ಟೆನ್ನಿಸ್ಕೃಷ್ಣ ಪುತ್ರನ ಸಿನಿಮಾ ಎಂಟ್ರಿ
Team Udayavani, Nov 12, 2019, 6:01 AM IST
ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಹಲವು ಕಲಾವಿದರ ಮಕ್ಕಳು ಹೀರೋಗಳಾಗಿ ಎಂಟ್ರಿಯಾಗಿದ್ದಾರೆ. ಹಲವು ಹಾಸ್ಯ ಕಲಾವಿದರ ಮಕ್ಕಳೂ ಆ ಸಾಲಿಗೆ ಸೇರಿದ್ದಾರೆ. ಈಗ ಟೆನ್ನಿಸ್ಕೃಷ್ಣ ಅವರ ಪುತ್ರನ ಸರದಿ. ಹೌದು, ಟೆನ್ನಿಸ್ಕೃಷ್ಣ ಅವರ ಪುತ್ರ ನಾಗಾರ್ಜುನ್ ಈಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಡಲು ಅಣಿಯಾಗಿದ್ದಾರೆ.
ಒಬ್ಬ ಹೀರೋ ಆಗಲು ಏನೆಲ್ಲಾ ಅರ್ಹತೆಗಳು ಇರಬೇಕೋ ಅವೆಲ್ಲವನ್ನೂ ಕರಗತ ಮಾಡಿಕೊಂಡೇ ಕ್ಯಾಮೆರಾ ಮುಂದೆ ಬಂದು ನಿಲ್ಲಲು ಸಜ್ಜಾಗುತ್ತಿದ್ದಾರೆ. ನಾಗಾರ್ಜುನ್ ಈಗಾಗಲೇ ಡ್ಯಾನ್ಸ್ ಕಲಿತಿದ್ದಾರೆ. ನಟನೆ ತರಬೇತಿಯಲ್ಲಿದ್ದಾರೆ. ಅಷ್ಟಕ್ಕೂ ನಾಗಾರ್ಜುನ್ ಯಾವ ಸಿನಿಮಾ ಮೂಲಕ ಹೀರೋ ಆಗುತ್ತಿದ್ದಾರೆ ಎಂಬ ಪ್ರಶ್ನೆಗೆ, ಟೆನ್ನಿಸ್ಕೃಷ್ಣ ಅವರ ನಿರ್ದೇಶನದ ಹೊಸ ಚಿತ್ರ ಉತ್ತರ.
ಹೌದು, ಅವರ ಪುತ್ರ ನಾಗಾರ್ಜುನ್ ಚಿತ್ರವನ್ನು ಟೆನ್ನಿಸ್ಕೃಷ್ಣ ಅವರೇ ನಿರ್ದೇಶನ ಮಾಡಲಿದ್ದಾರೆ. ಆ ಬಗ್ಗೆ ಹೇಳುವ ಅವರು, “ಈಗಾಗಲೇ ನನ್ನ ಮಗ ನಾಗಾರ್ಜುನ್ನನ್ನು ನೋಡಿದ ಅನೇಕರು, ಸಿನಿಮಾ ಮಾಡುವಂತೆ ಹೇಳುತ್ತಿದ್ದರು. ಅವನಿಗೂ ಆಸಕ್ತಿ ಇತ್ತು.
ಅದಕ್ಕೆ ಸರಿಯಾಗಿ ಕಲಿಕೆಯೂ ಆಯ್ತು. ಈಗ ನಾನೇ ಒಂದು ಕಥೆ ಹೆಣೆದಿದ್ದೇನೆ. ಒಂದಿಬ್ಬರು ನಿರ್ಮಾಪಕರು ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಸದ್ಯಕ್ಕೆ ಶೀರ್ಷಿಕೆ ಪಕ್ಕಾ ಆಗಿಲ್ಲ. ಇಷ್ಟರಲ್ಲೇ ಎಲ್ಲವೂ ಪಕ್ಕಾ ಆಗಲಿದೆ. ಆ ಬಳಿಕ ಉಳಿದ ಮಾಹಿತಿ ಕೊಡುತ್ತೇನೆ’ ಎನ್ನುತ್ತಾರೆ ಟೆನ್ನಿಸ್ಕೃಷ್ಣ.