ಒಂದು ಸಿಂಗಲ್ ಆಕ್ಸಿಜನ್ಗಾಗಿ ಇಡೀ ದಿನ ಒದ್ದಾಡಿದ್ದೀನಿ: ಕೋವಿಡ್ ಕರಾಳತೆ ಬಿಚ್ಚಿಟ್ಟ ಸಾಧು
Team Udayavani, Apr 19, 2021, 6:24 PM IST
ಬೆಂಗಳೂರು: ಸ್ಯಾಂಡಲ್ವುಡ್ ಹಾಸ್ಯ ನಟ, ಸಂಗೀತ ಹಾಗೂ ಸಿನಿಮಾ ನಿರ್ದೇಶಕ ಸಾಧು ಕೋಕಿಲಾ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಎಲ್ಲರೂ ತಪ್ಪದೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಎಚ್ಚರಿಕೆಯಿಂದ ಇರಿ ಎಂದು ಮನವಿ ಮಾಡಿದ್ದಾರೆ.
ಇಂದು ಸಿನಿಮಾವೊಂದರ ಮುಹೂರ್ತದಲ್ಲಿ ಪಾಲ್ಗೊಂಡಿದ್ದ ಅವರು ಕೋವಿಡ್ ಸೃಷ್ಠಿಸಿರುವ ಭೀಕರ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಎಲ್ಲರೂ ಎಚ್ಚರಿಕೆ ಇಂದ ಇರಿ, ಟಿವಿಯಲ್ಲಿ ತೋರಿಸುತ್ತಿರುವುದೆಲ್ಲ ಸುಳ್ಳಲ್ಲ, ಸೆಲೆಬ್ರಿಟಿಗಳಾಗಿ ನಾವೆ ಪರದಾಡುತ್ತಿದ್ದೀವಿ ಎಂದು ಹೇಳಿದ್ದಾರೆ ಹೇಳಿಕೊಂಡಿದ್ದಾರೆ.
ತಮ್ಮ ಅಣ್ಣನ ಮಗನಿಗೆ ಕೋವಿಡ್ ಪಾಸಿಟಿವ್ ಬಂದ ಸಮಯದಲ್ಲಿ ಅನುಭವಿಸಿದ ಕಷ್ಟದ ಬಗ್ಗೆ ಹೇಳಿರುವ ಸಾಧು,’ನನ್ನ ಅಣ್ಣನ ಮಗನಿಗೆ ಕೋವಿಡ್ ಬಂದಿತ್ತು. ಆತ ಗುಣಮುಖನಾಗಿ 15 ದಿನಗಳು ಕಳೆದರೂ ಅವನಿಗೆ ಉಸಿರಾಟದ ಸಮಸ್ಯೆ ಕಾಡುತ್ತಿದೆ. ನಾನು ಸೆಲೆಬ್ರಿಟಿಯಾಗಿ ಒಂದು ಸಿಂಗಲ್ ಆಕ್ಸಿಜನ್ ತೆಗೆದುಕೊಳ್ಳಲು ಅವತ್ತು ಇಡೀ ದಿನ ಒದ್ದಾಡಿದ್ದೀನಿ. ನಮಗೆ ಇಂತ ಸಮಸ್ಯೆ ಆಗುತ್ತೆ ಅಂದ್ಮೇಲೆ ಇನ್ನು ಸಾಮಾನ್ಯರಿಗೆ ಬಂದ್ರೆ ಏನು ಗತಿ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನು ಇಡೀ ದೇಶಾದ್ಯಂತ ಕೋವಿಡ್ ರೌದ್ರಾವತಾರ ಮುಂದುವರೆದಿದೆ. ನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಇತ್ತ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಕೂಡ ಎದುರಾಗಿದೆ. ಇಂತಹ ಸಂಕಷ್ಟಕರ ಪರಿಸ್ಥಿತಿಯಲ್ಲಿ ಜನರೇ ಅಗತ್ಯ ಎಚ್ಚರಿಕೆ ವಹಿಸಬೇಕಾಗಿದೆ ಎಂದಿದ್ದಾರೆ.