ಮತ್ತೆ ಮತ್ತೆ ಮಾಸ್ತಿ ನೆನಪು


Team Udayavani, Oct 1, 2017, 4:55 PM IST

masti.jpg

ಜೀವಿತ ಕಾಲದಲ್ಲೂ ಮರಣಾನಂತರವೂ “ಮಾಸ್ತಿ’ ಎಂಬ ಎರಡಕ್ಷರದ ಸ್ಥಳನಾಮದಿಂದಲೇ ಸಂಮಾನ್ಯರೂ ಸಂಸ್ಮರಣೀಯರೂ ಆದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್‌. ನಮ್ಮಲ್ಲಿರುವ “ದಂತಕಥೆ’ ಅಥವಾ “ಐತಿಹ್ಯ’ದಂತೆ ಇಂಗ್ಲಿಷಿನಲ್ಲಿ Legend ಎಂಬ ಪದವಿದೆ, Living legend ಎಂಬ ಪದವಿಶೇಷವೂ ಇದೆ. ಮಾಸ್ತಿಯವರು ಒಂದು ದಂತಕಥೆ, ಒಂದು ಐತಿಹ್ಯ ಅಥವಾ ಒಂದು ಕಾಲದ Living legend. 1891ರ ಜೂನ್‌ ಆರರಂದು ಜನಿಸಿ, 1986ರ ಜೂನ್‌ ಆರರಂದು ವಿಧಿವಶರಾದ ಮಾಸ್ತಿಯವರದು ತೊಂಬತ್ತೈದು ವರ್ಷಗಳ ದೀರ್ಘ‌ ಜೀವನ. ಕಳೆದ ಜೂನ್‌ ಆರಕ್ಕೆ ಅವರು ಜನಿಸಿ ನೂರಿಪ್ಪತ್ತೈದು ವರ್ಷಗಳಾದುವು. ಜೀವಿತಾವಧಿಯಲ್ಲಿ ಹೇಗೋ ಹಾಗೆಯೇ ವಾš¾ಯ ಸಮೃದ್ಧಿಯಲ್ಲೂ ಅವರೊಬ್ಬ Legendary figure. ಕನ್ನಡ ಸಾಹಿತ್ಯದಲ್ಲಿ ಎಷ್ಟೆಲ್ಲ ಪ್ರಕಾರಗಳಿವೆಯೋ ಅಲ್ಲೆಲ್ಲ ಉಳುಮೆ ಮಾಡಿದವರು, ಹುಲುಸಾದ ಬೆಳೆ ತೆಗೆದವರು ಮಾಸ್ತಿ. ಆಂಗ್ಲ ಸಾಹಿತಿ ಜಾಫ್ರಿ ಛಾಸರನ ವಿಪುಲ ವಾš¾ಯ ಸಂಪತ್ತನ್ನು ಪರಿಗ್ರಹಿಸಿ, ಆಶ್ಚರ್ಯಚಿಕಿತನಾದ ವಿಮರ್ಶಕನೊಬ್ಬ “Here is God’s plenty” ಎಂದು ಉದ್ಗರಿಸಿದ್ದನಂತೆ. ನಮ್ಮ ಮಾಸ್ತಿಯವರ ಬಗೆಗೂ ಇದೇ ಮಾತನ್ನು ಕೊಂಚ ತಿದ್ದಿ “Not only there, here is also God’s plenty’ ಎಂದು ನಾವೂ ಉದ್ಗರಿಸಬಹುದು. ಖಂಡಿತವಾಗಿಯೂ ಹೆಮ್ಮೆಪಡಬಹುದು. ಅಷ್ಟನ್ನು ಅವರು ಬರೆದಿದ್ದಾರೆ – “ನವರಾತ್ರಿ’ಗಳಂತಹ ಕಾವ್ಯವೇ? “ಸುಬ್ಬಣ್ಣ’, “ಚಿಕ್ಕವೀರ ರಾಜೇಂದ್ರ’ಗಳಂತಹ ಕಾದಂಬರಿಯೇ? “ಆದಿಕವಿ ವಾಲ್ಮೀಕಿ’, “ಭಾರತ ತೀರ್ಥ’ದಂತಹ ವಿಮರ್ಶೆ – ವ್ಯಾಖ್ಯಾನ ಗ್ರಂಥಗಳೇ? “ಯಶೋಧರಾ’, “ಕಾಕನಕೋಟೆ’ಗಳಂತಹ ನಾಟಕಗಳೇ? “ಭಾವ’ ದಂತಹ ಆತ್ಮಕಥನವೇ? ಇಂಗ್ಲಿಷ್‌, ಸಂಸ್ಕೃತ, ತಮಿಳಿನಿಂದ ಅನುವಾದವೇ? ಇನ್ನು ಸಣ್ಣ ಕತೆಗಳ ಮಾತು ಬಂದರಂತೂ ಅವರು “ಸಣ್ಣ ಕತೆಗಳ ಹಿರಿಯಣ್ಣ’ನೆಂದೇ ಮಾನ್ಯರಾಗಿದ್ದಾರೆ. ಜನಕರಾಜ ಯಜ್ಞಾರ್ಥವಾಗಿ ಭೂಮಿಯನ್ನು ಉಳುವಾಗ ಮಣ್ಣಿನಲ್ಲಿ ಹೇಗೆ ಸೀತೆ ಸಿಕ್ಕಳ್ಳೋ ಹಾಗೆ ಮಾಸ್ತಿಯವರು ಕನ್ನಡದ ಮಣ್ಣಲ್ಲಿ ಸಣ್ಣ ಕತೆಯನ್ನು ಕಂಡು ಎತ್ತಿಕೊಂಡರು ಎಂಬ ಮಾತೇ ಇದೆ. 1910ರಿಂದ ತೊಡಗಿ 1985ರ ವರೆಗಿನ ಎಪ್ಪತ್ತೈದು ವರ್ಷಗಳ ಅವಧಿಯಲ್ಲಿ ಅವರು ಪ್ರಕಟಿಸಿದ ಪದ್ಯ – ಗದ್ಯ ಗ್ರಂಥಗಳ ಸಂಖ್ಯೆ ನೂರಾ ಇಪ್ಪತ್ತೈದರಷ್ಟಿದೆ. ಪ್ರಾಯಃ ಕಾರಂತ ಮತ್ತು ಕುವೆಂಪು ಅವರಲ್ಲಿ ಮಾತ್ರ ಇಂತಹ ವೈವಿಧ್ಯವನ್ನೂ ಸಮೃದ್ಧಿಯನ್ನೂ ಕಾಣಬಹುದು.

ಮಾಸ್ತಿಯವರು ತಾವು ಮಾತ್ರ ಬರೆದದ್ದಲ್ಲ, ತಮಗಿಂತ ಹಿರಿಯರ ಬರಹಗಳನ್ನು ಓದಿ ಮೆಚ್ಚಿ ಕಣ್ಣಿಗೆ ಒತ್ತಿ ತಲೆಯಲ್ಲಿ ಹೊತ್ತುಕೊಂಡರು, ತಮಗಿಂತ ಕಿರಿಯರನ್ನು ಬೆನ್ನು ತಟ್ಟಿ ಬರೆಯಿಸಿದರು. ಅವರ ಬರೆಹಗಳನ್ನು – ಎಳೆಹಸುಳೆಗಳಂತೆ – ಎರಡೂ ಕೈಗಳಿಂದ ಎತ್ತಿ ಕೊಂಡರು. ಹಲವರ ಚೊಚ್ಚಲ ಕೃತಿಗಳಿಗೆ ಮುನ್ನುಡಿ ಬರೆದರು – ಎಷ್ಟು ಬರೆದರೆಂದರೆ “”ಮಾಸ್ತಿಯವರು ಮುನ್ನುಡಿಯ ಕುಂಕುಮವಿಟ್ಟರೆ ಕಾವ್ಯ ಕನ್ನಿಕೆ ದೀರ್ಘ‌ ಸುಮಂಗಲಿಯಾಗುತ್ತಾಳೆ” ಎಂಬ ನಂಬಿಕೆಯೇ ಬೆಳೆಯಿತು! ಬೇಂದ್ರೆ (ಗರಿ), ಕುವೆಂಪು (ಕೊಳಲು), ಗೊರೂರು (ಹಳ್ಳಿಯ ಚಿತ್ರಗಳು), ದೇವುಡು (ವಿಚಾರಣೆ), ಪು.ತಿ.ನ. (ಹಣತೆ), ಕೈಲಾಸಂ (ಹುತ್ತದಲ್ಲಿ ಹುತ್ತ) – ಇವರೆಲ್ಲರ ಕೃತಿ ಪ್ರಕಟನೆಗೆ ಅವರು ಸಹಕರಿಸಿದರು. ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ತಿಳಿಯದಂತೆ ಇನ್ನೂ ಹಲವರಿಗೆ ಹಲಬಗೆಯಲ್ಲಿ ನೆರವಾದರು. ಎಂ. ಎ. ಪದವೀಧರನಾಗಿದ್ದರೂ ನಿರುದ್ಯೋಗಿಯಾಗಿ ಮನೆಯಲ್ಲಿ ಕೂತಿದ್ದ ಜಿ. ವಿ. ರಾಜರತ್ನಂ ಅವರನ್ನು ಆ ಕಾಲದಲ್ಲಿ ಸೆನ್ಸಸ್‌ ಕಮೀಶನರ್‌ ಆಗಿದ್ದ ಮಾಸ್ತಿಯವರು ತಮ್ಮ ಕಚೇರಿಗೆ ಕರೆದು, ಕೂರಿಸಿ, ಅವರಿಂದ ಎರಡು ಪುಸ್ತಕಗಳನ್ನು ಬರೆಯಿಸಿದರು. ಪುಸ್ತಕ ಪೂರ್ತಿಯಾಗುವವರೆಗೆ ತಿಂಗಳಿಗೆ ಇಪ್ಪತ್ತೈದು ರೂಪಾಯಿಗಳ (ಇದು 1930ರ ದಶಕದ ಮಾತು) ಮಾಸಾಶನ ನೀಡಿದ್ದರು. ನಿವೃತ್ತಿಯ ಅನಂತರ ತಮಗೆ ಬರುತ್ತಿದ್ದ ಪೆನ್ಶನ್‌ ಮೊತ್ತದಿಂದ “ಲೇಖಕ ಸಹಾಯ ನಿಧಿ’ಯೊಂದನ್ನು ಮಾಡಿಟ್ಟರು. ಸೋದರ ಲೇಖಕರಿಗೆ ಹೀಗೆ ಆಸರೆಯಾಗಿ ನಿಂತ ಸಾಹಿತಿಗಳು ಕನ್ನಡದಲ್ಲಿ ಹೆಚ್ಚಿಲ್ಲ.

ಒಂದು ಕಾಲದ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ (ಆ ಕಾಲದಲ್ಲಿ ಮೈಸೂರು ಸಂಸ್ಥಾನದ ದಿವಾನರೇ ಪರಿಷತ್ತಿನ ಅಧ್ಯಕ್ಷರಾಗಿ ಇರುತ್ತಿದ್ದರು) ಹರಿದು ಹಂಚಿ ಹೋಗಿದ್ದ ಕನ್ನಡ ನಾಡಿನ ಬಹುಭಾಗಗಳಲ್ಲಿ ಸುತ್ತಾಡಿ ಕನ್ನಡಿಗರನ್ನು ಅಣ್ಣ -ತಮ್ಮ, ಅಕ್ಕ – ತಂಗಿ ಎಂದು ಕರೆದು, ಅವರಲ್ಲಿ ಭಾಷಾಭಿಮಾನವನ್ನೂ ಸಾಹಿತ್ಯ ಪ್ರೀತಿಯನ್ನೂ ಬೆಳೆಯಿಸುವ ಕಾಯಕವನ್ನು ನಿಷ್ಠೆಯಿಂದ ಮಾಡಿದರು – ತಮ್ಮನ್ನು “ಕನ್ನಡದ ಲೆಂಕ’ (ಸೇವಕ) ಎಂದು ವಿನಮ್ರತೆಯಿಂದ ಕರೆದುಕೊಂಡರು; ತಾವೊಬ್ಬ “ಮೋಜನ್‌’ – ಬೆಳಗ್ಗಿನ ಜಾವ ಮಸೀದಿಯಿಂದ ಜನರನ್ನು ಕರೆದು ಎಚ್ಚರಿಸುವವರೇ “ಮೋಜನ್‌’ -ಮುಕ್ರಿ) ಎಂದು ಹೇಳಿಕೊಂಡರು. ಕನ್ನಡಿಗರನ್ನು ಎಚ್ಚರಿಸುವುದೇ ತಮ್ಮ ಧರ್ಮಕಾರ್ಯ ಎಂದು ತಿಳಿದವರು ಮಾಸ್ತಿ.

ಮಾಸ್ತಿಯವರು ತಮ್ಮ ವಿದ್ಯಾರ್ಥಿ ದಶೆಯಲ್ಲಿ ಅತ್ಯಂತ ಪ್ರತಿಭಾ ವಂತರಾಗಿದ್ದವರು. ಮೈಸೂರು ಮಹಾರಾಜ ಕಾಲೇಜಿನಿಂದ ಎಫ್.ಎ. ಪರೀಕ್ಷೆಯಲ್ಲಿ, ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಿಂದ ಬಿ. ಎ. ಪದವಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪ್ರಥಮರಾಗಿ ಉತ್ತೀರ್ಣರಾದರು. ಮದರಾಸಿನ ಪ್ರಸಿಡೆನ್ಸಿ ಕಾಲೇಜಿನಿಂದ ಎಂ.ಎ. ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಇಂಗ್ಲಿಷಿನಲ್ಲೂ ಸರ್ವ ಪ್ರಥಮರಾಗಿ ಪಾರಂಗತ ರಾದರು. ಮುಂದೆ ಮೈಸೂರು ಸಿವಿಲ್‌ ಸರ್ವಿಸ್‌ ಪರೀಕ್ಷೆಯಲ್ಲೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಅಸಿಸ್ಟಂಟ್‌ ಕಮೀಶನರ್‌ ಆಗಿ ನೇಮಕಗೊಂಡರು.

ಕಾಲಾಂತರದಲ್ಲಿ ಪದೋನ್ನತಿಗಳನ್ನು ಪಡೆದು, ವಿವಿಧ ಉನ್ನತ ಅಧಿಕಾರ ಸ್ಥಾನಗಳಲ್ಲಿ ಕ್ಷಮತೆ – ಪ್ರಾಂಜಲತೆಗಳಿಂದ ಕರ್ತವ್ಯ ನಿರ್ವಹಿಸಿದರು. ಇನ್ನೇನು ತಮ್ಮ ವಿದ್ಯಾರ್ಹತೆ, ಸೇವಾ ಜ್ಯೇಷ್ಠತೆ, ಕರ್ತವ್ಯಕ್ಷಮತೆಗಳಿಂದ ಅವರು ಮಂತ್ರಿಯೇ ಆಗಬೇಕಿತ್ತು. ಆದರೆ ಯಾವುದೋ ಅಚಾತುರ್ಯವೋ, ಯಾರದೋ ತಂತ್ರವೋ; ಮಾಸ್ತಿಯವರು ಮಂತ್ರಿ ಸ್ಥಾನದಿಂದ ವಂಚಿತರಾದರು. ಆದರೆ ಆತ್ಮ ಸಂಮಾನಿಯಾದ ಮಾಸ್ತಿ ಉದ್ವಿಗ್ನರಾಗಲಿಲ್ಲ, ನಿರ್ಲಿಪ್ತರಾಗಿ ಅವಧಿಪೂರ್ವದಲ್ಲೇ ನಿವೃತ್ತರಾದರು. ಆಗ ಅವರ ಪ್ರಾಯ ಐವತ್ತೆರಡು ವರ್ಷ. ಅವರಿಗೆ ಆರ್ಥಿಕವಾಗಿ ನಷ್ಟವಾಯಿತು. ಆದರೆ ಕನ್ನಡ ಸಾಹಿತ್ಯ ಶ್ರೀಮಂತವಾಯಿತು. ನಿವೃತ್ತಿಯ ಅನಂತರದ 43 ವರ್ಷಗಳಲ್ಲಿ ಅವರು ಸುಮಾರು ಎಂಬತ್ತೆಂಟು ಗ್ರಂಥಗಳನ್ನು ಪ್ರಕಟಿಸಿ ಕನ್ನಡದ ಹೊನ್ನಿನ ಕಣಜವನ್ನು ತುಂಬಿದರು. ಸಹಜವಾಗಿಯೇ ಮಾಸ್ತಿಯವರು ವಿವಿಧ ಸಮ್ಮಾನ – ಸತ್ಕಾರ – ಪುರಸ್ಕಾರಗಳಿಗೆ ಸತ್ಪಾತ್ರರಾದರು; ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದರು.

ಮಾಸ್ತಿಯವರು ತಮಗೆ ಗುರುಸ್ಥಾನದಲ್ಲಿದ್ದ – ಆದರಣೀಯರಾಗಿದ್ದ ಹಲವು ಹಿರಿಯರನ್ನು “ಕನ್ನಡದ ಕಣ್ವ’ (ಬಿಎಂಶ್ರೀ), “ಕನ್ನಡದ ಕುಲಪುರೋಹಿತ’ (ಆಲೂರ), “ಕನ್ನಡದ ಅಶ್ವಿ‌ನೀ ದೇವತೆಗಳು’ (ಟಿ.ಎಸ್‌.ವೆಂ.-ಎ. ಆ. ಕೃ.), “ಗಾರುಡಿಗ’ (ಬೇಂದ್ರೆ), “ಕಡಲತೀರದ ಭಾರ್ಗವ’ (ಕಾರಂತ) ಎಂದು ಕರೆದರು, ಬಣ್ಣಿಸಿ ಬರೆದರು. ಅದೇ ಮಾಸ್ತಿಯವರಿಗೆ ಸಂದಿರುವ ಬಿರುದು – “”ಕನ್ನಡದ ಆಸ್ತಿ”. ಪ್ರಾಯಃ ಮೊದಲ ಬಾರಿ ಹಾಗೆ ಕರೆದವರು ಅ. ನ. ಕೃಷ್ಣರಾಯರು. ಅ.ನ.ಕೃ. ಅವರ ಆ ಕರೆಯನ್ನು ಈಗಲೂ ಹಲವು ಕನ್ನಡದ ಕೊರಳುಗಳು ಪಡಿನುಡಿಯುತ್ತಲೇ ಇವೆ! ಹೌದು, ಅವರು ಕನ್ನಡದ ಆಸ್ತಿ – ಮಾಸದ ನೆನಪಿನ ಮಾಸ್ತಿ!

– ಎಂ. ರಾಮಚಂದ್ರ

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.