ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
Team Udayavani, Jan 8, 2020, 10:32 AM IST
ಕನ್ನಡ ಚಿತ್ರರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುತ್ತ ಬಂದಿರುವ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ “2019ನೇ ಸಾಲಿನ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ’ ಘೋಷಣೆಯಾಗಿದೆ.
ಹಿರಿಯ ಚಿತ್ರ ನಿರ್ಮಾಪಕ ಕೆ. ಪ್ರಭಾಕರ್, ಪತ್ರಕರ್ತೆ ಎಸ್.ಜಿ. ತುಂಗಾ ರೇಣುಕಾ, ಖ್ಯಾತ ಹಿನ್ನೆಲೆ ಗಾಯಕಿ ಪಿ.ಸುಶೀಲ, ಹಿರಿಯ ನಿರ್ದೇಶಕ ಎಸ್. ಉಮೇಶ್, ಹಿರಿಯ ನಟಿ ಪ್ರಮೀಳಾ ಜೋಷಾಯ್, ಹಿರಿಯ ನಟ ರಮೇಶ್ ಭಟ್, ಶ್ರೀನಿವಾಸ ಪ್ರಭು, ನಿರ್ದೇಶಕ ರಮೇಶ್ ಇಂದಿರಾ, ಪಿ. ಶೇಷಾದ್ರಿ, ನಿರ್ದೇಶಕಿ ರೂಪಾ ರಾವ್, ಸಂಗೀತ ನಿರ್ದೇಶಕ ಸಾಗರ್ ಗುರುರಾಜ್, ಗೀತರಚನೆಕಾರ ಶ್ರೀಕಿನಾಲ್ ರಾಜ್ ಮೊದಲಾದವರು ಈ ಬಾರಿಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕನ್ನಡ ಚಿತ್ರರಂಗದ ಪ್ರಥಮ ಸಿನಿಮಾ ಪ್ರಚಾರಕರ್ತ ದಿ. ಡಿ.ವಿ ಸುಧೀಂದ್ರ ತಮ್ಮ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25ವರ್ಷ ತುಂಬಿದ ಸಂದರ್ಭದಲ್ಲಿ ಚಿತ್ರರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ನಿರ್ಮಾಪಕರು ಮತ್ತು ಹಿರಿಯ ಪತ್ರಕರ್ತರನ್ನು ಗೌರವಿಸುವ ಸಲುವಾಗಿ ತಮ್ಮ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಈ ಪ್ರಶಸ್ತಿಯನ್ನು ಆರಂಭಿಸಿದರು. ಆರಂಭದಲ್ಲಿ ಎರಡು ಪ್ರಶಸ್ತಿಯೊಂದಿಗೆ ಶುರುವಾದ ಈ ಪ್ರಶಸ್ತಿಗಳ ಸಂಖ್ಯೆ ಈಗ 11ಕ್ಕೇರಿದೆ. ಇದೇ ಜನವರಿ 25ರ ಶನಿವಾರ ಸಂಜೆ 5.30ಕ್ಕೆ ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯಲಿರುವ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 43ನೇ ವಾರ್ಷಿಕೋತ್ಸವದಲ್ಲಿ, ಚಿತ್ರರಂಗದ ಹಲವು ಗಣ್ಯರ ಉಪಸ್ಥಿತಿಯಲ್ಲಿ 2019ನೇ ಸಾಲಿನ 19ನೇ ವರ್ಷದ ಪ್ರಶಸ್ತಿ ಪ್ರದಾನ ನೆರವೇರಲಿದೆ.