ಹಾಕಿದ್ದಾರೆ. 

ನೀವು ನಾಗರಿಕ ಸೇವಾ ಪರೀಕ್ಷೆ ಬರೆಯುವಾಗ ಈಗಿನ ಮಾದರಿಯೇ ಇತ್ತೇ?
ಈಗ ಸ್ವಲ್ಪ ಬದಲಾಗಿದೆ. ನಾನು ಪರೀಕ್ಷೆ ಬರೆಯುವಾಗ ವಿದೇಶಾಂಗ ಸೇವೆಗೆ 400 ಮಾರ್ಕ್‌ ಪರೀಕ್ಷೆ ಇತ್ತು. ಐಎಎಸ್‌ಗೆ 300 ಮಾರ್ಕ್‌, ಇತರ ಸರ್ವಿಸಸ್‌ಗೆ 250 ಮಾರ್ಕ್‌ ಮತ್ತು ಐಪಿಎಸ್‌ಗೆ 200 ಮಾರ್ಕ್‌ ಪರೀಕ್ಷೆ ಇತ್ತು. ನಾನು ಐಎಎಸ್‌ನಲ್ಲಿ 6ನೇ ರ್‍ಯಾಂಕ್‌ ಬಂದೆ, ಐಎಫ್ಎಸ್‌ನಲ್ಲಿ 7ನೇ  ರ್‍ಯಾಂಕ್‌ ಬಂದೆ. ಆಯ್ಕೆ ಮಾಡುವಾಗ ವಿದೇಶಾಂಗ ಸೇವೆಗೆ ಹೋದೆ.

ಈ ಭಾಗದಲ್ಲಿ ಸಿವಿಲ್‌ ಸರ್ವಿಸಸ್‌ಗೆ ಜನ ಹೋಗದೇ ಇರಲು ಕಾರಣಗಳೇನಿರಬಹುದು ಎಂದು ಭಾವಿಸುತ್ತೀರಿ?
ಇಲ್ಲಿ ಆ ಬಗ್ಗೆ ಆಸಕ್ತಿ ಕಡಿಮೆ. ನಮ್ಮವರೆಲ್ಲ ಡಾಕುó, ಇಂಜಿನಿಯರ್‌ ಆಗ್ತಾರೆ, ಬ್ಯಾಂಕುಗಳಿಗೆ ಸೇರುತ್ತಾರೆ. ಇನ್ನೊಂದು ಕಾರಣ ಎಂದರೆ, ಇಲ್ಲಿ ಆ ಸೇವೆಗಳ ಬಗ್ಗೆ ಜಾಗೃತಿ/ಅರಿವು ಇಲ್ಲ. ಮತ್ತೂಂದು ಕಾರಣ ನಮ್ಮಲ್ಲಿ ಒಳ್ಳೆಯ ಕೋಚಿಂಗ್‌ ವ್ಯವಸ್ಥೆ ಇಲ್ಲ, ಈಗ ಆ ಕೊರತೆ ನಿವಾರಣೆ ಆಗುವ ಸಮಯ ಬಂದಿದೆ. ಉತ್ತರಪ್ರದೇಶ, ಬಿಹಾರಗಳಲ್ಲಿ 8ನೇ ಕ್ಲಾಸಿನಲ್ಲಿರುವಾಗಲೇ ಸಿವಿಲ್‌ ಸರ್ವಿಸಸ್‌ಗೆ ಟ್ರೈನಿಂಗ್‌ ಶುರು ಮಾಡುತ್ತಾರೆ. ಇಲ್ಲಿಯವರಿಗೆ ದಿಲ್ಲಿಗೆ ಹೋಗಿ ಕೋಚಿಂಗ್‌ ತೆಗೆದುಕೊಳ್ಳುವುದು ಸ್ವಲ್ಪ ಕಷ್ಟ, ಶುಲ್ಕ ಭರಿಸಬೇಕು, ವಾಸ್ತವ್ಯದ ವ್ಯವಸ್ಥೆ ಆಗಬೇಕು, ಕೆಲವರಿಗೆ ಆಹಾರ ಸಮಸ್ಯೆ ಎದುರಾಗುತ್ತದೆ. ಈ ಸೇವೆಯ ಅಧಿಕಾರಿಗಳ ಎದುರು ಇರುವಂತಹ ಒಂದೊಂದು ಕಡತವೂ ಕೂಡ ನೂರಾರು ಜನರ ಜೀವನವನ್ನು ನಿರ್ಧರಿಸುತ್ತದೆ ಎಂಬುದನ್ನು ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ನಾನೀಗ ನಮ್ಮ ಊರಿನಲ್ಲಿ ಮಕ್ಕಳನ್ನು ಪ್ರೇರೇಪಿಸುವ ಕೆಲಸ ಮಾಡ್ತಾ ಇದ್ದೇನೆ. ನಮಗೆ ಫ‌ಲಿತಾಂಶ ಲಭಿಸುವುದಕ್ಕೆ ಕಾಲಾವಕಾಶ ಬೇಕಾಗಬಹುದು.

ಬಾಲಕೃಷ್ಣ ಶೆಟ್ಟಿ ಪರಿಚಯ
ಉಡುಪಿ ಜಿಲ್ಲೆಯ ಕುಂದಾಪುರದವರಾದ ಬಾಲಕೃಷ್ಣ ಶೆಟ್ಟಿ ಕೊಲ್ಕೊತ್ತಾದ ಪ್ರಸಿಡೆನ್ಸಿ ಕಾಲೇಜಿನಲ್ಲಿ ಓದಿದ್ದು ಗಣಿತ ಶಾಸ್ತ್ರ. ಬಳಿಕ ಕಾನ್ಪುರ ಐಐಟಿಯಲ್ಲಿ ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಮುಂಬಯಿಯ ಟಾಟಾ ಮೂಲಭೂತ ಸಂಶೋಧನಾಲಯದಲ್ಲಿ ಕೆಲಕಾಲ ಸಂಶೋಧನಾ ನಿರತರಾಗಿದ್ದರು. 1973ರಲ್ಲಿ ಭಾರತೀಯ ಸಂಖ್ಯಾಶಾಸ್ತ್ರದ ಸೇವೆಗೆ ಸೇರಿದ ಅವರು ಬಳಿಕ 1976ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಭರ್ತಿಯಾದರು. ಅವರ ಮೊದಲ ನಿಯೋಜನೆ ಜಿನೇವಾಕ್ಕೆ. ಅಲ್ಲಿ ಫ್ರೆಂಚ್‌ ಕಲಿಯುವ ಕೆಲಸ. ಭಾರತೀಯ ಸಾಂಸೃತಿಕ ಸಂಬಂಧಗಳ ಪರಿಷತ್ತಿನ ಉಪನಿರ್ದೇಶಕರಾಗಿ ಅವರು ಸೋವಿಯತ್‌ ಒಕ್ಕೂಟದಲ್ಲಿ ಭಾರತೀಯ ಉತ್ಸವ ಏರ್ಪಡಲು ಕಾರಣರಾದರು. ಅವರೀಗ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಯುವಜನರನ್ನು ಭಾರತೀಯ ನಾಗರಿಕ ಸೇವೆಗಳತ್ತ ಒಲವು ಬೆಳೆಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ. ಈ ಭಾಗದಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ನಾಗರಿಕ ಸೇವೆಯ ಕೆಲಸವೆಂದರೆ ಅದೊಂದು ನೌಕರಿ ಅಲ್ಲ, ದೇಶಕ್ಕೆ ಮಾಡುವ ಸೇವೆ. ಅಧಿಕಾರಿಗಳು ಕಾನೂನನ್ನು ಬೆನ್ನಿಗಿಟ್ಟುಕೊಂಡು ಕೆಲಸ ಮಾಡಬೇಕಾಗುತ್ತದೆಯೇ ಹೊರತು ಅಲ್ಲಿ ವ್ಯಕ್ತಿ ನಿಷ್ಠೆ ಇಲ್ಲ. ಭಾರತೀಯ ನಾಗರಿಕ ಸೇವೆಯ ಅಧಿಕಾರಿಗಳ ಎದುರು ಇರುವ ಒಂದೊಂದು ಕಡತವೂ ನೂರಾರು, ಸಾವಿರಾರು ಜನರ ಹಿತಾಸಕ್ತಿಯನ್ನು ಒಳಗೊಂಡಿರುತ್ತದೆ. ಅಲ್ಲಿರುವುದು ಬರೇ ಕಡತ ಅಲ್ಲ, ಅಲ್ಲಿರುವುದು ಜೀವನ ಎನ್ನುವ ನಿಲುವು ಅವರದ್ದು.

ಸಂದರ್ಶನ:  ಎಸ್‌. ಜಯರಾಮ

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.