Karnataka Rajyotsava: ನನ್ನೂರು ಕರ್ನಾಟಕದ ಮೊದಲ ರಾಜಧಾನಿ ಬನವಾಸಿ!
Team Udayavani, Nov 1, 2023, 10:30 AM IST
ಕರ್ನಾಟಕದ ಮೊದಲ ರಾಜಧಾನಿ ಎಂದೇ ಖ್ಯಾತವಾಗಿರುವ ಬನವಾಸಿ ನನ್ನೂರು. ಅಲ್ಲಿನ ಐತಿಹಾಸಿಕ ಸಂಗತಿಗಳು, ಕದಂಬರ ಆಳ್ವಿಕೆಯನ್ನು ನೆನಪಿಸಿಕೊಂಡರೆ ಮೈ ಜುಮ್ಮೆನಿಸುತ್ತದೆ. ಐತಿಹಾಸಿಕ ನೆಲವಾಗಿದ್ದರೂ ಆ ಊರಿನಲ್ಲಿ ಹೇಳಿಕೊಳ್ಳುವಂತಹ ಪ್ರಗತಿಯಾಗಿಲ್ಲ. ಕರ್ನಾಟಕ, ಕನ್ನಡ ಎಂದ ಕೂಡಲೇ ಮನಸ್ಸು ಪುಳಕಗೊಳ್ಳುತ್ತದೆ. ನಾನೀಗ ಮಹಾರಾಷ್ಟ್ರದಲ್ಲಿದ್ದರೂ, ಯಾರಾದರೂ ಕನ್ನಡಿಗರು ಕಂಡರೆ ಮೊದಲು ಹೋಗಿ ನಾನೇ ಮಾತನಾಡಿಸುತ್ತೇನೆ. ಹೇಗಿದ್ದೀರಿ..?, ಯಾವೂರು..?, ಇಲ್ಲಿ ಏನು ಮಾಡುತ್ತಿದ್ದೀರಿ..? ಎಂದು ಕುಶಲೋಪರಿ ವಿಚಾರಿಸುತ್ತೇನೆ. ಕನ್ನಡ ಅಥವಾ ಕನ್ನಡಿಗರು ಅಂದಕೂಡಲೇ ಸಹಜವಾಗಿಯೇ ಅಂತಹದ್ದೊಂದು ಆತ್ಮೀಯತೆ ತನ್ನಿಂತಾನೇ ನನ್ನೊಳಗೆ ಹುಟ್ಟಿ ಬರುತ್ತದೆ.
ಕರ್ನಾಟಕ, ಕರುನಾಡು ಎಂದು ಹೇಳಿದ ಕೂಡಲೇ ನನಗೆ ಮೊದಲು ನೆನಪಾಗುವುದು ಕಿತ್ತೂರು ರಾಣಿ ಚೆನ್ನಮ್ಮ. ಒಬ್ಬ ಸ್ತ್ರೀಯಾಗಿ ಆಕೆ ಬ್ರಿಟಿಷರ ವಿರುದ್ಧ ಹೋರಾಡಿದ್ದು, ನನಗೆ ಈಗಲೂ ಸ್ಫೂರ್ತಿ. ಹಾಗಾಗಿ ಇಂತಹ ಇತಿಹಾಸ ಪ್ರಸಿದ್ಧ ಹೋರಾಟಗಾರರ ಜೀವನವನ್ನು ಆಗಾಗ ಓದುತ್ತೇನೆ. ಇನ್ನು ಮುರುಡೇಶ್ವರ, ಗೋಕರ್ಣ, ಮೈಸೂರು ನನಗೆ ಕರ್ನಾಟಕದಲ್ಲಿ ಅತ್ಯಂತ ಪ್ರೀತಿಯ ಸ್ಥಳಗಳು. ಬೆಂಗಳೂರನ್ನು ಬೆಳಗಿದ ಕೆಂಪೇಗೌಡರು ಸದಾ ಸ್ಫೂರ್ತಿಯಾಗಿದ್ದಾರೆ. ನಾನೊಬ್ಬ ಕ್ರೀಡಾ ಕೋಚ್. ಕರ್ನಾಟಕದವನಾಗಿರುವುದರಿಂದ ಸಹಜವಾಗಿಯೇ ಕನ್ನಡಿಗ ಅಥ್ಲೀಟ್ಗಳನ್ನು ಬೆಳೆಸಬೇಕೆಂಬ ತಹತಹಿಕೆಯಿದೆ. ಅದಕ್ಕೆ ತಕ್ಕಂತೆ ಕನ್ನಡಿಗ ಕ್ರೀಡಾಪಟುಗಳಿಗೆ ಎಲ್ಲ ಪ್ರೋತ್ಸಾಹ ನೀಡುತ್ತಿದ್ದೇನೆ.
-ಕಾಶೀನಾಥ್ ನಾಯ್ಕ, ಅಂತಾರಾಷ್ಟ್ರೀಯ ಖ್ಯಾತಿಯ ಜಾವೆಲಿನ್ ಪಟು, ಅಥ್ಲೀಟ್ ಕೋಚ್