ಮತ್ತೆ ಒಂದಾದ ಗುರುಪ್ರಸಾದ್-ಜಗ್ಗೇಶ್
Team Udayavani, Aug 26, 2018, 11:42 AM IST
“ಮಠ’, “ಎದ್ದೇಳು ಮಂಜುನಾಥ’ – ಕನ್ನಡ ಸಿನಿಪ್ರೇಕ್ಷಕರಿಗೆ ಖುಷಿಕೊಟ್ಟ ಸಿನಿಮಾಗಳ ಪಟ್ಟಿಯಲ್ಲಿ ಈ ಸಿನಿಮಾಗಳು ಕೂಡಾ ಸಿಗುತ್ತವೆ. ಗುರುಪ್ರಸಾದ್ ಹಾಗೂ ಜಗ್ಗೇಶ್ ಕಾಂಬಿನೇಶನ್ನಲ್ಲಿ ಬಂದ ಈ ಚಿತ್ರಗಳು ಹೊಸ ಪ್ರಯೋಗದ ಚಿತ್ರವಾಗಿ ಜನರ ಮನಸ್ಸು ಗೆದ್ದಿದ್ದವು.
ಸಹಜವಾಗಿಯೇ ಯಶಸ್ವಿ ಚಿತ್ರ ಕೊಟ್ಟ ಜೋಡಿಯಿಂದ ಮತ್ತೂಂದಿಷ್ಟು ಚಿತ್ರವನ್ನು ಅಭಿಮಾನಿ ವರ್ಗ ಹಾಗೂ ಚಿತ್ರರಂಗ ಎದುರು ನೋಡುತ್ತಿರುತ್ತದೆ. ಆದರೆ, “ಎದ್ದೇಳು ಮಂಜುನಾಥ’ ಚಿತ್ರದ ನಂತರ ಗುರುಪ್ರಸಾದ್ ಹಾಗೂ ಜಗ್ಗೇಶ್ ದೂರವೇ ಉಳಿದರು. ಅದಕ್ಕೆ ಕಾರಣ ಇಬ್ಬರ ನಡುವಿದ್ದ ಸಣ್ಣ ಮುನಿಸು ಎಂಬ ಸುದ್ದಿಯೂ ಗಾಂಧಿನಗರದ ತುಂಬಾ ಓಡಾಡುತ್ತಿತ್ತು. ಈಗ ಇಬ್ಬರು ಆ ಮುನಿಸು ಮರೆತು ಒಂದಾಗಿದ್ದಾರೆ. ಅದು ಸಿನಿಮಾಕ್ಕಾಗಿ.
ನಿರ್ದೇಶಕ ಗುರುಪ್ರಸಾದ್ ಹಾಗೂ ಜಗ್ಗೇಶ್ ಕಾಂಬಿನೇಶನ್ನಲ್ಲಿ ಮೂರನೇ ಸಿನಿಮಾ ಬರಲಿದೆ. ಈ ಚಿತ್ರಕ್ಕೆ “ಮಠ-2′ ಎಂದು ಹೆಸರಿಡುವ ಸಾಧ್ಯತೆ ಇದೆ. ಈ ಚಿತ್ರವನ್ನು ಕೆ.ಎ.ಸುರೇಶ್ ನಿರ್ಮಿಸಲಿದ್ದಾರೆ. ಈಗಾಗಲೇ ಜಗ್ಗೇಶ್ ಅವರ ಜೊತೆ “ತೋತಾಪುರಿ’ ಚಿತ್ರ ಮಾಡುತ್ತಿರುವ ಸುರೇಶ್, ಅದು ಮುಗಿಸಿಕೊಂಡು ಗುರುಪ್ರಸಾದ್-ಜಗ್ಗೇಶ್ ಸಿನಿಮಾ ಆರಂಭಿಸಲಿದ್ದಾರೆ.
ಈ ಬಗ್ಗೆ ಮಾತನಾಡುವ ಸುರೇಶ್, “ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಇಬ್ಬರು ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. “ತೋತಾಪುರಿ’ ಮುಗಿಸಿಕೊಂಡು, ನವೆಂಬರ್ನಲ್ಲಿ ಆ ಸಿನಿಮಾ ಆರಂಭವಾಗುತ್ತದೆ’ ಎನ್ನುವುದು ಸುರೇಶ್ ಮಾತು. ಇನ್ನು ಟೈಟಲ್ ಬಗ್ಗೆ ಮಾತನಾಡುವ ಅವರು, “ಸದ್ಯಕ್ಕೆ ಏನೂ ಅಂದುಕೊಂಡಿಲ್ಲ. ಮುಂದೆ ನೋಡಬೇಕು’ ಎನ್ನುತ್ತಾರೆ.