ನಿಜಜೀವನದಲ್ಲಿ ಮದ್ಯ ಸೇವಿಸದ ನಟ ಸುಧೀರ್ ಖಳನಟನ ಪಾತ್ರದಲ್ಲಿ ಪರಕಾಯ ಪ್ರವೇಶ!
ನಾಗೇಂದ್ರ ತ್ರಾಸಿ, Aug 31, 2019, 7:30 PM IST
ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುವ, ಮನಮುಟ್ಟುವ ವಿಲನ್ ಯಾರು ಎಂದು ಕೇಳಿದರೆ, ಥಟ್ಟನೆ ಹೊಳೆಯುವ ಹೆಸರು ವಜ್ರಮುನಿ, ತೂಗುದೀಪ್ ಶ್ರೀನಿವಾಸ್, ಟೈಗರ್ ಪ್ರಭಾಕರ್, ಶಕ್ತಿಪ್ರಸಾದ್, ಸುಂದರ ಕೃಷ್ಣ ಅರಸ್, ದೇವರಾಜ್, ಸುಧೀರ್..ಹೀಗೆ ತೆರೆಯ ಮೇಲೆ ತಮ್ಮ ಅದ್ಭುತ ನಟನೆಯ ಮೂಲಕ ಇಂದಿಗೂ ಕನ್ನಡ ಚಿತ್ರಪ್ರೇಮಿಗಳ ಮನದಾಳದಲ್ಲಿ ಬೇರೂರಿದ್ದಾರೆ.
ಒಂದು ಕಾಲಕ್ಕೆ ವಜ್ರಮುನಿ, ತೂಗುದೀಪ್, ಟೈಗರ್ ಪ್ರಭಾಕರ್, ಸುಂದರ ಕೃಷ್ಣ ಅರಸ್ ಬಳಿಕ ಖಳನಟನ ಪಾತ್ರದಲ್ಲಿ ಹೆಚ್ಚು ಮಿಂಚಿದವರು ಸುಧೀರ್..ನಿಮಗೆ ಶಂಕರ್ ನಾಗ್ ಅಭಿನಯದ “ನ್ಯಾಯ ಎಲ್ಲಿದೆ” ಸಿನಿಮಾ ನೋಡಿದ ನೆನಪಿದೆಯಾ? ಯಾಕೆಂದರೆ ಅದರಲ್ಲಿ ವಿಲನ್ ಪಾತ್ರ ಮಾಡಿದವರು ಸುಧೀರ್! ಅದರಲ್ಲಿ ಅವರದ್ದು ಸದಾ ಮದ್ಯಪಾನ ಮಾಡುವ ಪಾತ್ರ. ಗ್ಲಾಸ್ ನಲ್ಲಿ ಮದ್ಯ ಸುರಿವಿಕೊಂಡು ಅದರೊಳಗೆ ಸಿಗರೇಟ್ ಹುಡಿ ಉದುರಿಸುತ್ತಾ..ಅಟ್ಟಹಾಸದ ನಗುವಿನೊಂದಿಗೆ ಕುಡಿಯುವ ದೃಶ್ಯ ನೈಜವಾಗಿ ಮೂಡಿಬಂದಿರುವುದು ನಿಮ್ಮ ಸ್ಮೃತಿ ಪಟಲದಲ್ಲಿ ಅಚ್ಚಳಿಯದೆ ಇರುತ್ತೆ!
ಹೌದು ಯಾಕೆಂದರೆ ಅಷ್ಟು ಸಹಜ ಅಭಿನಯ ಸುಧೀರ್ ಅವರದ್ದು! ಕುತೂಹಲಕಾರಿ ಸಂಗತಿ ಏನೆಂದರೆ ನಿಜಜೀವನದಲ್ಲಿ ಸುಧೀರ್ ಒಂದೇ ಒಂದು ತೊಟ್ಟು ಶರಾಬು ಕುಡಿದವರಲ್ಲ. ಸಿಗರೇಟ್ ಸೇದಿದವರಲ್ಲ. 1973ರಲ್ಲಿ ಬಿಡುಗಡೆಯಾದ ಬೀಸಿದ ಬಲೆ ಸಿನಿಮಾದಲ್ಲಿ ಅಭಿನಯ ಶುರು ಮಾಡಿದ ಸುಧೀರ್ ಅವರು ಸಿಂಧೂರ ಲಕ್ಷ್ಮಣ, ನಾರದ ವಿಜಯ, ಮಂಕು ತಿಮ್ಮ, ಹಾವಿನ ಹೆಡೆ, ಕೆರಳಿದ ಸಿಂಹ, ನೀ ನನ್ನ ಗೆಲ್ಲಲಾರೆ, ಗಂಡು ಗಲಿ ರಾಮ, ಬೆಂಕಿ ಬಿರುಗಾಳಿ, ಆಫ್ರಿಕಾದಲ್ಲಿ ಶೀಲಾ, ಅಂತಿ ಘಟ್ಟ, ಬಂಧ ಮುಕ್ತ, ಸಾಂಗ್ಲಿಯಾನಾ, ನ್ಯಾಯ ಎಲ್ಲಿದೆ ಸೇರಿದಂತೆ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು.
ವೃತ್ತಿರಂಗಭೂಮಿ ಕಲಾವಿದರಿಗೆ ಒಳ್ಳೆಯದಾಗಲಿ ಎಂಬ ನೆಲೆಯಲ್ಲಿ ಸುಧೀರ್ ನಾಟಕ ಕಂಪನಿ ಸ್ಥಾಪಿಸಿದ್ದರು. ಎಸ್ಸೆಎಸ್ಸೆಲ್ಸಿವರೆಗೆ ಓದಿದ್ದ ಮಾಲತಿ ಅವರು ಅದ್ಭುತವಾಗಿ ನೃತ್ಯ ಮಾಡುತ್ತಿದ್ದುದನ್ನು ಗಮನಿಸಿದವರು ಮಿನುಗುತಾರೆ ಕಲ್ಪನಾ. ಕೊನೆಗೆ ತಮ್ಮ ನಾಟಕದ ಕಂಪನಿಗೆ ಮಾಲತಿಯನ್ನು ಸೇರಿಸಿಕೊಂಡಿದ್ದರಂತೆ. ಆ ಕಂಪಮಿಯಲ್ಲೇ ಪಾತ್ರ ಮಾಡುತ್ತಿದ್ದ ಸುಧೀರ್ ಮಾಲತಿಯವರನ್ನೇ ವಿವಾಹವಾಗಿದ್ದರು. ಈ ದಂಪತಿಗೆ ತರುಣ್ ಸುಧೀರ್, ನಂದಕಿಶೋರ್ ಇಬ್ಬರು ಮಕ್ಕಳು. ನಿರ್ದೇಶನದಲ್ಲಿ ಈಗಾಗಲೇ ಇಬ್ಬರೂ ಜನಪ್ರಿಯರಾಗಿದ್ದಾರೆ.
ವಿಲನ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದ ಸುಧೀರ್ ಜಿರಲೆಗೆ ಹೆದರುತ್ತಿದ್ರು!
ಸಿನಿಮಾಗಳಲ್ಲಿ ಖಳನಟನಾಗಿ ಮಿಂಚಿದ್ದ ಸುಧೀರ್ ಅವರು ನಿಜಜೀವನದಲ್ಲಿ ಸಣ್ಣ ಜಿರಲೆ ಕಂಡರು ಭಯಬೀಳುತ್ತಿದ್ದರಂತೆ. ಅಷ್ಟೇ ಅಲ್ಲ ನಾಯಿಯನ್ನು ಕಂಡರೆ ಮತ್ತೂ ಭಯಕ್ಕೆ ಬೀಳುತ್ತಿದ್ದರು. ಆದರೆ ಸುಧೀರ್ ಅಪ್ಪಟ ಮಾನವೀಯತೆ ಗುಣವುಳ್ಳ ನಟರಾಗಿದ್ದರು ಎಂದು ಪತ್ನಿ ಮಾಲತಿ ಸುಧೀರ್ ಒಮ್ಮೆ ನೆನಪಿಸಿಕೊಂಡಿದ್ದರು.
ಅಭಿನಯದಲ್ಲಿ ಧೂಳು ನುಂಗಿ, ನುಂಗಿ ನರಳುವಂತಾಗಿತ್ತು!
ಸಿನಿಮಾ ಶೂಟಿಂಗ್ ವೊಂದರ ಸಂದರ್ಭದಲ್ಲಿ ಸುಧೀರ್ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಆದರೆ ಅಂದಿನ ಚಿತ್ರೀಕರಣದಲ್ಲಿ ಧೂಳಿನಿಂದಾಗಿ ಸುಧೀರ್ ಕಂಗೆಟ್ಟು ಹೋಗಿದ್ದರು. ತನಗೆ ಡಸ್ಟ್ ಅಲರ್ಜಿ ಇದೆ ಎಂದು ಹೇಳಿದ್ದರೂ ಕೂಡಾ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಡಸ್ಟ್ ಅಲರ್ಜಿಯಿಂದಾಗಿ ಮರುದಿನ ಸುಧೀರ್ ಅವರು ಆಸ್ಪತ್ರೆ ಸೇರುವಂತಾಗಿತ್ತು. ಧೂಳಿನಿಂದಾಗಿ ಆಸ್ಪತ್ರೆಯ ಬೆಡ್ ಮೇಲೆ ನರಳಿ ಹೋಗಿದ್ದರು. ಎಷ್ಟೇ ಪ್ರಯತ್ನ ಪಟ್ಟರೂ ಚಿಕಿತ್ಸೆ ಫಲಕಾರಿಯಾಗದೆ ಸುಧೀರ್ ಅವರು 2000ನೇ ಇಸವಿ ಜೂನ್ 13ರಂದು ಇಹಲೋಕ ತ್ಯಜಿಸಿದ್ದರು.
ಯಾವುದೇ ರೇಸು, ಇಸ್ಪೀಟ್, ಜೂಜಾಟದ ಚಟ ಇರದ ಸುಧೀರ್ ಅಗಲಿದ್ದಾಗ ಹಿರಿಯ ಮಗ 10ನೇ ತರಗತಿಯಲ್ಲಿದ್ದರೆ, ಕಿರಿಯ ಮಗ 9ನೇ ತರಗತಿ. ಮಾಲತಿ ಸುಧೀರ್ ಕಂಗೆಟ್ಟು ಹೋಗಿದ್ದರು. ಆದರೆ ಅದುವರೆಗೂ ತಿಳಿಯದ ಒಂದು ಗುಟ್ಟು ಅವರಿಗೆ ನಂತರ ತಿಳಿಯಿತು. ಅದೇನೆಂದರೆ ಕರ್ನಾಟಕ ಕಲಾ ವೈಭವ ನಾಟಕ ಕಂಪನಿಯನ್ನು ಪತ್ನಿ ಹೆಸರಿಗೆ ಬರೆದಿದ್ದರು!
ಒಂದೆಡೆ ಮಕ್ಕಳ ಭವಿಷ್ಯ, ಮತ್ತೊಂದೆಡೆ ಪತಿ ಸುಧೀರ್ ಕನಸು ನನಸು ಮಾಡುವ ಛಲದೊಂದಿಗೆ ಮಾಲತಿ ಸುಧೀರ್ ಬದುಕಿನ ಜಟಕಾ ಬಂಡಿ ಏರಿದ್ದರು. ಈ ಬದುಕಿನ ಸೆಣಸಾಟದಲ್ಲಿ ಮನೆ, ಸೈಟು, ಹಣವನ್ನೆಲ್ಲಾ ಕಳೆದುಕೊಂಡುಬಿಟ್ಟಿದ್ದರು! ಕೊನೆಗೂ ಮಕ್ಕಳು ತಾಯಿಯ ಕೈಹಿಡಿಯುವ ಮೂಲಕ ಮಾಲತಿ ಸುಧೀರ್ ಅವರು ಕಷ್ಟದ ಬದುಕಿನ ಜೊತೆ, ಜೊತೆಯಲ್ಲೇ ಯಶಸ್ಸಿನ ಮೆಟ್ಟಿಲೇರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rachana inder: ಮರ್ಡರ್ ಮಿಸ್ಟರಿ 4 ಎನ್ 6
Sandalwood: ರಿಲಯನ್ಸ್ ತೆಕ್ಕೆಗೆ ʼಜಡ್ಜ್ ಮೆಂಟ್ʼ
Sandalwood: ಸ್ಪಂದನಾ ಇದ್ದಿದ್ದರೆ ಬಹಳ ಖುಷಿಪಡುತ್ತಿದ್ದಳು.. ವಿಜಯ ರಾಘವೇಂದ್ರ ಭಾವುಕ
ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ
Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್ʼ