Ayodhya ರಾಮಮಯ : ಜನ್ಮಭೂಮಿಯಲ್ಲಿ ಕೋಟಿಕಂಗಳ ಕನಸು ಸಾಕಾರ
ರಾಮ ಪ್ರಾಣ ಪ್ರತಿಷ್ಠೆಯ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲಿದೆ ಸರಯೂ ನದಿ ತಟದ ಮಹಾನಗರಿ
Team Udayavani, Jan 22, 2024, 6:30 AM IST
ನೂರಾರು ವರ್ಷಗಳ ಹೋರಾಟ, ಕೋಟ್ಯಂತರ ಭಕ್ತರ ಮನದ ಕೋರಿಕೆ ಇಡೀ ಜಗತ್ತೇ ಬೆರಗು ಕಂಗಳಿಂದ ಕಾತುರವಾಗಿ ಕಾಯುತ್ತಿರುವ ಭರತಖಂಡದ ಐತಿಹಾಸಿಕ ಕ್ಷಣವಾಗಿರುವ ರಾಮ ಮಂದಿರದ ಉದ್ಘಾಟನೆಗೆ ಅಯೋಧ್ಯೆ ಸಂಪೂರ್ಣವಾಗಿ ಸಜ್ಜುಗೊಂಡಿದೆ. ಕಂಬನಿ ತುಂಬಿ ಕಾಯುತ್ತಿರುವ ಕೋಟ್ಯಂತರ ಕಂಗಳಿಗೆ ಇಂದು ಭಗವಾನ್ ಶ್ರೀ ರಾಮಲಲ್ಲಾನ ದರ್ಶನ ಪ್ರಾಪ್ತವಾಗಲಿದೆ. ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲಿರುವ ಪುಣ್ಯಭೂಮಿ- ಶ್ರೀರಾಮ ಜನ್ಮಭೂಮಿಯ ತಯಾರಿ ಹೀಗಿದೆ…
ಅಯೋಧ್ಯೆ: ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಗೆ ಅಯೋ ಧ್ಯೆಯ ರಾಮಮಂದಿರ ಸಂಪೂರ್ಣ ಸಜ್ಜಾಗಿದ್ದು, ಈ ಅಭೂತ ಪೂರ್ವ ಗಳಿಗೆಯನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಭಾರತೀ ಯರು ತುದಿಗಾಲಲ್ಲಿ ನಿಂತಿದ್ದಾರೆ.
ಪ್ರಾಣ ಪ್ರತಿಷ್ಠೆಗೆ ಸಂಬಂಧಿಸಿದ ಧಾರ್ಮಿಕ ಕಾರ್ಯಗಳು ಜ.16ರಿಂದಲೇ ಆರಂಭವಾಗಿದ್ದು, ಭಾನುವಾರ ಎಲ್ಲ ಕಾರ್ಯ ಗಳೂ ಸಂಪನ್ನಗೊಂಡಿವೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಾಣಪ್ರತಿಷ್ಠೆ ಕಾರ್ಯ ನೆರವೇರಲಿದೆ. ಮಧ್ಯಾಹ್ನ ಸರಿಯಾಗಿ 12.20ಕ್ಕೆ ಪ್ರಾಣ ಪ್ರತಿಷ್ಠೆ ವಿಧಿ ವಿಧಾನ ಆರಂಭವಾಗಲಿದ್ದು, 1 ಗಂಟೆಯ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ತದನಂತರ ಪ್ರಧಾನಿ ಮೋದಿಯವರು ಅಲ್ಲಿ ನೆರೆಯಲಿರುವ ಸಂತರು, ಖ್ಯಾತ ನಾಮರು ಸೇರಿದಂತೆ ಸುಮಾರು 7 ಸಾವಿರಕ್ಕೂ ಅಧಿಕ ಮಂದಿ ಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕೋಟ್ಯಂತರ ಮಂದಿ ಟಿವಿಗಳು ಹಾಗೂ ಆನ್ಲೈನ್ ವೇದಿಕೆಗಳ ನೇರಪ್ರಸಾರ ದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯನ್ನು ಕಣ್ತುಂಬಿಕೊಳ್ಳಲಿದ್ದಾರೆ.
ಎಲ್ಲೆಲ್ಲೂ ರಾಮ ನಾಮ
ಪ್ರಾಣ ಪ್ರತಿಷ್ಠೆಗೆ ಸಜ್ಜುಗೊಂಡಿ ರುವ ಅಯೋಧ್ಯೆಯು ಸಂಪೂರ್ಣವಾಗಿ ರಾಮಮಯ ವಾಗಿದೆ. ರಾಮಮಂದಿರವು ವಿಶೇಷ ದೀಪಾಲಂಕಾರ, ಪುಷ್ಪಾಲಂಕಾರ ದಿಂದ ಕಂಗೊಳಿಸುತ್ತಿದೆ. ಎಲ್ಲೆಲ್ಲೂ ಆಧ್ಯಾತ್ಮಿಕ ಭಾವ ತುಂಬಿ ತುಳುಕುತ್ತಿದ್ದು, “ಅಯೋಧ್ಯಾ ರಾಮಮಯ್ ಹೋ ರಹಾ ಹೇ’ ಎಂದು ಸ್ಥಳೀಯರು ಉದ್ಗರಿಸುತ್ತಿದ್ದಾರೆ. ಮನೆಗಳು, ಕಟ್ಟಡಗಳ ಗೋಡೆಗಳಿಂದ ಹಿಡಿದು ಮೇಲ್ಸೇತು ವೆಗಳ ಮೇಲಿನ ಬೀದಿದೀಪಗಳನ್ನೂ ಬಿಡದೇ “ರಾಮ, ರಾಮಾಯಣ, ಬಿಲ್ಲು-ಬಾಣಗಳ’ ಚಿತ್ರಗಳು ತುಂಬಿಹೋಗಿವೆ. ನಗರದೆಲ್ಲೆಡೆ ರಾಮರಾಜ್ಯದ ಉದ್ಘೋಷಗಳು, ಕೇಸರಿ ಬಾವುಟಗಳು ರಾರಾಜಿ ಸುತ್ತಿವೆ. ರಾಮಮಾರ್ಗ, ಸರಯೂ ನದಿ ತೀರ, ಲತಾ ಮಂಗೇಶ್ಕರ್ ಚೌಕ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ರಾಮಾಯಣದ ಸ್ತೋತ್ರಗಳು ಮಿಂಚುತ್ತಿವೆ. ನಗರ ದೆಲ್ಲೆಡೆ ರಾಮಲೀಲಾಗಳು, ಭಗವತ್ ಕಥಾ, ಭಜನ್ ಸಂಧ್ಯಾ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಈಗಾಗಲೇ ಬಿಜೆಪಿ ಆಡಳಿತವಿರುವ ರಾಜ್ಯಗಳು ಹಾಗೂ ಬಿಜೆಡಿ ಆಡಳಿತದ ಒಡಿಶಾ ಸರ್ಕಾರ ಸೋಮವಾರ ರಜೆ ಘೋಷಿಸಿದ್ದು, ಕೇಂದ್ರ ಸರ್ಕಾರವು ತನ್ನ ಅಧೀನದಲ್ಲಿರುವ ಸಂಸ್ಥೆಗಳಿಗೆ ಅರ್ಧ ದಿನ ರಜೆ ಘೋಷಿಸಿದೆ. ಇದಲ್ಲದೇ, ಸಾರ್ವಜನಿಕ ವಲಯದ ಬ್ಯಾಂಕುಗಳು, ವಿಮಾ ಕಂಪನಿಗಳು, ಹಣಕಾಸು ಸಂಸ್ಥೆಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕು ಗಳಿಗೆ ಅರ್ಧ ದಿನ ರಜೆ ಇರಲಿದೆ. ದೇಶದ ಎಲ್ಲ ದೇಗುಲಗಳೂ “ರಾಮೋತ್ಸವ’ಕ್ಕೆ ಸಜ್ಜಾಗಿದ್ದು, ವಿಶೇಷ ಪೂಜಾ ಕೈಂಕರ್ಯಗಳಿಗೆ ಸಿದ್ಧತೆ ನಡೆಸಿವೆ. ಭಾರತವಷ್ಟೇ ಅಲ್ಲದೆ, ವಾಷಿಂಗ್ಟನ್ನಿಂದ ಪ್ಯಾರಿಸ್ವರೆಗೆ ಜಗತ್ತಿನ ಮೂಲೆ ಮೂಲೆಗಳಲ್ಲೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಆರೋಗ್ಯ ತುರ್ತು ಪರಿಸ್ಥಿತಿ
ಪ್ರಸ್ತುತ ಉತ್ತರ ಪ್ರದೇಶದಲ್ಲಿ ವಿಪರೀತ ಚಳಿಯಿದೆ. ಅಲ್ಲಿಗೆ ಬರುವ ಗಣ್ಯರು, ಭಕ್ತಾದಿಗಳಿಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾದರೂ ತಕ್ಷಣವೇ ಸ್ಪಂದಿಸುವಂತೆ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ನಗರದ ಸ್ಥಳೀಯ ಆಸ್ಪತ್ರೆಗಳು, ಜಿಲ್ಲಾ ಆಸ್ಪತೆಗಳು ಹಾಗೂ ವೈದ್ಯಕೀಯ ಕಾಲೇಜು ಗಳಲ್ಲಿ ತುರ್ತು ಸ್ಥಿತಿಗೆಂದೇ ಹಾಸಿಗೆಗಳನ್ನು ಮೀಸಲಿಡಲಾಗಿದೆ.
ಬಳೆಗಳಿಂದ ಹಿಡಿದು ಸಿಹಿತಿನಿಸಿನವರೆಗೆ
ಶ್ರೀರಾಮ ಚಿತ್ರವುಳ್ಳ ಬಳೆಗಳಿಂದ ಹಿಡಿದು 56 ಬಗೆಯ ಪೇಠಾ, 500 ಕೆ.ಜಿ. ತೂಕದ ನಗಾರಿ, “ಒನವಿಲ್ಲು’ ಬಿಲ್ಲು, ಅಕ್ಕಿ, ಲಡ್ಡು, ತರಕಾರಿಗಳು, ವಿಶೇಷ ಸುಗಂಧದ್ರವ್ಯಗಳು, 500 ಕೆ.ಜಿ. ಕುಂಕುಮ, ಹೂವುಗಳವರೆಗೆ ದೇಶದ ಮೂಲೆ ಮೂಲೆಗಳಿಂದ ಬಗೆ ಬಗೆಯ ಉಡುಗೊರೆಗಳು ರಾಮಜನ್ಮಭೂಮಿಯನ್ನು ತಲುಪಿವೆ. ಇದಲ್ಲದೇ, 108 ಅಡಿ ಉದ್ದದ ಅಗರಬತ್ತಿ, 2100 ಕೆಜಿ ತೂಕದ ಗಂಟೆ, 1,100 ಕೆ.ಜಿ. ತೂಕದ ಬೃಹತ್ ದೀಪ, ಚಿನ್ನದ ಪಾದುಕೆ, 10 ಅಡಿ ಎತ್ತರದ ಬೀಗ ಮತ್ತು ಕೀಲಿಕೈ, ಗಡಿಯಾರಗಳನ್ನೂ ರಾಮ ದೇಗುಲ ನಿರ್ವಹಣಾ ಸಮಿತಿ ಸ್ವೀಕರಿಸಿದೆ. ಸೀತೆಯ ತವರಾದ ನೇಪಾಳದ ಜನಕಪುರದಿಂದ 3 ಸಾವಿರಕ್ಕೂ ಹೆಚ್ಚು ಉಡುಗೊರೆಗಳು ಬಂದಿವೆ. ಶ್ರೀಲಂಕಾದ ನಿಯೋಗವು ಅಶೋಕ ವಾಟಿಕಾದಿಂದ ವಿಶೇಷ ಉಡುಗೊರೆಯೊಂದನ್ನು ಹೊತ್ತು ತಂದಿದೆ.
ಮಂದಿರ ಉದ್ಘಾಟನೆಗೆ 7 ಸಾವಿರಕ್ಕೂ ಅಧಿಕ ಆಹ್ವಾನಿತರು
ಮಂದಿರ ಲೋಕಾರ್ಪಣೆಯ ಆಹ್ವಾನಿತರ ದೊಡ್ಡ ಪಟ್ಟಿಯಲ್ಲಿ 7 ಸಾವಿರಕ್ಕೂ ಅಧಿಕ ಗಣ್ಯರಿದ್ದಾರೆ. ಈ ಪೈಕಿ ಗಣ್ಯಾತಿಗಣ್ಯ 506 ಮಂದಿಯನ್ನು “ಎ’ ಗುಂಪಿಗೆ ಸೇರಿಸಲಾಗಿದೆ. ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಹೋರಾಡಿದವರ ಕುಟುಂಬಗಳಿಗೂ ಆಹ್ವಾನ ನೀಡಲಾಗಿದೆ. ಬಾಲಿವುಡ್ ಸೂಪರ್ಸ್ಟಾರ್ ಅಮಿತಾಭ್ ಬಚ್ಚನ್, ಉದ್ಯಮಿಗಳಾದ ಮುಕೇಶ್ ಅಂಬಾನಿ, ಗೌತಮ್ ಅದಾನಿ, ಕ್ರೀಡಾ ದಿಗ್ಗಜ ಸಚಿನ್ ತೆಂಡುಲ್ಕರ್ರಂಥ ಗಣ್ಯರು ಮಂದಿರ ಲೋಕಾರ್ಪಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರಲ್ಲದೇ, ಪಟ್ಟಿಯಲ್ಲೇ ಇಲ್ಲದ ಅನೇಕ ರಾಮಭಕ್ತರು ಕಾಲ್ನಡಿಗೆ ಮೂಲಕ, ಸೈಕಲ್ ತುಳಿಯುತ್ತಾ, ಸ್ಕೇಟಿಂಗ್ ಮಾಡುತ್ತಾ ಅಯೋಧ್ಯೆಯನ್ನು ತಲುಪಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ
Ayodhya: ವ್ಯಾಟಿಕನ್, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ
Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?
Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ
Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ
MUST WATCH
ಹೊಸ ಸೇರ್ಪಡೆ
Boeing aircraft: ಬೋಯಿಂಗ್ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್
BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ
Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ
Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್ ರೇವಣ್ಣನಂಥವರಾ?; ಜಿಗ್ನೇಶ್
MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು