ಹೊಸಬರ ಕೈಯಲ್ಲಿ ಕಂಟ್ರಿಮೇಡ್ ಗನ್!
Team Udayavani, Mar 9, 2022, 10:25 AM IST
“ಗಂಟು ಮೂಟೆ’ ಮತ್ತು “ಟಾಮ್ ಆ್ಯಂಡ್ ಜೆರ್ರಿ’ ಸಿನಿಮಾಗಳ ಮೂಲಕ ಗಮನ ಸೆಳೆದ ಯುವ ನಟ ನಿಶ್ಚಿತ್ ಕೊರೋಡಿ ಈಗ ಔಟ್ ಆ್ಯಂಡ್ ಔಟ್ ಮಾಸ್ ಲುಕ್ನಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಅಂದಹಾಗೆ, ನಿಶ್ಚಿತ್ ಈ ಬಾರಿ “ಕಂಟ್ರಿಮೇಡ್’ ಎಂಬ ಆ್ಯಕ್ಷನ್ ಕಥಾಹಂದರದ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿತು.
ನಟರಾದ ದುನಿಯಾ ವಿಜಯ್, ವಸಿಷ್ಠ ಸಿಂಹ, ತಬಲ ನಾಣಿ,ನಿರ್ದೇಶಕ ಎ. ಪಿ ಅರ್ಜುನ್ ಮೊದಲಾದವರು ಮುಹೂರ್ತ ಸಂದರ್ಭದಲ್ಲಿ ಹಾಜರಿದ್ದು, ಚಿತ್ರಕ್ಕೆ ಶುಭ ಹಾರೈಸಿದರು.
ಸುಮಾರು ಒಂದೂವರೆ ದಶಕದಿಂದ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವವಿರುವ ರಾಘವ ಸೂರ್ಯ “ಕಂಟ್ರಿಮೇಡ್’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ರಾಘವ ಸೂರ್ಯ, “ಸಿನಿಮಾದ ಟೈಟಲ್ಲೇ ಹೇಳುವಂತೆ, ಇದೊಂದು ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಥಾಹಂದರದ ಸಿನಿಮಾ. ಒಬ್ಬ ಹುಡುಗ, ಒಂದು
ಗನ್ ಮತ್ತದರ ಹಿಂದಿನ ಒಂದಷ್ಟು ಸಂಗತಿಗಳ ಸುತ್ತ ಇಡೀ ಸಿನಿಮಾದ ಕಥೆ ನಡೆಯುತ್ತದೆ. ಉತ್ತರ ಕರ್ನಾಟಕದಿಂದ ಶುರುವಾಗುವ ಸಿನಿಮಾದ ಕಥೆ ಪಶ್ಚಿಮ ಬಂಗಾಳದ ಕೋಲ್ಕತ್ತಾದವರೆಗೆ ಸಾಗುತ್ತದೆ. ಆ್ಯಕ್ಷನ್ ಜೊತೆಗೆ ಸಸ್ಪೆನ್ಸ್, ಥ್ರಿಲ್ಲರ್ ಎಲಿಮೆಂಟ್ಸ್ ಕೂಡ ಸಿನಿಮಾದಲ್ಲಿದೆ. ಕನ್ನಡದ ಮಟ್ಟಿಗೆ ಹೊಸಥರದ ಕಥೆಯೊಂದನ್ನು, ವಿಭಿನ್ನ ಶೈಲಿಯಲ್ಲಿ ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದೇವೆ’ ಎನ್ನುತ್ತಾರೆ.
ಇದನ್ನೂ ಓದಿ:‘ಜೇಮ್ಸ್’ ಇದು ಸಿನಿಮಾವಲ್ಲ, ಕನ್ನಡಿಗರ ಭಾವನೆ
ಉತ್ತರ ಕರ್ನಾಟಕ ಮತ್ತು ಕೋಲ್ಕತ್ತಾದ ಎರಡು ಬ್ಯಾಕ್ ಡ್ರಾಪ್ಗ್ಳಲ್ಲಿ ಸಾಗುವ ಮಾಸ್ ಗ್ಯಾಂಗ್ ಸ್ಟರ್ ಕಥೆಯಲ್ಲಿ ನಾಯಕ ನಿಶ್ಚಿತ್ ಕೊರೋಡಿ ಎರಡು ಶೇಡ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಕೆಲವು ಕಹಿ ಘಟನೆಗಳನ್ನು ಸಹಿಸಿಕೊಳ್ಳಲಾಗದೆ ಊರು ಬಿಟ್ಟು ಕೋಲ್ಕತ್ತಾ ಸೇರಿಕೊಳ್ಳುವ ನಾಯಕನ ಸುತ್ತ ಸಿನಿಮಾದ ಕಥೆ ಹೆಣೆಯಲಾಗಿದೆ ಎಂದು ಕಥಾಹಂದರದ ಬಗ್ಗೆ ವಿವರಣೆ ಕೊಡುತ್ತದೆ ಚಿತ್ರತಂಡ.
ಇನ್ನು “ಕಂಟ್ರಿಮೇಡ್’ ಚಿತ್ರದಲ್ಲಿ ನಿಶ್ಚಿತ್ ಕೊರೋಡಿ ಅವರಿಗೆ “ಲವ್ ಮಾಕ್ಟೇಲ್ 2′ ಖ್ಯಾತಿಯ ರಚೇಲ್ ಡೇವಿಡ್ ನಾಯಕಿಯಾಗಿ ಬೆಂಗಾಲಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ತಬಲಾನಾಣಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
“ಗೊಂಬೆ ಪಿಕ್ಚರ್’ ಬ್ಯಾನರ್ನಲ್ಲಿ ಭಾವನಾ ರವಿ “ಕಂಟ್ರಿಮೇಡ್’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. “ಕಂಟ್ರಿಮೇಡ್’ ಚಿತ್ರಕ್ಕೆ ಜಿ. ಎಸ್ ಶ್ರೇಯಸ್ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನವಿದೆ. ಚಿತ್ರದ ಹಾಡುಗಳಿಗೆ ನಕುಲ್ ಅಭಯಂಕರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಸದ್ಯ ಮುಹೂರ್ತವನ್ನು ಆಚರಿಸಿಕೊಂಡಿರುವ “ಕಂಟ್ರಿಮೇಡ್’ ಶೀಘ್ರದಲ್ಲಿಯೇ ಚಿತ್ರೀಕರಣಕ್ಕೆ ಹೊರಡುವ ಯೋಜನೆಯಲ್ಲಿದೆ.