“ದಿ.ಮಂಜುನಾಥನ ಗೆಳೆಯರು’ ಸಿನಿಮಾದಲ್ಲಿ ಸತ್ಯಜಿತ್ ನಟನೆ
Team Udayavani, Dec 21, 2017, 6:13 PM IST
ಹಿರಿಯ ನಟ ಸತ್ಯಜಿತ್ ಅವರು ಗ್ಯಾಂಗ್ರಿನ್ಗೆ ತುತ್ತಾಗಿ ಒಂದು ಕಾಲ ಕಳೆದುಕೊಂಡಿರುವ ವಿಚಾರ ನಿಮಗೆ ಗೊತ್ತಿದೆ. ಹಾಗಂತ ಅವರಲ್ಲಿ ಸಿನಿಮಾ ಪ್ರೀತಿ ಕಡಿಮೆಯಾಗಿಲ್ಲ. ಸಿಕ್ಕ ಅವಕಾಶಗಳಿಗೆ ನ್ಯಾಯ ಒದಗಿಸುವುದರಲ್ಲಿ ಅವರು ಹಿಂದೆ ಬಿದ್ದಿಲ್ಲ. ಹಾಗಾಗಿಯೇ ಅವರಿಗೆ ಒಂದಷ್ಟು ಅವಕಾಶಗಳು ಸಿಗುತ್ತಿವೆ. ಈಗ ಸತ್ಯಜಿತ್ ಅವರು “ದಿ.ಮಂಜುನಾಥನ ಗೆಳೆಯರು’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಅವರಿಲ್ಲಿ ಪೊಲೀಸ್ ಕಮೀಶನರ್ ಆಗಿ ನಟಿಸಿದ್ದಾರೆ. ಈ ಮೂಲಕ ಮತ್ತೂಮ್ಮೆ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಸತ್ಯಜಿತ್. ಇಡೀ ಸಿನಿಮಾದಲ್ಲಿ ಅವರು ಕುಳಿತೇ ನಟಿಸಿದ್ದಾರೆ.
ಚಿತ್ರತಂಡ ಕೂಡಾ ಅವರಿಗೆ ಅನುಕೂಲವಾಗುವಂತಹ ದೃಶ್ಯಗಳನ್ನು ಸಂಯೋಜಿಸಿದೆಯಂತೆ. ಅರುಣ್ ಎನ್ನುವವರು ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕತೆ, ಸಂಭಾಷಣೆ ಬರೆದು ಚಿತ್ರ ಮಾಡುತ್ತಿದ್ದಾರೆ. ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬದುಕಿನ ಕಥೆಯನ್ನು ಹೊಂದಿರುವ ಚಿತ್ರವಿದು.
ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಮುಂದಿನ ತಿಂಗಳ ಆರಂಭದಲ್ಲಿ ಚಿತ್ರದ ಆಡಿಯೋ ಬಿಡುಗಡೆ ನಡೆಯಲಿದೆ ಎಂದು ನಿರ್ದೇಶಕ ಅರುಣ್ ತಿಳಿಸಿದ್ದಾರೆ. ಲವ್ ಮತ್ತು ಹಾರರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ಅರುಣ್ ಎಸ್.ಡಿ. ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪೂರ್ಣ ಮತ್ತು ಮೊಹ್ಮದ್ ಅಮಿನ್ ಛಾಯಾಗ್ರಹಣ, ವಿನಯ್ ಕುಮಾರ್ ಶಾಸ್ತ್ರಿ ಸಂಗೀತ, ಕುಮಾರ್ ಸಿಕೆ ಸಂಕಲನ, ಗೋಪಿ ಸೀಗೇಹಳ್ಳಿ-ಅರುಣ್ ಸಾಹಿತ್ಯ, ರವಿ ಪೂಜಾರ್ ಕಲಾನಿರ್ದೇಶನವಿದೆ. ರುದ್ರಪ್ರಯಾಗ್, ಶೀತಲ್ ಪಾಂಡ್ಯ, ಶಂಕರಮೂರ್ತಿ, ಸತ್ಯಜಿತ್, ಅವಿನಾಶ್ ಮುದ್ದಪ್ಪ, ರವಿ ಪೂಜಾರ್, ಹೆಚ್.ಎನ್. ಸಚಿನ್, ನವೀನ್, ಶಿವಣ್ಣ, ಮೋಹನ್ ದಾಸ್, ಸುಂಗಾರಿ ನಾಗರಾಜ್, ಹರಿಹರ ಗೋಪಾಲನ್, ಜ್ಯೋತಿ ಮೂರೂರು, ರಾಧಾ ಕೆಂಪೇಗೌಡ, ಪ್ರಭಾಕರ್ ರಾವ್ ಮುಂತಾದವರ ತಾರಾಬಳಗವಿದೆ.