ಅಭಿವೃದ್ಧಿಗೆ ‘ಮಣಿಪಾಲದ ಮಾದರಿ’ ನಿರ್ಮಿಸಿದವರು


Team Udayavani, May 29, 2017, 6:29 AM IST

TAPai-new-copy.jpg

ಮಣಿಪಾಲ ಇಂದು ಜಾಗತಿಕ ಭೂಪಟದಲ್ಲಿ ಗುರುತಿಸಲ್ಪಟ್ಟ ಒಂದು ಪುಟ್ಟ ಸುಂದರ ಪಟ್ಟಣ. 60 ವರ್ಷಗಳ ಹಿಂದೆ ಒಂದು ಕುಗ್ರಾಮ, ಬರಡು ಗುಡ್ಡೆಯಾಗಿದ್ದ ಈ ಸ್ಥಳ ಇಂದು ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವ ಒಂದು ಕಾರ್ಯಕ್ಷೇತ್ರವಾಗಿ ಮೂಡಿಬಂದುದು ಒಂದು ಇತಿಹಾಸ. 50 ವರ್ಷಗಳ ಹಿಂದೆ ಮಣಿಪಾಲ ನೋಡಿ ಈಗ ನೋಡುತ್ತಿರುವವರಿಗೆ ಒಂದು ಅದ್ಭುತ ಶಕ್ತಿಯ ಪರಿಚಯವಾಗುತ್ತದೆ. ಇಲ್ಲಿ ಏನುಂಟು ಏನಿಲ್ಲ! ವಿಶ್ವವಿದ್ಯಾಲಯದ ಆಡಳಿತ ಕಚೇರಿಯ ಭವ್ಯ ಕಟ್ಟಡ ಕರ್ನಾಟಕ ರಾಜ್ಯದ ಅದ್ಭುತ ಕಟ್ಟಡಗಳಲ್ಲೊಂದು. ಇದಕ್ಕೆಲ್ಲ ಕಾರಣರಾದವರು ಕರ್ಮಯೋಗಿ ಪದ್ಮಶ್ರೀ ಡಾ| ಟಿ.ಎಂ.ಎ.ಪೈ ಮತ್ತು ಶತಮಾನ ಕಂಡ ಧೀಮಂತ ನಾಯಕ ಪದ್ಮಭೂಷಣ ಟಿ. ಎ. ಪೈ.

81 ವರ್ಷಗಳ ಪರಿಪೂರ್ಣ ಜೀವನ ನಡೆಸಿ ಅಭಿವೃದ್ಧಿಗೆ ಮಣಿಪಾಲದಂತಹ ಒಂದು ಮಾದರಿಯನ್ನು ನಿರ್ಮಿಸಿ 1979ರ ಮೇ 29ರಂದು ಕೀರ್ತಿಶೇಷರಾದ ಡಾ| ಟಿ.ಎಂ.ಎ.ಪೈಗಳ ಜೀವನವೇ ಒಂದು ಆದರ್ಶ. ಎರಡು ವರ್ಷಗಳ ಅನಂತರ ಅದೇ ದಿನ – ಮೇ 29ರಂದು ತನ್ನ 59ನೇ ವಯಸ್ಸಿನಲ್ಲಿ ಇನ್ನಿಲ್ಲವಾದ ಟಿ.ಎ.ಪೈಯವರದು ಆಡಳಿತದ ವಿವಿಧ ರಂಗಗಳಲ್ಲಿ ಅದ್ಭುತ ಸಾಧನೆ ಮಾಡಿ ದೇಶದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ ಒಂದು ಅದ್ಭುತ ಯಶಸ್ಸಿನ ಬದುಕು. ಪ್ರತಿ ವರ್ಷ ಮೇ 29ರಂದು ನಾಡಿನ ಈ ಎರಡು ಮಹಾಚೇತನಗಳ ದಿವ್ಯ ಸ್ಮತಿಯನ್ನು ಮಾಡಿಕೊಳ್ಳುವುದು ಭವಿಷ್ಯದ ಜನಾಂಗ ಕ್ಕೊಂದು ಸ್ಫೂರ್ತಿಯ ಸೆಲೆ. 

ಟಿ.ಎಂ.ಎ. ಪೈಗಳ ಜೀವನಚರಿತ್ರೆ ಹಾಗೂ ಸಮಗ್ರ ಸಾಧನೆಗಳ ಬಗ್ಗೆ ಅವರ 79ನೇ ಹುಟ್ಟುಹಬ್ಬದಂದು ‘Knowledge is Power” (ಜ್ಞಾನವೇ ಶಕ್ತಿ) ಎಂಬ ಪುಸ್ತಕವನ್ನು ಹೊರ ತರಲಾಗಿತ್ತು. ಅದು ಡಾ| ಟಿ.ಎಂ.ಎ.ಪೈಯವರು ಜೀವನದಲ್ಲಿ ಅಚಲವಾಗಿ ನಂಬಿಕೊಂಡು ಬಂದ ತಣ್ತೀವಾಗಿತ್ತು. ವೃತ್ತಿಯಲ್ಲಿ ವೈದ್ಯನಾಗಿದ್ದು, ತಮ್ಮಲ್ಲಿಗೆ ಬರುವ ಜನರ ಕಷ್ಟಕಾರ್ಪಣ್ಯಗಳನ್ನು ಕಂಡು, ನೊಂದು ಇದಕ್ಕೆ ಅವರಲ್ಲಿರುವ ಅಜ್ಞಾನವೇ ಕಾರಣವೆಂದು ಮನಗಂಡು ಬಡತನವನ್ನು ನಿವಾರಿಸಲು ವಿದ್ಯೆ ಹಾಗೂ ಉದ್ಯೋಗಗಳ ಸೃಷ್ಟಿ ಅತ್ಯಂತ ಅವಶ್ಯವೆಂದು ಅವರು ನಂಬಿದರು. ಇದನ್ನು ಕಾರ್ಯಗತಗೊಳಿಸುವಲ್ಲಿ ಪ್ರಾಥಮಿಕ ಹಂತದಿಂದ ಹಿಡಿದು ಕಾಲೇಜು, ವೈದ್ಯಕೀಯ, ತಾಂತ್ರಿಕ ಶಿಕ್ಷಣ ಹೀಗೆ ಜೀವನದಲ್ಲಿ ಸಮಾಜಕ್ಕೆ ಬೇಕಾಗುವ ವಿವಿಧ ಶಿಕ್ಷಣ ಸಂಸ್ಥೆಗಳನ್ನು ಜನರ ಸಹಕಾರದಿಂದ ಕಟ್ಟಿ ಬೆಳೆಸಿದರು. ಇಂದು ಮಣಿಪಾಲದ ವಿದ್ಯಾಸಂಸ್ಥೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿವೆ, ವಿವಿಧ ದೇಶಗಳಿಂದ ಬಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದು ಎಂಜಿನಿಯರುಗಳಾಗಿ, ಡಾಕ್ಟರುಗಳಾಗಿ ಹೆಸರು ಮಾಡುತ್ತಿದ್ದಾರೆ. ಮಣಿಪಾಲ ಒಂದು ಪ್ರತಿಷ್ಠಿತ ವಿಶ್ವವಿದ್ಯಾಲಯವಾಗಿದೆ. ಡಾ| ಪೈಯವರ ದ್ವಿತೀಯ ಪುತ್ರ ಡಾ| ರಾಮದಾಸ ಪೈಯವರು ತಂದೆಯವರು ಮಾಡಿದ ಅದ್ಭುತ ಕಾರ್ಯಕ್ರಮಗಳನ್ನು ಮುನ್ನಡೆಸಿ ಇನ್ನಷ್ಟು ಎತ್ತರಕ್ಕೆ ಏರಿಸಿ ಸಿಕ್ಕಿಂ, ನೇಪಾಲ, ಮಲೇಷ್ಯ, ಸಿಂಗಾಪುರ, ಶ್ರೀಲಂಕಾ ಮೊದಲಾದ ಕಡೆಗಳಲ್ಲಿ ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸುತ್ತಿದ್ದಾರೆ. ಜತೆಗೆ ಬೇರೆ ದೇಶಗಳ ವಿಶ್ವವಿದ್ಯಾನಿಲಯಗಳೊಡನೆ ಒಡಂಬಡಿಕೆ ಮಾಡಿಕೊಂಡು ಜಂಟಿ ಪದವಿ ನೀಡುವ ವಿಶಿಷ್ಟ ಯೋಜನೆಯೊಂದು ಜಾರಿಯಲ್ಲಿದೆ. ಒಟ್ಟಿನಲ್ಲಿ ಮಣಿಪಾಲ ಇಂದು ಜಗತ್ತಿನಲ್ಲಿಯೇ ಅತ್ಯುತ್ತಮ ಶಿಕ್ಷಣ ಕೇಂದ್ರವಾಗಿ ರೂಪುಗೊಂಡಿದೆ. ಇದನ್ನು ಅನುಸರಿಸಿ ಅನೇಕ ಕಡೆಗಳಲ್ಲಿ ತಾಂತ್ರಿಕ ಮಹಾ ವಿದ್ಯಾಲಯಗಳನ್ನು ನಿರ್ಮಿಸುವ ಪ್ರಯತ್ನ ಯಶಸ್ವಿಯಾಗಿದೆ. ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ಇಂದು ವೈದ್ಯಕೀಯ, ನರ್ಸಿಂಗ್‌, ಇಂಜಿನಿಯರಿಂಗ್‌, ಮ್ಯಾನೇಜ್‌ಮೆಂಟ್‌, ಹೊಟೇಲ್‌ ಮ್ಯಾನೇಜ್‌ಮೆಂಟ್‌, ಪತ್ರಿಕೋದ್ಯಮ ಇತ್ಯಾದಿ ವಿವಿಧ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಾಕ್ಟರೇಟ್‌ ಪದವಿ ನೀಡುವ ಉನ್ನತ ಮಟ್ಟದ ಸಂಸ್ಥೆಗಳಿವೆ. ಪ್ರಾಯಶಃ ಒಂದೇ ಪ್ರದೇಶದಲ್ಲಿ ಇಷ್ಟೆಲ್ಲ ವಿದ್ಯಾರ್ಜನೆಯ ಅವಕಾಶಗಳನ್ನು ಹೊಂದಿದ ಏಕೈಕ ವಿಶ್ವವಿದ್ಯಾಲಯ ಮಣಿಪಾಲ ಮಾತ್ರ.

ಸಣ್ಣ ಉಳಿತಾಯಕ್ಕೆ ಡಾ| ಪೈಗಳ ಕೊಡುಗೆ 
ಡಾ| ಪೈಗಳು 1925ರಲ್ಲಿ ಅಣ್ಣ ಉಪೇಂದ್ರ ಪೈ ಮತ್ತು ಆ ಕಾಲದ ಜಿಲ್ಲೆಯ ಪ್ರಖ್ಯಾತ ಉದ್ಯಮಿ ವಿ.ಎಸ್‌. ಕುಡ್ವರೊಂದಿಗೆ ಸೇರಿ ಸಿಂಡಿಕೇಟ್‌ ಬ್ಯಾಂಕ್‌ ಸ್ಥಾಪಿಸಿದರು. ಇದರ ಮೂಲ ಉದ್ದೇಶ ಸಣ್ಣ ವ್ಯಾಪಾರಿಗಳಿಗೆ ಅಗತ್ಯ ಇರುವ ಬಂಡವಾಳವನ್ನು ಸಾಲವಾಗಿ ನೀಡುವುದಾಗಿತ್ತು. ಕೇವಲ ರೂ. 8000 ಮೂಲ ಬಂಡವಾಳದಲ್ಲಿ ಪ್ರಾಂಭವಾದ ಈ ಬ್ಯಾಂಕು ಮುಂದಿನ 50 ವರ್ಷಗಳಲ್ಲಿ ಒಂದು ಪ್ರಮುಖ ವಾಣಿಜ್ಯ ಬ್ಯಾಂಕಾಗಿ ಬೆಳೆಯಿತು. 1969ರಲ್ಲಿ ದೇಶದ 14 ಪ್ರಮುಖ ಬ್ಯಾಂಕುಗಳು ರಾಷ್ಟ್ರೀಕರಣಗೊಂಡವು. ಆಗ ಸಿಂಡಿಕೇಟ್‌ ಬ್ಯಾಂಕ್‌ 11ನೇ ಅತೀ ದೊಡ್ಡ ಬ್ಯಾಂಕ್‌ ಆಗಿತ್ತು.

ಪಿಗ್ಮಿ ಯೋಜನೆ
ಉಳಿತಾಯಕ್ಕೆ ಸಂಪಾದನೆಯ ಪ್ರಮಾಣ ಮುಖ್ಯವಲ್ಲ ಉಳಿತಾಯ ಪ್ರವೃತ್ತಿ ಮುಖ್ಯ ಎಂದು ಡಾ| ಪೈಯವರು ಅಚಲವಾಗಿ ನಂಬಿದ್ದರು. ಕಡಿಮೆ ಆದಾಯ ಇರುವವರ ಆರ್ಥಿಕ ಅಡಚಣೆಗಳನ್ನು ಮನಗಂಡು 1926ರಲ್ಲಿ ಪಿಗ್ಮಿ ಎನ್ನುವ, ಅತೀ ಕಡಿಮೆ ಸಂಪಾದನೆಯ ವ್ಯಕ್ತಿಗೂ ಉಳಿತಾಯಕ್ಕೆ ಅವಕಾಶ ಕಲ್ಪಿಸುವ ಯೋಜನೆಯನ್ನು ಪ್ರಪಂಚದಲ್ಲಿಯೇ ಪ್ರಥಮವಾಗಿ ಆರಂಭಿಸಿದ ಶ್ರೇಯಸ್ಸು ಸಿಂಡಿಕೇಟ್‌ ಬ್ಯಾಂಕು ಮತ್ತು ಡಾ| ಮಾಧವ ಪೈಗಳಿಗೆ ಸಲ್ಲಬೇಕು. ಒಮ್ಮೆ ಪ್ರಸಿದ್ಧ ವಿಜ್ಞಾನಿ, ಇಸ್ರೋದ ಮಾಜಿ ಅಧ್ಯಕ್ಷ ಡಾ| ಯು. ಆರ್‌. ರಾವ್‌ ಹೇಳಿದಂತೆ ಈ ಯೋಜನೆಯು ಅಂತಾರಾಷ್ಟ್ರೀಯ ಪ್ರಶಸ್ತಿಗೆ ಅರ್ಹವಾಗಿದೆ. ಈ ಯೋಜನೆಯ ಮೂಲಕ ಸಿಂಡಿಕೇಟ್‌ ಬ್ಯಾಂಕು ಸುಭದ್ರವಾಗಿ ಬೆಳೆಯಲು ಸಹಕಾರಿಯಾಯಿತು ಮತ್ತು ದೇಶದ ಎಲ್ಲಾ ಬ್ಯಾಂಕುಗಳು ಇದನ್ನು ಅಳವಡಿಸಿಕೊಂಡವು. 

ಮಹಿಳೆಯರಿಗೆ ಶಿಕ್ಷಣದ ಅವಕಾಶ
ಶಿಕ್ಷಣ ಮನುಷ್ಯನ ಅಭಿವೃದ್ಧಿಗೆ, ಬಡತನ ನಿವಾರಣೆಗೆ ಮುಖ್ಯ ಸಾಧನವೆಂದು ತಿಳಿದ ಡಾ| ಪೈಗಳು ತಾಲೂಕು ಮಟ್ಟದಲ್ಲಿ ಒಂದು ಕಾಲೇಜು ಆರಂಭಿಸುವ ಯೋಜನೆ ಹಾಕಿದರು. ಇಂತಹ ಮೊದಲ ಪ್ರಯತ್ನ ಉಡುಪಿಯಲ್ಲಿ ನಡೆಯಿತು. ಉಡುಪಿಯ ಮಹಾತ್ಮಾ ಗಾಂಧಿ ಮೆಮೋ ರಿಯಲ್‌ ಕಾಲೇಜು (ಎಂಜಿಎಂ) ಇಂತಹ ಪ್ರಥಮ ಪ್ರಯತ್ನ ವಾಗಿತ್ತು. ಆದರೆ ಅಂದಿನ ದಿನಗಳಲ್ಲಿ ಮಹಿಳೆಯರಿಗೆ ಕಾಲೇಜಿನಲ್ಲಿ ಸಹ ಶಿಕ್ಷಣ ಪಡೆಯುವ ಅವಕಾಶ ಮತ್ತು ವ್ಯವಸ್ಥೆ ಇರಲಿಲ್ಲ. ಈ ಕುರಿತು ವಿವಿಧ ಸ್ತರಗಳಲ್ಲಿ ಪ್ರಯತ್ನ ಮಾಡಿ ಮಹಿಳೆಯರಿಗೂ ಎಂಜಿಎಂ ಕಾಲೇಜಿನಲ್ಲಿ ಸಹಶಿಕ್ಷಣ ಪಡೆಯುವ ಅವಕಾಶವನ್ನು ಡಾ| ಪೈ  ಮಾಡಿಕೊಟ್ಟರು. 

ಟಿ.ಎ. ಪೈ – T A Pai
ಡಾ| ಟಿ.ಎಂ.ಎ.ಪೈಯವರ ಅಣ್ಣ ಉಪೇಂದ್ರ ಪೈಯವರ ಮೊದಲನೇ ಮಗನಾಗಿ ಹುಟ್ಟಿ ರಾಷ್ಟ್ರಮಟ್ಟದ ನಾಯಕರಾಗಿ ಪ್ರಜ್ವಲಿಸಿದ ಪದ್ಮಭೂಷಣ ಟಿ.ಎ.ಪೈಯವರದು ಇನ್ನೊಂದು ದೊಡ್ಡ ಸಾಧನೆ. ಅವರು ಬದುಕಿದ್ದುದು ಕೇವಲ 59 ವರ್ಷ, ಆದರೆ ಅವರ ಸಾಧನೆ ಬಹುದೊಡ್ಡದು. ಅವರು 1944ರಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಅನ್ನು ಸೇರಿದರು. ಮುಂದಿನ ವರ್ಷಗಳಲ್ಲಿ ದೇಶದ ಒಬ್ಬ ಚಿಂತನಶೀಲ ಬ್ಯಾಂಕರ್‌ ಆಗಿ ರೂಪುಗೊಂಡು ಬ್ಯಾಂಕನ್ನು ಸಾಮಾಜಿಕ ಅಭಿವೃದ್ಧಿಯ ಒಂದು ಅಸ್ತ್ರವನ್ನಾಗಿ ಬಳಸಿ ಸಾಧನೆ ಮಾಡಿ ತೋರಿಸಿದರು. ಜೀವಿತ ಕಾಲದಲ್ಲಿ ಅವರು ಅನೇಕ ಜವಾಬ್ದಾರಿಯುತ ಕೆಲಸಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಅಪ್ರತಿಮ ಚಿಂತಕ, ಆರ್ಥಿಕ ತಜ್ಞ, ಸಾಮಾಜಿಕ ಬದಲಾವಣೆಯ ಮತ್ತು ಕೃಷಿ ಅಭಿವೃದ್ಧಿಯ ರೂವಾರಿ ಎನಿಸಿಕೊಂಡರು. ಇಂದು ದೇಶದ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ನಡೆಸಲ್ಪಡುವ ಹೊಸ ಹೊಸ ಯೋಜನೆಗಳನ್ನು ನಾಲ್ಕು ದಶಕಗಳ ಹಿಂದೆಯೇ ಸಿಂಡಿಕೇಟ್‌ ಬ್ಯಾಂಕಿನಲ್ಲಿ ಜಾರಿಗೆ ತಂದಿದ್ದರು. ಇವರು ತನ್ನ ಚಿಕ್ಕಪ್ಪ ಡಾ| ಮಾಧವ ಪೈಗಳ ಸಾಧನೆಯ ಹಿಂದಿನ ದೊಡ್ಡ ಶಕ್ತಿಯಾಗಿದ್ದರು. 1960ರಿಂದ ಎರಡು ದಶಕಗಳ ಕಾಲ ರಾಷ್ಟ್ರದ ಅತ್ಯಂತ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದರು.

ರಾಷ್ಟ್ರೀಯ ನೇತಾರರಲ್ಲೊಬ್ಬರಾಗಿ ಕೇಂದ್ರ ಸಚಿವ ಸಂಪುಟದಲ್ಲಿ ಕೈಗಾರಿಕೆ ಮತ್ತು ರೈಲ್ವೇ ಸಚಿವ ಹುದ್ದೆಯೂ ಸೇರಿದಂತೆ ವಿವಿಧ ಉನ್ನತ ಹುದ್ದೆಗಳನ್ನು ಬಹಳಷ್ಟು ಜವಾಬ್ದಾರಿಯಿಂದ ಪರಿಣಾಮಕಾರಿಯಾಗಿ ಮತ್ತು ದಕ್ಷತೆಯಿಂದ ನಿರ್ವಹಿಸಿ ರಾಷ್ಟ್ರೀಯ ಪ್ರಗತಿಗೆ ಮಹತ್ತರ ಕೊಡುಗೆ ನೀಡಿರುವ ಟಿ.ಎ.ಪೈಯವರು ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಚಿಂತನೆ, ಕಲ್ಪನೆಗಳು ಮತ್ತು ಆದರ್ಶಗಳು ಇಂದು ಮಾತ್ರವಲ್ಲ ಭವಿಷ್ಯದ ದಿನಗಳಲ್ಲೂ ಪ್ರಸ್ತುತ; ಮುಂದಿನ ಜನಾಂಗಗಳಿಗೆ ದಾರಿ ದೀಪಗಳಾಗಬಲ್ಲವು. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಅವರು ನಡೆಸಿದ ಹೊಸ ಹಾಗೂ ಅಪೂರ್ವ ಪ್ರಯೋಗಗಳು ಮತ್ತು ಅವರು ಅಳವಡಿಸಿಕೊಂಡ ಸಾಂಸ್ಥಿಕ ಬ್ಯಾಂಕಿಂಗ್‌ ಧೋರಣೆಗಳು ರಾಷ್ಟ್ರೀಕರಣೋತ್ತರ ಅವಧಿಯಲ್ಲಿ ರಾಷ್ಟ್ರೀಯ ಬ್ಯಾಂಕಿಂಗ್‌ ಕ್ರಾಂತಿಗೆ ಕಾರಣವಾದವು. ಭಾರತೀಯ ಜೀವ ವಿಮಾ ನಿಗಮದ ವರಿಷ್ಠರಾಗಿ ಆ ಬೃಹತ್‌ ಸಂಸ್ಥೆಗೆ ಹೊಸ ಪಥವನ್ನು ಒದಗಿಸಿ, ಅದರ ಅಭ್ಯುದಯದ ರೂವಾರಿಯಾದರು.

ಭಾರತೀಯ ಆಹಾರ ನಿಗಮದ ಸ್ಥಾಪಕಾಧ್ಯಕ್ಷರಾಗಿ ರಾಷ್ಟ್ರದ ಆಹಾರ ಸಮಸ್ಯೆಗೆ ಶಾಶ್ವತ ಪರಿಹಾರವನ್ನೊದಗಿಸುವ ಉದ್ದೇಶದಿಂದ ಹಸಿರು ಕ್ರಾಂತಿಗೆ ನಾಂದಿ ಹಾಡಿದರು. ಕೇಂದ್ರ ಸರಕಾರದ ರೈಲ್ವೇ ಸಚಿವರಾಗಿ ರೈಲು ಉದ್ಯಮಕ್ಕೆ ಕಾಯಕಲ್ಪ ನೀಡಿ ಅದರ ಪ್ರಗತಿಯ ಶಿಲ್ಪಿಯಾಗಿ, ಕೈಗಾರಿಕಾ ಸಚಿವರಾಗಿ ಹೊಸ ಕೈಗಾರಿಕಾ ನೀತಿಯ ಅಳವಡಿಕೆ, ಪರವಾನಿಗೆ ನೀತಿಯ ಉದಾರೀಕರಣ ಇತ್ಯಾದಿ ಕ್ರಮಗಳ ಮೂಲಕ ತ್ವರಿತ ಕೈಗಾರಿಕಾ ಪ್ರಗತಿ ಹಾಗೂ ವಿಸ್ತರಣೆಗೆ ಕಾರಣರಾದರು. ನಿರ್ವಹಣಾ ಶಿಕ್ಷಣವೂ ಸೇರಿದಂತೆ ಶೈಕ್ಷಣಿಕ ಕ್ಷೇತ್ರದಲ್ಲೂ ಮಹತ್ತರವಾದ ಸೇವೆಯನ್ನು ನೀಡಿದ ಪೈಯವರು ಶಿಕ್ಷಣಕ್ಕೆ ಸಂಬಂಧಿಸಿದ ಕೆಲವು ಸಮಿತಿಗಳಲ್ಲೂ ಸೇವೆ ಸಲ್ಲಿಸಿದ್ದಾರೆ. ಅತೀ ಕಿರಿಯ ಹರೆಯದಲ್ಲೇ ಶಾಸಕರಾಗಿ, ರಾಜ್ಯಸಭೆ ಮತ್ತು ಲೋಕಸಭೆಯ ಸದಸ್ಯರಾಗಿ ಮತ್ತು ರಾಜಕೀಯ ಪಕ್ಷವೊಂದರ ಪದಾಧಿಕಾರಿಯಾಗಿ ಹಾಗೂ ಜಿಲ್ಲಾಧ್ಯಕ್ಷರಾಗಿ ಅವರು ದುಡಿದಿದ್ದಾರೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಲ್ಲೊಬ್ಬರಾಗಿ ವಿವಿಧ ಸಮಸ್ಯೆಗಳನ್ನು ಸರಕಾರದ ಲಕ್ಷ್ಯಕ್ಕೆ ತರುವಲ್ಲಿ ಅವರು ಮಹತ್ತರವಾದ ಪಾತ್ರವನ್ನು ವಹಿಸಿದ್ದರು. ದೇಶದ ಅಭಿವೃದ್ಧಿಗೆ ಟಿ. ಎ. ಪೈಯವರು ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದ್ದರು. 1960ರಲ್ಲಿ ಅಮೆರಿಕ ಪ್ರವಾಸ ಮಾಡಿ ಬಂದ ಟಿ. ಎ. ಪೈಯವರು ಅಲ್ಲಿನ ಬ್ಯಾಂಕುಗಳು ಕೃಷಿಕರಿಗೆ ನೀಡುವ ಆರ್ಥಿಕ ನೆರವು, ಅದರಲ್ಲಾದ ಉತ್ಪಾದನೆಯ ಅಭಿವೃದ್ಧಿಯನ್ನು ಮನಗಂಡು ಇಡೀ ದೇಶದಲ್ಲಿ ಪ್ರಥಮವಾಗಿ ಕೃಷಿಗೆ ಆರ್ಥಿಕ ನೆರವನ್ನು ನೀಡುವ ಕ್ರಾಂತಿಕಾರಿ ಪ್ರಯೋಗವನ್ನು ಪ್ರಾರಂಭಿಸಿದರು.

ಮೇಲ್ವಿಚಾರಣೆಯಿಂದ ಕೃಷಿ ಅಭಿವೃದ್ಧಿ
ಬ್ಯಾಂಕಿನ ಮೂಲಕ ಸಾಲ ನೀಡುವ ಜತೆಗೆ ಕೃಷಿಯ ಬಗ್ಗೆ ತಾಂತ್ರಿಕ ಮಾಹಿತಿಯನ್ನು ಕೊಡಲು ಕೃಷಿ ಪದವೀಧರರನ್ನು ಬ್ಯಾಂಕಿನಲ್ಲಿ ಸೇರಿಸಿಕೊಂಡರು. ಇದು ಅತ್ಯಂತ ಯಶಸ್ವಿಯಾದ ಪ್ರಯೋಗವಾಗಿತ್ತು. ಆರಂಭದಲ್ಲಿ ಇದಕ್ಕೆ ಆಕ್ಷೇಪವೆತ್ತಿದ್ದ ಆರ್‌ಬಿಐ ಮತ್ತು ಕೇಂದ್ರ ಸರಕಾರ ಮುಂದಿನ ದಿನಗಳಲ್ಲಿ ಇದನ್ನೇ ರಾಷ್ಟ್ರೀಯ ಧೋರಣೆಯನ್ನಾಗಿ ಮಾಡಿತು. 1965ರಲ್ಲಿ ದೇಶದ ಆಹಾರ ಉತ್ಪಾದನೆಯ ಪರಿಸ್ಥಿತಿ ಬಿಗಡಾಯಿಸಿದಾಗ ಹಸಿರು ಕ್ರಾಂತಿಯ ಮೂಲಕ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಅಂದಿನ ಪ್ರಧಾನ ಮಂತ್ರಿ ಲಾಲ್‌ ಬಹದ್ದೂರ ಶಾಸ್ತ್ರಿ ಮತ್ತು ಕೃಷಿ ಮತ್ತು ಆಹಾರ ಮಂತ್ರಿ ಸಿ. ಸುಬ್ರಮಣ್ಯಂ ಜತೆಗೂಡಿ ಶಕ್ತಿ ಮೀರಿ ಪ್ರಯತ್ನಿಸಿದರು. ಪ್ರಸಿದ್ಧ ಬ್ಯಾಂಕರ್‌ ಆದ ಟಿ. ಎ. ಪೈಯವರು ಅಂದು ಆರಂಭವಾದ ಹಸಿರು ಕ್ರಾಂತಿಯ ಪ್ರಮುಖ ನಾಯಕನೆನಿಸಿದರು. ತಮ್ಮ 44ನೇ ವರ್ಷದಲ್ಲಿ ಫ‌ುಡ್‌ ಕಾರ್ಪೊರೇಷನ್‌ ಆಫ್ ಇಂಡಿಯಾದ ಪ್ರಥಮ ಅಧ್ಯಕ್ಷರಾಗಿ ನೇಮಿಸಲ್ಪಟ್ಟರು. ಇವರ ಪ್ರಯತ್ನದಿಂದಾಗಿ ಮುಂದಿನ 5 ವರ್ಷಗಳಲ್ಲಿ ಆಹಾರ ಉತ್ಪಾದನೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳಾದವು.

ಸ್ವ ಉದ್ಯೋಗಿಗಳಿಗೆ ಪ್ರೋತ್ಸಾಹ
ತಿಂಗಳ ಸಂಬಳ ತರುವ ಉದ್ಯೋಗಕ್ಕಿಂತ ಸ್ವ ಉದ್ಯೋಗಕ್ಕೆ ಒತ್ತು ಕೊಡುವಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಉದ್ಯೋಗ ಮತ್ತು ಗ್ರಾಮಾಭಿವೃದ್ಧಿ ಯೋಜನೆಯನ್ನು 1970ರಲ್ಲಿ ಅರಂಭಿಸಿದರು. ಇದು ದೇಶದಲ್ಲಿಂದು ಬೃಹತ್‌ ಯೋಜನೆಯಾಗಿ ರೂಪುಗೊಂಡಿದೆ. 

ಶಿಕ್ಷಣಕ್ಕೆ ಸಾಲ
ಹಣದ ಕೊರತೆಯಿಂದ ಶಿಕ್ಷಣ ವಂಚಿತರಾಗಬಾರದು ಎಂಬ ನೆಲೆಯಲ್ಲಿ ಬ್ಯಾಂಕಿನ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಾಲ ಕೊಡುವ ಯೋಜನೆಯನ್ನು 1964ರಲ್ಲಿ ಆರಂಭಿಸಿದರು. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಶೈಕ್ಷಣಿಕ ಸಾಲದಿಂದ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. 

ನಿರ್ವಹಣಾ ಕ್ಷೇತ್ರ
ಟಿ. ಎ. ಪೈಯವರು ಒಬ್ಬ ಅದ್ಭುತ ನಿರ್ವಹಣಾ ತಜ್ಞರಾಗಿದ್ದರು. ದೇಶದ ಪ್ರತಿಷ್ಠಿತ ನಿರ್ವಹಣಾ ತಜ್ಞರಾಗಿ, ಆಡಳಿತಗಾರರಾಗಿ, ಮಾರ್ಗದರ್ಶರಾಗಿ ಕೆಲಸ ಮಾಡಿದ್ದರು. ಮಣಿಪಾಲದಲ್ಲಿ ಅವರು ಸ್ಥಾಪಿಸಿದ ಟ್ಯಾಪ್ಮಿ ಇಂದು ದೇಶದಲ್ಲಿ ಪ್ರಸಿದ್ಧಿ ಪಡೆದಿದೆ. ಐಐಎಂ, ಅಹಮದಾಬಾದ್‌ ಮತ್ತು ಬೆಂಗಳೂರು ಇದರ ಸ್ಥಾಪನೆ, ಅಭಿವೃದ್ಧಿಗಾಗಿ ಸಲಹೆ ಸೂಚನೆ ನೀಡುತ್ತಿದ್ದರು. ಇದಲ್ಲದೇ ಸಿಂಡಿಕೇಟ್‌ ಕೃಷಿ ಪ್ರತಿಷ್ಠಾನ, ಬಿವಿಟಿ ಮೊದಲಾದ ಸಂಸ್ಥೆಗಳನ್ನು ಸ್ಥಾಪಿಸಿ ಅಭಿವೃದ್ಧಿ ಪಡಿಸಿದರು. ಡಾ| ಟಿ.ಎಂ.ಎ. ಪೈ ಮತ್ತು ಟಿ. ಎ. ಪೈಯವರು ಮಾನವೀಯತೆಯನ್ನು ಗೌರವಿಸುತ್ತಿದ್ದರು. ಅವರ ಈ ಗುಣದಿಂದ ಪ್ರಯೋಜನ ಪಡೆದ ಲಕ್ಷಾಂತರ ಮಂದಿ ಇಂದು ಸಾರ್ಥಕ ಜೀವನ ನಡೆಸಿ ಸಮಾಜ, ದೇಶದ ಪ್ರಗತಿಗೆ ಬಹುದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ, ಕೊಡುತ್ತಿದ್ದಾರೆ.

ಪೈಯವರು ದೀನದಲಿತರು ಸೇರಿದಂತೆ ಎಲ್ಲರಲ್ಲೂ ಬಲಗಳನ್ನು ಕಂಡರು – ದೌರ್ಬಲ್ಯಗಳನ್ನಲ್ಲ. ಎಲ್ಲರಲ್ಲೂ ಒಳ್ಳೆಯ ತನವನ್ನು ಗುರುತಿಸಿದರು. ಇತರರು ಸಮಸ್ಯೆಗಳನ್ನು ಕಂಡಲ್ಲಿ ಅವರು ಪರಿಹಾರಗಳನ್ನು ಕಂಡರು. ತಾನು ದುಡಿದ ಪ್ರತಿ ಕ್ಷೇತ್ರದಲ್ಲೂ ತನ್ನ ಸೃಜನಶೀಲತೆಯ ಮುದ್ರೆಯನ್ನು ಒತ್ತಿದ ಪೈಯವರು ಹೊಸ ನೀತಿ ಮತ್ತು ಹೊಸ ಕ್ರಮಗಳ ಮೂಲಕ ಅವುಗಳಿಗೆ ಹೊಸ ಹುರುಪು ಹೊಸ ಚೈತನ್ಯ ನೀಡಿ ಅವುಗಳ ಪ್ರಗತಿಯಲ್ಲಿ ವೇಗೋತ್ಕರ್ಷ ಸಾಧಿಸಿದರು. ಮೌಲ್ಯಾಧಾರಿತ ರಾಜಕಾರಣ ಮತ್ತು ಮೌಲ್ಯಾಧಾರಿತ ನಾಯಕತ್ವದ ಕುರಿತು ಮಾತನಾಡುವುದಾದರೆ ಬಹುಶ‌ಃ ಅದನ್ನು ಅನುಸರಿಸಿದ ಕೆಲವೇ ನಾಯಕರಲ್ಲಿ ಟಿ.ಎ.ಪೈಯವರು ಒಬ್ಬರು. ಅಂದಿನ ಕಾಲದ ಪ್ರಸಿದ್ಧ ನ್ಯಾಯವಾದಿಗಳೂ ಸುಪ್ರೀಂ ಕೋರ್ಟಿನ ನ್ಯಾಯಾಧೀಶರೂ ಆದ ವಿ. ಆರ್‌. ಕೃಷ್ಣ ಅಯ್ಯರ್‌ ಅವರು ಟಿ. ಎ. ಪೈ ಬಗ್ಗೆ ಹೇಳಿದ್ದಿದು: ‘ಸರಳ ಸಜ್ಜನಿಕೆ – ಪ್ರಾಮಾಣಿಕತೆಯ ವಿಚಾರದಲ್ಲಿ ದೇಶದಲ್ಲಿ ನಾನು ಕಂಡಂತೆ, ಟಿ. ಎ. ಪೈಯರಂಥವರು ಬಹಳ ವಿರಳ”.

– ಕೆ. ಎಂ. ಉಡುಪ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.