‘ನರರಾಕ್ಷಸ’ನ ಸುತ್ತ ಹೊಸಬರ ಚಿತ್ತ
Team Udayavani, Apr 8, 2022, 12:21 PM IST
“ನಾನೇ ನರರಾಕ್ಷಸ’. ಹೀಗೊಂದು ಸಿನಿಮಾ ಸದ್ದಿಲ್ಲದೇ ಆರಂಭವಾಗಿ ಚಿತ್ರೀಕರಣ ಮುಗಿಸಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಮೈಸೂರಿನ ರಾಜ್ ಮನೀಶ್ ಈ ಚಿತ್ರದ ನಾಯಕ. ನಟನೆಯ ಜೊತೆಗೆ ನಿರ್ದೇಶನ ಕೂಡಾ ಇವರದ್ದೇ. ಈ ಚಿತ್ರವನ್ನು ಇವರ ತಾಯಿ ಬಿ.ರಾಧಾ ನಿರ್ಮಿಸಿದ್ದಾರೆ. ಇತ್ತೀಚೆಗೆ ಚಿತ್ರದ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ.
ಚಿತ್ರದ ಬಗ್ಗೆ ಮಾತನಾಡುವ ರಾಜ್ ಮನೀಶ್, “ನಮ್ಮ ಹೋಮ್ ಬ್ಯಾನರ್ನಲ್ಲಿ ನಮ್ಮ ತಾಯಿಯವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ನಾನು ಎರಡನೇ ಬಾರಿಗೆ ನಾಯಕನಾಗಿ ನಟಿಸುವ ಜೊತೆಗೆ ಮೊದಲ ಬಾರಿಗೆ ನಿರ್ದೇಶನ ಕೂಡಾ ಮಾಡಿದ್ದೇನೆ. ಪ್ರತಿಯೊಬ್ಬ ಮನಷ್ಯನ ಒಳಗೂ ಒಬ್ಬ ರಾಕ್ಷಸನಿರುತ್ತಾನೆ. ಚಿತ್ರದಲ್ಲಿರುವ ಎಲ್ಲ ಪಾತ್ರಗಳೂ ಸಮಯ ಬಂದಾಗ ಹೇಗೆ ರಾಕ್ಷಸರಾಗಿ ಬದಲಾಗುತ್ತಾರೆ ಎನ್ನುವುದೇ ಈ ಕಥೆಯ ತಿರುಳು. ನಮ್ಮ ಸಿನಿಮಾ ವೀಕ್ಷಿಸುವಾಗ ಮುಂದೆ ಹೀಗೇ ನಡೆಯುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಚಿತ್ರದ ಕೊನೆಯವರೆಗೂ ಕುತೂಹಲ ಉಳಿಸಿಕೊಂಡಿದ್ದೇವೆ’ ಎಂದರು.