ರಾಜಕೀಯ ಅಖಾಡಕ್ಕೆ ಕಿಚ್ಚ? “ನಾನು ರಾಜಕೀಯಕ್ಕೆ ಬಂದರೆ..” ಬಾದ್ ಷಾ ಹೇಳಿದ್ದೇನು?
Team Udayavani, Mar 24, 2024, 11:44 AM IST
ಬೆಂಗಳೂರು: ಸೆಲೆಬ್ರಿಟಿಗಳು ರಾಜಕೀಯ ಪಕ್ಷಗಳ ಪರ ಪ್ರಚಾರ ಮಾಡುವುದು ಹೊಸದೇನಲ್ಲ. ಕೆಲ ಖ್ಯಾತ ನಟ- ನಟಿಯರು ರಾಜಕೀಯ ವಲಯಕ್ಕೆ ಧುಮುಕಿ ಯಶಸ್ಸು ಕಂಡಿದ್ದಾರೆ.
ಲೋಕಸಭಾ ಅಥವಾ ವಿಧಾನಸಭಾ ಚುನಾವಣೆ ವೇಳೆ ರಾಜಕೀಯ ಪಕ್ಷಗಳ ಪರ ಪ್ರಚಾರ ಮಾಡಲು ಅಭ್ಯರ್ಥಿಗಳು ಸ್ಟಾರ್ಸ್ ಗಳನ್ನು ಕ್ಯಾಂಪೇನ್ ಗೆ ಕರೆಯುತ್ತಾರೆ. ಸುಮಲತಾ ಪರವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಯಶ್ ಹಾಗೂ ದರ್ಶನ್ ಜೋಡೆತ್ತಾಗಿ ಪ್ರಚಾರಕ್ಕಿಳಿದಿದ್ದರು. ಇನ್ನು ನಟ ಕಿಚ್ಚ ಸುದೀಪ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಪರವಾಗಿ ಪ್ರಚಾರಕ್ಕಿಳಿದಿದ್ದರು.
ಕಿಚ್ಚ ಸುದೀಪ್ ಅವರು ರಾಜಕೀಯಕ್ಕೆ ಬರುತ್ತಾರೆ ಎನ್ನುವ ಗುಸುಗುಸು ಚರ್ಚೆ ಕಳೆದ ಕೆಲ ವರ್ಷಗಳಿಂದ ಹರಿದಾಡುತ್ತಿದೆ. ಈ ಹಿಂದೆ ಕಿಚ್ಚ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಕ್ಕೆ ಸೇರುತ್ತಾರೆ ಎನ್ನುವ ಮಾತುಗಳು ಮೂರು ಕಡೆಯಿಂದ ಕೇಳಿಬಂದಿತ್ತು.
ಇದೀಗ ಲೋಕಸಭಾ ಚುನಾವಣೆ ಸಮೀಪಕ್ಕೆ ಬಂದಿದ್ದು, ಕಿಚ್ಚನ ಬಳಿ ಮತ್ತೆ ರಾಜಕೀಯಕ್ಕೆ ಬರುವಿರಾ ಎನ್ನುವ ಪ್ರಶ್ನೆಯೊಂದನ್ನು ಕೇಳಲಾಗಿದೆ.
ನಟ ಚಂದನ್ ಅವರ ಹೊಸ ಹೋಟೆಲ್ ಉದ್ಘಾಟನೆಗೆ ಆಗಮಿಸಿದ ವೇಳೆ ಕಿಚ್ಚನ ಬಳಿ ರಾಜಕೀಯ ಪ್ರವೇಶದ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಸುದೀಪ್, “ಕಳೆದ ಬಾರಿ ಯಾರಿಗಾಗಿ, ಯಾವ ಕಾರಣಕ್ಕಾಗಿ ಪ್ರಚಾರಕ್ಕೆ ಹೋಗಿದ್ದೆ ಎಂಬುದನ್ನು ನಾನು ಸ್ಪಷ್ಟಪಡಿಸಿದ್ದೆ. ಈ ಬಾರಿ ಇನ್ನೂ ಸಹ ಯಾರೂ ನನ್ನನ್ನು ಪ್ರಚಾರಕ್ಕಾಗಿ ಕೇಳಿಲ್ಲ. ಕೇಳಿದಾಗ ಆ ಬಗ್ಗೆ ನಿರ್ಧಾರ ಮಾಡುತ್ತೇನೆ” ಎಂದಿದ್ದಾರೆ.
“ನಾನು ಸಿನಿಮಾ ಬಿಟ್ಟು ಕ್ರಿಕೆಟ್ ಆಡ್ತಿರುವುದಕ್ಕೆ ಆಗಲೇ ಅನೇಕರ ಕಣ್ಣು ಕೆಂಪಾಗಿದೆ. ಇಂಥಹ ಸಮಯದಲ್ಲಿ ಶೂಟಿಂಗ್ ಬಿಟ್ಟು ರಾಜಕೀಯ ಪ್ರಚಾರಕ್ಕೆ ಹೋದರೆ ಇನ್ನಷ್ಟು ಗಲಾಟೆಗಳಾಗುತ್ತವೆಯೋ ಏನೋ” ಎಂದು ಕಿಚ್ಚ ಹೇಳಿದ್ದಾರೆ.
“ನೋಡಿ ಈಗ ನಾನು ಹೋಟೆಲ್ಉದ್ಘಾಟನೆಗೆ ಬರಲ್ಲ ಅಂದುಕೊಂಡಿದ್ದರು ಆದರೆ ಬಂದಿದ್ದೇನೆ. ಹಾಗೆಯೇ ರಾಜಕೀಯದ್ದು ಏನಾಗುತ್ತದೆಯೋ ನೋಡೋಣ. ಎಲ್ಲರೂ ನಾನು ಬರಲ್ಲ ಅಂದುಕೊಂಡಿದ್ದಾರೆ, ಬಂದಾಗ ಗೊತ್ತಾಗುತ್ತದೆ. ಒಂದೊಮ್ಮೆ ಬರಲಿಲ್ಲ ಎಂದರೆ ಬರಲಿಲ್ಲ ಅಷ್ಟೇ” ಎಂದಿದ್ದಾರೆ.
ʼಮ್ಯಾಕ್ಸ್ʼ ಸಿನಿಮಾದ ಬಗ್ಗೆ ಮಾತನಾಡಿದ ಅವರು, ಇನ್ನು ಹದಿನೈದು ದಿನದಲ್ಲಿ ಚಿತ್ರೀಕರಣ ಮುಕ್ತಾಯ. ಮೇನಲ್ಲಿ ಸಿನಿಮಾ ತೆರೆಗೆ ಬರಲಿದೆ” ಎಂದಿದ್ದಾರೆ.