ದಿಗಂತ್ ಈಗ ಅಡಿಕೆ ಬೆಳೆಗಾರ
ಹೆಸರಿಡದ ಚಿತ್ರದಲ್ಲಿ ದೂದ್ಪೇಡ ಜೊತೆ ಐಂದ್ರಿತಾ ನಟನೆ
Team Udayavani, Feb 27, 2020, 7:04 AM IST
ದಿಗಂತ್ ಇತ್ತೀಚೆಗಷ್ಟೇ “ಮಾರಿಗೋಲ್ಡ್’ ಚಿತ್ರ ಒಪ್ಪಿಕೊಂಡಿರುವ ಸುದ್ದಿ ಹೇಳಲಾಗಿತ್ತು. ಈಗ ದಿಗಂತ್ ಮತ್ತೂಂದು ಹೊಸಬರ ಚಿತ್ರ ಒಪ್ಪಿದ್ದಾರೆ. ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಉಪ್ಪಿ ಎಂಟರ್ಟೈನರ್ಸ್ ಬ್ಯಾನರ್ನಲ್ಲಿ ಸಿಲ್ಕ್ ಮಂಜು ನಿರ್ಮಿಸುತ್ತಿದ್ದಾರೆ. ದೇವೇಂದ್ರ ರೆಡ್ಡಿ ಹಾಗು ಎ.ಪ್ರಕಾಶ್ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಈ ಚಿತ್ರದ ಮೂಲಕ ವಿನಾಯಕ ಕೋಡ್ಸರ ನಿರ್ದೇಶಕರಾಗುತ್ತಿದ್ದಾರೆ.
ಈ ಹಿಂದೆ ಕಿರುಚಿತ್ರ ನಿರ್ದೇಶಿಸಿದ್ದ ಅನುಭವ ವಿನಾಯಕ ಕೋಡ್ಸರ ಅವರಿಗಿದೆ. ಚಿತ್ರದಲ್ಲಿ ದಿಗಂತ್ಗೆ ನಾಯಕಿಯಾಗಿ ಐಂದ್ರಿತಾ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಫೆ.27 (ಇಂದು) ಸಿಗಂಧೂರು ಚೌಡೇಶ್ವರಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಲಿದೆ. ಇದೇ ಮಾರ್ಚ್ನಲ್ಲಿ ಚಿತ್ರೀಕರಣ ನಡೆಯಲಿದ್ದು, ಸಿಗಂಧೂರು, ನಿಟ್ಟೂರು ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣ ನಡೆಸುವ ಉದ್ದೇಶ ಚಿತ್ರತಂಡಕ್ಕಿದೆ.
ಇದೊಂದು ಮಲೆನಾಡಿನ ಬದುಕನ್ನು ಬಿಂಬಿಸುವ ಕಥೆಯಾಗಿದ್ದು, ಮೊದಲ ಬರಿಗೆ ದಿಗಂತ್ ಅಡಿಕೆ ಬೆಳೆಗಾರನಾಗಿ, ಗೊಬ್ಬರದ ಅಂಗಡಿ ಮಾಲೀಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಹಾಸ್ಯಮಯ ಸಿನಿಮಾ ಆಗಿದ್ದು, ಎಲ್ಲರ ಬದುಕಿಗೂ ಬೆಸೆದುಕೊಳ್ಳುವ ಸಹಜ ಕಥೆ ಎಂಬುದು ನಿರ್ದೇಶಕರ ಹೇಳಿಕೆ. ಚಿತ್ರದಲ್ಲಿ “ಪುಟ್ಟಗೌರಿ’ಖ್ಯಾತಿಯ ರಂಜನಿ ರಾಘವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರಕ್ಕೆ ರವೀಂದ್ರ ಜೋಶಿ ಕಾರ್ಯಕಾರಿ ನಿರ್ಮಾಪಕರು. ಸುಮಾರು 25 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಮಂಜುನಾಥ್ ಹೆಗಡೆ ಸೇರಿದಂತೆ ಸ್ಥಳೀಯ ಕಲಾವಿದರು ನಟಿಸುತ್ತಿದ್ದಾರೆ. ಪ್ರಜ್ವಲ್ ಪೈ ಮೂರು ಹಾಡುಗಳಿಗೆ ಸಂಗೀತ ನೀಡಿದರೆ, ನಂದಕಿಶೋರ್ ಛಾಯಾಗ್ರಹಣವಿದೆ. ವೇಣು ಹಸ್ರಾಳಿ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ವಿಶ್ವಜಿತ್ ರಾವ್ ಸಾಹಿತ್ಯವಿದೆ.